Train Cancellation: ಬೆಂಗಳೂರು-ಹುಬ್ಬಳ್ಳಿ-ಮೈಸೂರು ರೈಲು 2 ದಿನ ಸಂಚಾರ ರದ್ದು: ಈ ರೈಲುಗಳ ಸೇವೆ ವಿಸ್ತರಣೆ, ಮಾಹಿತಿ
ಬೆಂಗಳೂರು, ಏಪ್ರಿಲ್ 02: ನೈಋತ್ಯ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವ ಪರಿಣಾಮವಾಗಿ ಬೆಂಗಳೂರಿನಿಂದ ಹೊರಡುವ ಎರಡು ಮಾರ್ಗಗಳ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಬೋಗಿಗಳ ಜೋಡಣೆ, ತಾತ್ಕಾಲಿಕ ನಿಲುಗಡೆ ಹಾಗೂ ವಿಶೇಷ ರೈಲುಗಳ ಸೇವೆ ವಿಸ್ತರಣೆ ಮಾಡಿರುವ ಬಗ್ಗೆ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಸುರಕ್ಷತಾ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಹಾಗೂ ಮೈಸೂರಿಗೆ ತೆರಳುವ ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮುಂದಿನ ಏಪ್ರಿಲ್ 6 ರಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ವಿಶೇಷ ರೈಲು (ಸಂಖ್ಯೆ 07339) ಮತ್ತು ಏಪ್ರಿಲ್ 7ರಂದು ಬೆಂಗಳೂರು-ಹುಬ್ಬಳ್ಳಿ ಮಧ್ಯದಲ್ಲಿ ಓಡಾಡುವ ರೈಲು (ಸಂಖ್ಯೆ 07340) ಗಳು ರದ್ದುಗೊಳಿಸಲಾಗಿವೆ.
ಅದೇ ರೀತಿ ಏಪ್ರಿಲ್ 7 ಬೆಂಗಳೂರು ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಮೈಸೂರಿಗೆ ಸಂಪರ್ಕ ಸಾಧಿಸುವ 'ಮೆಮು ವಿಶೇಷ' ರೈಲು (ಸಂಖ್ಯೆ 06255) ಹಾಗೂ ಏಪ್ರಿಲ್ 8ರಂದು ಮೈಸೂರಿನಿಂದ ಮರಳಿ ಬೆಂಗಳೂರಿಗೆ ಬರುವ ರೈಲು ( ಸಂಖ್ಯೆ-06560) ರದ್ದುಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ವೆಮು ರೈಲು ತಾತ್ಕಾಲಿಕ ನಿಲುಗಡೆ
ಜೋಲಾರಪೇಟೆ ಮತ್ತು ಬೆಂಗಳೂರು ಕೆಎಸ್ಆರ್ ನಿಲ್ದಾಣಗಳ ನಡುವೆ ಸಂಚರಿಸುವ ವೆಮು ರೈಲು (ಸಂಖ್ಯೆ 16519/16520) ಮೇ 30 ರವರೆಗೆ ಅಂದರೆ ಎರಡು ತಿಂಗಳ ಕಾಲ ಹೂಡಿ ರೈಲು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಮುಂದುವರಿಸಲಿದೆ ಎಂದು ಹೇಳಿದರು.

ವಿಶೇಷ ರೈಲು ಸೇವೆ ವಿಸ್ತರಣೆ
ಬೆಂಗಳೂರಿನ ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ವಿಶಾಖಪಟ್ಟಣಂ ನಡುವೆ ಸಂಪರ್ಕ ಸಾಧಿಸುವ ಸಾಪ್ತಾಹಿಕ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ (ಸಂಖ್ಯೆ-08543/08544) ರೈಲುಗಳ ಸೇವೆಯನ್ನು ಹಾಲಿ ಸಮಯ ಮತ್ತು ನಿಲುಗಡೆಯೊಂದಿಗೆ ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ವಲಯವು ನಿರ್ದೇಶಿಸಿದೆ.
ವಿಶಾಖಪಟ್ಟಣಂ ನಿಂದ ಪ್ರತಿ ಭಾನುವಾರ ಬೆಂಗಳೂರಿಗೆ ಬರುವ 'ವಿಶಾಖಪಟ್ಟಣಂ-ಬೆಂಗಳೂರು ಎಸ್ಎಂವಿಟಿ ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲು ಏಪ್ರಿಲ್ 4ರ ಬದಲಾಗಿ ಜೂನ್ 30ರವರೆಗೆ ಸೇವೆ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 31ರಂದು ಅದರ ಸೇವೆ ಕೊನೆಗೊಳ್ಳುತ್ತಿತ್ತು. ಅದನ್ನು ಈಗ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಪ್ರತಿ ಸೋಮವಾರ ಹೊರಡುವ (ಸಂಖ್ಯೆ 08544) ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಶಾಖಪಟ್ಟಣಂ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 7ರಿಂದ ಜುಲೈ 1ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications