ಬೆಳಿಗ್ಗೆ 4.30ಕ್ಕೆ ಕಂಡ ಪೌರ ಕಾರ್ಮಿಕನಿಗೆ ಭೇಷ್ ಎಂದ ಸುರೇಶ್ ಕುಮಾರ್
Recommended Video
ಬೆಂಗಳೂರು, ಮೇ 08: ಧಾರಾಕಾರ ಮಳೆ ಬಂದು ವಾತಾವರಣ ಶಾಂತವಾಗಿರುವಾಗ ನಾವೆಲ್ಲ ನಿದ್ರಾದೇವಿಯ ಸೆರಗಲ್ಲಿ ಬಂಧಿಯಾಗಿದ್ದರೆ ಕೆಲವರು ನಸುಕಲ್ಲೇ ಎದ್ದು ನಗರದ ಸ್ವಚ್ಛತೆಗೆ ಟೊಂಕಕಟ್ಟಿ ನಿಲ್ಲುತ್ತಾರೆ.

ಅವರು ಪೌರ ಕಾರ್ಮಿಕರು! ಅಂಥ ಪೌರ ಕಾರ್ಮಿಕರನ್ನು ರಾಜಾಜೀನಗರ ಶಾಸಕ ಸುರೇಶ್ ಕುಮಾರ್ 'ಸ್ವಚ್ಛತಾ ವೈದ್ಯ'ರೆಂದು ಕರೆಯುತ್ತಾರೆ. ಪೌರ ಕಾರ್ಮಿಕರಿಗೆ ಸ್ವಚ್ಛತಾ ವೈದ್ಯರೆಂಬ ಬಿರುದು ನೀಡಿದ್ದು ಏಕೆ ಎಂಬುದನ್ನು ಅವರೇ ವಿವರಿಸಿದ್ದಾರೆ. ಇಂದು ಬೆಳಿಗ್ಗೆ 4:30 ರ ಸುಮಾರಿಗೆ ಶಾಸಕರಿಗೆ ಸಿಕ್ಕ ನರಸಿಂಹ ಎಂಬ ಪೌರ ಕಾರ್ಮಿಕನ ಬಗ್ಗೆ ಅವರು ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಹಾಕಿದ ಸ್ಟೇಟಸ್ ನ ಯಥಾವತ್ ರೂಪ ಇಲ್ಲಿದೆ ನೋಡಿ...
"ಬೆಳಿಗ್ಗೆ 4.30 ಗಂಟೆಗೇ ಬಸವೇಶ್ವರನಗರ ಎಂಟನೇ ಮುಖ್ಯರಸ್ತೆಯನ್ನು ಗುಡಿಸುತ್ತಿದ್ದ ಬಿಬಿಎಂಪಿ ಪೌರಕಾರ್ಮಿಕ ನರಸಿಂಹನನ್ನು ಕಂಡೆ.
ಇಷ್ಟು ಬೆಳಿಗ್ಗೆಯೇ ಕಸ ಗುಡಿಸಲು ಬಂದಿರುವ ಕಾರಣ ಕೇಳಿದಾಗ ನರಸಿಂಹ ಹೇಳಿದ್ದು
"ಸರ್. ನಿನ್ನೆ ರಾತ್ರಿಮಳೆ ಬಂದಿದೆ. ಕಸ ಹೆಚ್ಚು ಸೇರಿರುತ್ತೆ. ಇನ್ನು ಸ್ವಲ್ಪ ಹೊತ್ತಾದರೆ ಗಾಡಿಗಳು ನಿಲ್ಲುವುದು, ಓಡಾಡುವುದು ಪ್ರಾರಂಭವಾಗುತ್ತದೆ.ಅದಕ್ಕೇ ಈಗಲೇ ಬಂದು ಗುಡಿಸುವುದು ಒಳ್ಳೇದು". ಎಂದು.
ಅದಕ್ಕೇ ನಗರದ ಪೌರ ಕಾರ್ಮಿಕರನ್ನು ನಾನು ಯಾವಾಗಲೂ ನಗರದ ಸ್ವಚ್ಛತಾ ವೈದ್ಯರೆಂದು ಕರೆಯುವುದು. ನಮಗೆ ಅನೇಕ ಕಾಯಿಲೆಗಳು ಬರದಂತೆ ಅವರು ಎಷ್ಟು ಶ್ರಮ ವಹಿಸುತ್ತಾರೆ. ಆದರೆ ಅವರನ್ನು ಗುರುತಿಸುವುದು, ಮೆಚ್ಚುಗೆ ವ್ಯಕ್ತ ಪಡಿಸುವುದು, ಬೆನ್ನು ತಟ್ಟುವುದು ಕಡಿಮೆಯೇ.
ನರಸಿಂಹ ಬಸವಣ್ಣ ನವರ ವಚನ ಬಹುಶಃ ಓದಿಲ್ಲ. ಆದರೆ ತನ್ನ ಕಾಯಕದ ಮಹತ್ವ ಈತನಿಗೆ ಗೊತ್ತುಂಟು.
ಬಸವಜಯಂತಿಯ ಮಾರನೆಯ ದಿನ ಬೆಳಿಗ್ಗೆ 4.30 ಗಂಟೆಗೇ ತನ್ನ ಕಾಯಕದಲ್ಲಿ ತೊಡಗಿರುವ ನರಸಿಂಹನಿಗೊಂದು ನಮ್ಮೆಲ್ಲರ ಮೆಚ್ಚುಗೆಯ ಭೇಷ್ ಅನ್ನೋಣವೇ?"












Click it and Unblock the Notifications