Suraksha 75: ಬೆಂಗಳೂರಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ತಡೆಗೆ 75 ಜಂಕ್ಷನ್ಗಳ ನವೀಕರಣ: ಬಿಬಿಎಂಪಿ-ಬಿಟಿಪಿ
ಬೆಂಗಳೂರು, ಏಪ್ರಿಲ್ 02: ಕರ್ನಾಟಕದ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಸಂಚಾರ ದಟ್ಟಣೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ದಿನೇ ದಿನೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯ ನಿಯಂತ್ರಣ ಹಾಗೂ ಸುಗಮ ಸಂಚಾರ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರ ಹೊಸ ಪ್ಲಾನ್ವೊಂದನ್ನು ರೂಪಿಸಿದೆ.
ಬೆಂಗಳೂರಿನಲ್ಲಿ ಓಡಾಡುವವ ಪ್ರಯಾಣಿಕರು, ವಾಹನ ಸವಾರರ ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಸುಗಮ ಸಂಚಾರಕ್ಕೆ ಸಹಾಯ ಮಾಡುವ ರೀತಿಯಲ್ಲಿ 'ಸುರಕ್ಷಾ 75' ಎಂಬ ಮಿಷನ್ ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸ್ (BTP) ಆರಂಭಿಸಿದೆ.
ಬಿಬಿಎಂಪಿ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರು ಸಾರ್ವಜನಿಕರಿಗೆ/ಪಾದಚಾರಿಗಳಿಗೆ ಮತ್ತು ಪ್ರಯಾಣಿಕರಿಗೆ ಟೆಕ್ ಕ್ಯಾಪಿಟಲ್ನ ಜಂಕ್ಷನ್ಗಳನ್ನು ಸುರಕ್ಷಿತವಾಗಿಸಲು ಆರಂಭಿಸಿದ ಈ 'ಸುರಕ್ಷಾ 75' ಮಿಷನ್ ಅಡಿ ಬೆಂಗಳೂರಿನ 75 ಜಂಕ್ಷನ್ಗಳನ್ನು ನವೀಕರಿಸಲು ನಿರ್ಧರಿಸಿದೆ. ಸಂಚಾರ ಸುರಕ್ಷತೆ ಹೆಚ್ಚಿಸಿ ದಟ್ಟಣ ಕಡಿಮೆ ಮಾಡಲು ಜಂಕ್ಷನ್ ನವೀಕರಣ ಹಾಗೂ ಅಗತ್ಯಕ್ಕೆ ತಕ್ಕಂತೆ ಮರುವಿನ್ಯಾಸಗೊಳಿಸಲು ನಿರ್ಧಾರ ಮಾಡಿದೆ.
Karnataka Election 2023: ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜೊತೆ ಬಿಬಿಎಂಪಿ ಮಹತ್ವದ ಸಭೆ, ಹೇಳಿದ್ದೇನು?
75 ಜಂಕ್ಷನ್: ಬಿಬಿಎಂಪಿ ಆಯುಕ್ತರು ಹೇಳೊದೇನು?
'ಸುರಕ್ಷಾ 75' ಮಿಷನ್ ಕುರಿತು ಬೆಂಗಳೂರು ಸಂಚಾರ ವಿಭಾಗದ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ಅವರು ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರು ನಗರದ ರಸ್ತೆಗಳಲ್ಲಿ ದಿನನಿತ್ಯ ಸುಮಾರು 2000 ರಿಂದ 2500 ಹೊಸ ವಾಹನಗಳು ಬರುವುದರಿಂದ ನಗರವು ವಾಹನಗಳ ಇಕ್ಕಟ್ಟು ಪ್ರದೇಶವಾಗಿ ಹೊರ ಹೊಮ್ಮುತ್ತಿದೆ.
ಸುಗಮ ಸಂಚಾರ ನಿರ್ವಹಣೆ ಮತ್ತು ನಿವಾಸಿಗಳ ಸುರಕ್ಷತೆಗಾಗಿ, ನಾಗರಿಕ ಸಂಸ್ಥೆಯ ಸಹಯೋಗದೊಂದಿಗೆ ಸುರಕ್ಷಾ 75 ಮಿಷನ್ ಅನ್ನು ಆರಂಭಿಸಿದ್ದೇವೆ. ಈ ನಮ್ಮ ಉಪಕ್ರಮವು ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯ ಟ್ರಾಫಿಕ್ ವಾತಾವರಣವನ್ನೇ ಬದಲಾಯಿಸುವಲ್ಲಿ ಗೇಮ್ ಚೇಂಜರ್ ಪಾತ್ರವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವೀಕರಣ ವೇಳೆ ನಾಗರಿಕರು ಸಹಕರಿಸಿ: ಬಿಬಿಎಂಪಿ ಮನವಿ
ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಉದ್ದೇಶಿತ ಈ 75 ಜಂಕ್ಷನ್ಗಳನ್ನು ಮರು ವಿನ್ಯಾಸಗೊಳಿಸುವಾಗ ಕೆಲವು ಅನಾನುಕೂಲತೆಗಳು ಉಂಟಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭಗಳಲ್ಲಿ ನಾಗರಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಈಗಾಗಲೇ ಪೊಲೀಸ್ ಇಲಾಖೆ ಜೊತೆ ಸೇರಿ ನಗರದಲ್ಲಿ ನಿರಂತರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ 75 ಜಂಕ್ಷನ್ ಅನ್ನು ಗುರುತು ಮಾಡಿದ್ದೇವೆ. ರೂಪಾಯಿ ಇದಕ್ಕಾಗಿ ರಾಜ್ಯ ಬಜೆಟ್ನಲ್ಲಿ 150 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಎಲ್ಲ ಜಂಕ್ಷನ್ಗಳನ್ನು ಬಿಬಿಎಂಪಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥುರು ಮರು ವಿನ್ಯಾಸದ ಮೇಲ್ವಿಚಾರಣೆ ಮಾಡಲಿದ್ದಾರೆ. ನವೀಕರಣದ ದುರಸ್ತಿ ಕಾರ್ಯಗಳಿಂದ ತಾತ್ಕಾಲಿಕ ತೊಂದರೆ, ಸಂಚಾರ ಅಡಚಣೆ ಉಂಟಾಗಬಹುದು. ಆದ್ದರಿಂದ ಸಾರ್ವಜನಿಕರೆಲ್ಲರು ಸಹಕರಿಸಬೇಕು ಎಂದು ಅವರು ಹೇಳಿದರು.
ಇನ್ನೂ ಈ ವರ್ಷ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ಪ್ರಸ್ತಕ ಸಾಲಿನ ಬಜೆಟ್ನಲ್ಲಿ ಬೆಂಗಳೂರು ಸಂಚಾರ ದಟ್ಟಣೆಯ ನಿಯಂತ್ರಣಕ್ಕೆ ಆದ್ಯತೆ ನೀಡಿದೆ. ಅದಕ್ಕಾಗಿ ನಗರದಲ್ಲಿ ಐದು ಕಿಲೋಮೀಟರ್ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ 350 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಜೊತೆಗೆ 120 ಕಿಲೋಮೀಟರ್ ವೈಟ್ ಟಾಪಿಂಗ್ ಗೆ 1000 ಕೋಟಿ ಅನುದಾನ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇನ್ನೂ ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಚಾರದ ದಟ್ಟಣೆ ನಿಭಾಯಿಸಲೆಂದೇ ನಾಲ್ಕೈದು ಫ್ಲೈಓವರ್ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.