ವೀಣೆಯ ಸುಮಧುರ ನಾದದ ಹಿಂದಿದೆ ನೂರಾರು ದಲಿತರ ಬೆವರು..!
ಸಪ್ತ ಸ್ವರಗಳ ಗೊತ್ತಿಲ್ಲದ ಮುಗ್ಧ ಜನರು ಇವರು. ಅದರೆ ಸಂಗೀತ ಲೋಕಕ್ಕೆ ಇವರು ಅಪಾರ ಕೊಡುಗೆ ಕೊಟ್ಟ ಕುಶಲಿಗಳು. ಕೆಲವರ ಕೈಯಲ್ಲಿ ಮಾತ್ರ ಮಿಡಿಯುತ್ತೆ ವೀಣೆ. ಇದೇ ವೀಣೆ ಇಲ್ಲಿನ ಕುಗ್ರಾಮದವರ ಕೈಯಲ್ಲಿ ರೂಪ ಪಡೆಯುತ್ತೆ. ಇನ್ನೊಂದು ವಿಶೇಷ ಅಂದ್ರೆ ದಲಿತರ ಕೈಯಲ್ಲಿಯೇ ವೀಣೆ ತಯಾರಗುತ್ತೆ ಅನ್ನೊದು ಮತ್ತಷ್ಟು ವಿಶೇಷ. ಭಾರತೀಯ ಸಂಗೀತಕ್ಕೂ ವೀಣೆಗೂ ಬಿಡಿಸಲಾರದ ನಂಟು.
ಸಾಕ್ಷತ್ ಶಿವನೇ ವೀಣಾವಾದನ ಕಂಡು ಹಿಡಿದ ಅನ್ನುವ ಪುರಾಣ ಕಥೆ ಇದೆ. ಹಾಗೆಯೇ ವಿದ್ಯಾ ದೇವತೆ ಅಂತಾನೇ ಕರೆಸಿಕೊಳ್ಳುವ ಸರಸ್ವತಿಯ ಕೈಯಲ್ಲಿ ವೀಣೆ ಇರೋದನ್ನ ನಾವು ನೋಡಿದ್ದೆವೆ. ಹೌದು ಇಂತಹದೊಂದು ವೀಣೆಯನ್ನ ನುಡಿಸೊದು ಸುಲಭ ಮಾತಲ್ಲ. ಸುಮಾರು 24 ಮೆಟ್ಟಿಲುಗಳ ಸಂಗೀತದ ಲಯವನ್ನು ಹೊಂದಿರುವ ವೀಣೆಯನ್ನ ನುಡಿಸಲು ಸಾಕಷ್ಟು ವಿದ್ಯಾಪಾರಂಗತರಾಗಿರಬೇಕು.
ಸರಸ್ವತಿಯ ಅನುಗ್ರಹ ಇದ್ದವರಿಗೆ ಮಾತ್ರ ವೀಣೆ ನುಡಿಸಲು ಸಾಧ್ಯ. ಅದ್ರೆ ಇಂತಹ ವೀಣೆ ತಯಾರಗೋದು ಮಾತ್ರ ಸ್ವರಗಳ ಸಂಬಂಧವೇ ಗೊತ್ತಿಲ್ಲದ ದಲಿತರ ಕೈಯಲ್ಲಿ. ಕೈಯಲ್ಲಿ ಸುತ್ತಿಗೆ ಹಿಡಿದು ಕೆತ್ತನೆ ಕೆಲಸದಲ್ಲಿ ತಲ್ಲಿನರಾಗಿರುವ ಕುಶಲಕರ್ಮಿ, ಮರದ ತುಂಡಿಗೆ ವೀಣೆಯ ರೂಪ ಕೊಡುತ್ತಿರುವ ಶಿಲ್ಪಿ, ವೀಣೆಯ ಸ್ವರೂಪವನ್ನ ಪಡೆದುಕೊಂಡಿರುವ ವಾದನಕ್ಕೆ ಮೆರಗು ಕೊಡುತ್ತಿರುವ ವಯೋವೃದ್ಧ, ಸಿದ್ಧವಾಗಿರುವ ವೀಣೆಗಳನ್ನ ತೋರಿಸುತ್ತಿರುವ ಯುವಕ...
ಇಂತಹದೊಂದು ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಯ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರ ಗ್ರಾಮ. ಸುಮಾರು 200 ಕುಟುಂಬಗಳಿರುವ ಒಂದು ಕುಗ್ರಾಮ ಸಿಂಪಾಡಿಪುರ. ಆದರೆ ಇಂತಹ ಗ್ರಾಮವೊಂದು ವೀಣೆ ತಯಾರಿಕೆಯಿಂದ ಪ್ರಸಿದ್ಧಿಯನ್ನ ಪಡೆಯುತ್ತಿದೆ. ಗ್ರಾಮದಲ್ಲಿನ ಸುಮಾರು 40 ಕುಟುಂಬಗಳು ವೀಣೆ ತಯಾರಿಕೆಯನ್ನೇ ತಮ್ಮ ವೃತ್ತಿ ಮಾಡಿಕೊಂಡಿದ್ದಾರೆ.

ದಲಿತರಿಂದ ವೀಣೆ ತಯಾರಿಕೆ
ಇವರೆಲ್ಲ ದಲಿತ ಸಮುದಾಯಕ್ಕೆ ಸೇರಿದವರೆನ್ನುವುದು ಇಲ್ಲಿನ ವಿಶೇಷ. 40 ವರ್ಷದ ಹಿಂದೆ ಗ್ರಾಮದಲ್ಲಿ ಶುರುವಾದ ವೀಣೆ ತಯಾರಿಕೆ ಇವತ್ತಿಗೂ ನಿಂತ್ತಿಲ್ಲ. ಅಪ್ಪನಿಂದ ಮಕ್ಕಳು ಕಲಿತರೆ ಅವರಿಂದ ಇವತ್ತು ಮೊಮ್ಮಕ್ಕಳು ಕೂಡ ವೀಣೆ ತಯಾರಿಕೆಯನ್ನು ಕಲಿಯುತ್ತಿದ್ದಾರೆ. ಹಲಸಿನ ಮರದಲ್ಲಿ ವೀಣೆಯನ್ನು ತಯಾರಿಸಲಾಗುವುದು. ಇದಕ್ಕಾಗಿ ಸುತ್ತಮುತ್ತಲಿನ ಗ್ರಾಮದಲ್ಲಿರುವ ಹಲಸಿನ ಮರಗಳನ್ನ ಬಳಸಿ ಕೊಳ್ಳಲಾಗುತ್ತದೆ. 100 ರಿಂದ 200 ವರ್ಷಹಳೆಯ ಹಲಸಿನ ಮರ ವೀಣೆ ತಯಾರಿಕೆಗೆ ಸೂಕ್ತವಾಗಿದ್ದು. ಇಂತಹ ಮರವನ್ನ ರೈತರಿಂದ ಕೊಂಡು ವೀಣೆ ತಯಾರಿಸಲಾಗುತ್ತದೆ.

ಪದವೀಧರರಿಂದಲೂ ವೀಣೆ ತಯಾರಿಕೆ
ಒಂದು ವೀಣೆ ತಯಾರಿಸಲು ಒಂದು ವಾರ ಬೇಕಾಗುತ್ತೆ. ಒಬ್ಬ ವಾರಕ್ಕೆ ಒಂದು ವೀಣೆಯನ್ನ ತಯಾರಿಸಬಹುದು. ಹೀಗೆ ತಯಾರಾದ ವೀಣೆಯನ್ನು ಬೆಂಗಳೂರಿನ ಶೋ ರೂಮ್ ನಲ್ಲಿ ಮಾರಾಟ ಮಾಡಲಾಗುತ್ತೆ. ಮೊದಲಿಗೆ ಅನಕ್ಷರಸ್ತರಿಂದ ಮಾತ್ರ ವೀಣೆ ತಯಾರಗುತ್ತಿತ್ತು. ಅದರೆ ಈಗ ಪದವೀಧರರು ಕೂಡ ವೀಣೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಅಪ್ಪನಿಂದ ಕಲಿತ ವಿದ್ಯೆಯನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಸ್ವಾವಲಂಬನೆಯ ದಾರಿಯನ್ನು ಕಂಡುಕೊಂಡಿದ್ದಾರೆ.

ನಾದಬ್ರಹ್ಮ ಕೆತ್ತನೆ
ಅಂದಹಾಗೇ ವೀಣಾ ತಯಾರಿಕೆಯಲ್ಲಿ ಕಷ್ಟದ ಕೆಲಸ ಅಂದ್ರೆ ವೀಣೆಯ ಬಹುಮುಖ್ಯ ಭಾಗವಾದ ನಾದಬ್ರಹ್ಮದ ಕೆತ್ತನೆ ಮಾಡೋದು. ಇದೊಂದು ಸವಾಲಿನ ಕೆಲಸವಾಗಿದ್ದು. ತಾಳ್ಮೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದ್ದಾಗ ಮಾತ್ರ ನಾದಬ್ರಹ್ಮನ ರೂಪ ಬರುತ್ತೆ. 80 ವರ್ಷದ ಪೆನ್ನ ಒಬ್ಬಯ್ಯನವರ ಪ್ರಭಾವದಿಂದ ಇವತ್ತು ಸಿಂಪಾಡಿಪುರ ಪ್ರಸಿದ್ಧಿಯನ್ನ ಪಡೆದಿದೆ. ಇವರು ಗ್ರಾಮದಲ್ಲಿ ವೀಣಾ ತಯಾರಿಕೆಗೆ ಬುನಾದಿ ಹಾಕಿದವರು.

ಸಾರ್ಥಕ ಕಾರ್ಯ
ಸುಮಾರು ನೂರಾರು ಜನರಿಗೆ ವೀಣೆ ತಯಾರಿಕೆ ವಿದ್ಯೆ ಹೇಳಿ ಕೊಡುವ ಮೂಲಕ ಬದುಕಿನ ದಾರಿಯನ್ನ ತೊರಿಸಿದ್ದಾರೆ. ಪೆನ್ನ ಒಬ್ಬಯ್ಯನವರ ದಯೆಯಿಂದ ಇವತ್ತು ಇಲ್ಲಿನ ಸುಮಾರು 40 ಗ್ರಾಮದಲ್ಲಿ ವೀಣೆಗಳು ತಯಾರಾಗುತ್ತಿವೆ. ಗ್ರಾಮದ ಬಹುತೇಕ ಮಂದಿಗೆ ವೀಣೆ ತಯಾರಿಕೆಯನ್ನ ಹೇಳಿಕೊಟ್ಟ ಪೆನ್ನ ಒಬ್ಬಯ್ಯ ಅವರಿಗಿರುವ ಒಂದೇ ವಿಷಾದ ಎಂದರೆ ತಮ್ಮ ಮಕ್ಕಳೇ ವೀಣೆ ತಯಾರಿಕೆಯನ್ನು ಕಲಿತಿಲ್ಲ ಎಂಬುದು! ವೀಣೆಯ ಸುಮಧುರ ನಾದ ಕೇಳಿ ತಲೆಬಾಗುವ ನಾವು ಅದರ ಹಿಂದಿರುವ ನೂರಾರು ಜನ ಪರಿಶ್ರಮವನ್ನು ನೆನಪಿಸಿಕೊಂಡರೆ ಅವರ ಶ್ರಮವೂ ಸಾರ್ಥಕ.












Click it and Unblock the Notifications