ಗೋಲಿಬಾರ್ ಗೆ ಸರ್ಕಾರ ಆದೇಶ ನೀಡಿರಲಿಲ್ಲ: ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 20: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ರಾಜ್ಯ ಸರ್ಕಾರ ಆದೇಶ ನೀಡಿರಲಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ಮತ್ತು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ (ಶನಿವಾರ) ಮಂಗಳೂರಿಗೆ ತೆರಳಿ ಗೋಲಿಬಾರ್ ಮಾಡಿದ ಪರಿಸ್ಥಿತಿಯ ಬಗ್ಗೆ ವಾಸ್ತವ ಸ್ಥಿತಿ ಅರಿತುಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
'ಗಲಭೆಗಳಿಗೆ ಕಾಂಗ್ರೆಸ್ ಪ್ರಚೋದನೆ ನೀಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ತಿಳಿದವರು, ಅವರು ಸರ್ಕಾರದ ವಿರುದ್ಧ ಸುಖಾ-ಸುಮ್ಮನೆ ಆರೋಪ ಮಾಡಬಾರದು' ಎಂದು ಹೇಳಿದರು.
ಮಂಗಳೂರು ಗೋಲಿಬಾರ್ ನಲ್ಲಿ ಮೃತರಾದ ಇಬ್ಬರ ಕುಟುಂಬಕ್ಕೆ ಪರಿಹಾರದ ಬಗ್ಗೆ ನಾಳೆ ಮಂಗಳೂರಿನಲ್ಲಿಯೇ ಮಾತನಾಡುವುದಾಗಿಯೂ ಸಿಎಂ ಹೇಳಿದರು.
ಕೇರಳದ ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕೇರಳದ 50-60 ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂಬುದು ಸುಳ್ಳು, ಸೂಕ್ತ ದಾಖಲೆ ಇಲ್ಲದ 7-8 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು, ಅವರನ್ನು ಸೂಕ್ತ ಭದ್ರತೆಯೊಂದಿಗೆ ಕೇರಳಕ್ಕೆ ಕಳುಹಿಸಲಾಗುವುದು ಎಂದರು.