ನಾವೇನು ಸನ್ಯಾಸಿಗಳಲ್ಲ, ರಾಜಕೀಯ ಮಾಡೋಕೆ ಇರೋದು: ಆರ್ ಅಶೋಕ್
ಬೆಂಗಳೂರು, ಫೆಬ್ರವರಿ 2: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಬಜೆಟ್ ಮಾಡುವುದೇ ಅನುಮಾನವಾಗಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ನ 20-25 ಶಾಸಕರು ನಾಯಕರ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಒಳಜಗಳಕ್ಕೆ ಬಿಜೆಪಿಯನ್ನು ದೂಷಿಸುವುದು ಸರಿಯಲ್ಲ ಎಂದು ಅಶೋಕ್ ಕಿಡಿಕಾರಿದ್ದಾರೆ.
ನಾವೇನು ಸನ್ಯಾಸಿಗಳಲ್ಲ. ನಾವು ಕೂಡ ರಾಜಕೀಯ ಮಾಡುವುದಕ್ಕೆ ಇರುವುದು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಲಿ. ಆ ಸಂದರ್ಭವನ್ನು ನಾವು ಉಪಯೋಗಿಸಿಕೊಳ್ಳುತ್ತೇವೆ. ಆದರೆ ನಾವಾಗಿಯೇ ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ 20ಕ್ಕೂ ಹೆಚ್ಚು ಶಾಸಕರು ಪಕ್ಷಗಳ ನಾಯಕರ ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಶುಕ್ರವಾರ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುವುದೇ ಅನುಮಾನವಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಆರ್ಥಿಕ ನೆರವು ಲಾಲಿಪಾಪ್ ಎಂದು ಕಾಂಗ್ರೆಸ್ನವರು ಟೀಕಿಸುತ್ತಿದ್ದಾರೆ. ನಾವು ಲಾಲಿಪಾಪ್ ಆದರೂ ನೀಡಿದ್ದೇವೆ. 60 ವರ್ಷ ಆಳಿದವರು ಕಡಲೆಪಾಪ್ ಕೂಡ ನೀಡಿಲ್ಲ.
ಹಾಸನದ ರೈತರ ಸಾಲ ಮನ್ನಾ ಮಾಡುವ ಬಜೆಟ್ ಇದಲ್ಲ. ರೈತ ಬದುಕಿರುವವರೆಗೂ ಪ್ರತಿ ವರ್ಷ 6,000 ರೂಪಾಯಿ ಸಿಗುತ್ತದೆ. ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಒಂದು ಬಾರಿಗೆ ಮಾತ್ರ. ಮೋದಿಯವರ ಯೋಜನೆ ಜೀವನ ಪರ್ಯಂತ ಇರುತ್ತದೆ ಎಂದು ಲೇವಡಿ ಮಾಡಿದ್ದಾರೆ.












Click it and Unblock the Notifications