Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ

ಬೆಂಗಳೂರು: ಖ್ಯಾತ ಆಧ್ಯಾತ್ಮಿಕ ಚಿಂತಕ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಎಂ (ಮುಮ್ತಾಜ್ ಅಲಿ) ಅವರ ಲೇಖನಿಯಿಂದ ಮೂಡಿಬಂದಿರುವ 'ಉಪನಿಷತ್ತುಗಳು ಮತ್ತು ಜೆ. ಕೃಷ್ಣಮೂರ್ತಿ' ಎಂಬ ನೂತನ ಕೃತಿಯು ಇಂದು (ಏಪ್ರಿಲ್ 13ರಂದು) ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಪ್ರಾಚೀನ ಭಾರತೀಯ ಜ್ಞಾನಪರಂಪರೆ ಮತ್ತು ಆಧುನಿಕ ತತ್ವಚಿಂತನೆಗಳ ನಡುವಿನ ಸೇತುವೆಯಂತಿರುವ ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು 'ದಿ ಸತ್ಸಂಗ್ ಫೌಂಡೇಶನ್' ಮತ್ತು 'ಪೆಂಗ್ವಿನ್ ಇಂಡಿಯಾ' ಜಂಟಿಯಾಗಿ ಆಯೋಜಿಸಿವೆ.

ಕಾರ್ಯಕ್ರಮದಲ್ಲಿ ಶ್ರೀ ಎಂ ಮತ್ತು ಖ್ಯಾತ ವಾಸ್ತುಶಿಲ್ಪಿ, ಸಿಎನ್‌ಟಿ ಆರ್ಕಿಟೆಕ್ಟ್ಸ್ ಮುಖ್ಯಸ್ಥ ಪ್ರೇಮ್ ಚಂದಾವರ್ಕರ್ ನಡುವಿನ ಸಂವಾದ ಪ್ರಮುಖ ಆಕರ್ಷಣೆಯಾಗಿದ್ದು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವೂ ಇರಲಿದೆ. ಈ ಸಂವಾದವು ಉಪನಿಷತ್ತುಗಳ ಪ್ರಾಚೀನ ಜ್ಞಾನ ಮತ್ತು ಜೆ. ಕೃಷ್ಣಮೂರ್ತಿ ಅವರ ಆಧುನಿಕ ತತ್ವಶಾಸ್ತ್ರದ ನಡುವಿನ ಸಂಬಂಧವನ್ನು ಪರಿಚಯಿಸಲಿದೆ.

Sri M

ಈ ಕೃತಿ ಉಪನಿಷತ್ತುಗಳ ಪಾರಂಪರಿಕ ಜ್ಞಾನ ಮತ್ತು ಜೆ.ಕೃಷ್ಣಮೂರ್ತಿ ಅವರ ತತ್ತ್ವ ಚಿಂತನೆಗಳ ನಡುವಿನ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಆಳವಾಗಿ ಪರಿಶೀಲಿಸುತ್ತದೆ. ಹಿಂದೂ, ಇಸ್ಲಾಂ, ಕ್ರೈಸ್ತ ಮತ್ತು ಬೌದ್ಧ ಧರ್ಮಗಳ ಕುರಿತು ಶ್ರೀ ಎಂ ಅವರ ವಿಶಾಲ ಅನುಭವದ ಆಧಾರದ ಮೇಲೆ ಈ ಪುಸ್ತಕವು ಧರ್ಮ, ಸತ್ಯ ಮತ್ತು ಆತ್ಮಾನ್ವೇಷಣೆ ಕುರಿತು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತದೆ.

ಕಾರ್ಯಕ್ರಮದ ವಿವರ

ಈ ವಿಶೇಷ ಕಾರ್ಯಕ್ರಮವು ಇಂದು ಸಂಜೆ ನಡೆಯಲಿದೆ. ಮಲ್ಲೇಶ್ವರಂನ 16ನೇ ಕ್ರಾಸ್‌ನಲ್ಲಿರುವ ಐತಿಹಾಸಿಕ ಚೌಡಯ್ಯ ಸ್ಮಾರಕ ಭವನ ಈ ಬೌದ್ಧಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ವೇದಿಕೆಯಾಗಲಿದೆ. ಕಾರ್ಯಕ್ರಮವು ಸಂಜೆ 6 ಶುರುವಾಗಲಿದೆ. ಕೃತಿ ಬಿಡುಗಡೆಯ ಜೊತೆಗೆ ಲೇಖಕ ಶ್ರೀ ಎಂ ಅವರೊಂದಿಗೆ ವಿಶೇಷ ಸಂವಾದವನ್ನು ಏರ್ಪಡಿಸಲಾಗಿದೆ. ಆಧ್ಯಾತ್ಮಿಕ ಆಸಕ್ತರು ಮತ್ತು ಓದುಗರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನವಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಘಟಕರನ್ನು 9844307580 ಅಥವಾ 9980984608 ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ. ಸಾಹಿತ್ಯ ಮತ್ತು ಆಧ್ಯಾತ್ಮದ ಕುರಿತು ಆಳವಾದ ಒಳನೋಟಗಳನ್ನು ಪಡೆಯಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ.

ಶ್ರೀ ಎಂ ಅವರ ಕುರಿತು

ಕೇರಳದಲ್ಲಿ ಮುಮ್ತಾಜ್ ಅಲಿ ಎಂಬ ಹೆಸರಿನಲ್ಲಿ ಜನಿಸಿದ ಶ್ರೀ ಎಂ, ಆಧ್ಯಾತ್ಮಿಕ ಗುರು, ಶಿಕ್ಷಣತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದಾರೆ. ಅವರು ಸ್ಥಾಪಿಸಿದ ಸತ್ಸಂಗ್ ಫೌಂಡೇಶನ್ ಶಿಕ್ಷಣ, ಆತ್ಮವಿಕಾಸ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಇವರು ನಿರ್ಮಿಸಿರುವ ಆಧ್ಯಾತ್ಮಿಕ ಕೇಂದ್ರ ಮತ್ತು ಶಾಲೆಗಳು ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಏಳಿಗೆಗಾಗಿ ಶ್ರಮಿಸುತ್ತಿವೆ. ಇವರು ಯೋಗ, ಧ್ಯಾನ ಮತ್ತು ಉಪನಿಷತ್ತುಗಳ ಸಾರವನ್ನು ಅತ್ಯಂತ ಸರಳವಾಗಿ ಸಾಮಾನ್ಯ ಜನರಿಗೆ ಉಣಬಡಿಸುತ್ತಿದ್ದಾರೆ.

2015-16ರಲ್ಲಿ ನಡೆದ 'ವಾಕ್ ಆಫ್ ಹೋಪ್' ಮೂಲಕ ದೇಶದಾದ್ಯಂತ 7,500 ಕಿಲೋಮೀಟರ್ ಪಾದಯಾತ್ರೆ ನಡೆಸಿ ಸಾಮರಸ್ಯ ಮತ್ತು ಶಾಂತಿಗೆ ಸಂದೇಶ ಸಾರಿದ ಅವರು, ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. 2020ರಲ್ಲಿ ಸಮಾಜ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಶ್ರೀ ಎಂ ಅವರು ಕೇವಲ 19ನೇ ವಯಸ್ಸಿನಲ್ಲಿ ಸತ್ಯಾನ್ವೇಷಣೆಗಾಗಿ ಹಿಮಾಲಯಕ್ಕೆ ತೆರಳಿದರು. ಅಲ್ಲಿನ ವ್ಯಾಸ ಗುಹೆಯಲ್ಲಿ ತಮ್ಮ ಗುರುಗಳಾದ ಮಹೇಶ್ವರ್ ನಾಥ್ ಬಾಬಾಜಿ ಅವರ ಮಾರ್ಗದರ್ಶನದಲ್ಲಿ ಮೂರೂವರೆ ವರ್ಷಗಳ ಕಾಲ ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆ ಮಾಡಿದರು. ಜಾತಿ, ಧರ್ಮಗಳ ಹಂಗಿಲ್ಲದೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವುದೇ ಇವರ ಸಿದ್ಧಾಂತ. ಶ್ರೀ ಎಂ ಅವರ ಆತ್ಮಕಥೆಯಾದ 'ಅಪ್ರೆಂಟಿಸ್ ಟು ಎ ಹಿಮಾಲಯನ್ ಮಾಸ್ಟರ್' (Apprentice to a Himalayan Master) ಜಾಗತಿಕ ಮಟ್ಟದಲ್ಲಿ ಭಾರಿ ಮೆಚ್ಚುಗೆ ಪಡೆದಿದೆ. ಇದು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು, ಆಧ್ಯಾತ್ಮಿಕ ಆಸಕ್ತರಿಗೆ ದಾರಿದೀಪವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+