ಬಿಡುಗಡೆಯಾಗಿರುವ ಪರಿಹಾರ ಹಣ ಮೊದಲು ಖರ್ಚು ಮಾಡಿ : ನಳಿನ್ ಕುಮಾರ್
ಬೆಂಗಳೂರು, ಅಕ್ಟೋಬರ್ 5: ಈಗ ರಾಜ್ಯಕ್ಕೆ 1200 ಕೋಟಿ ರೂ.ಬಿಡುಗಡೆ ಮಾಡಿದೆ. ಇದನ್ನು ಖರ್ಚು ಮಾಡಿ ರಾಜ್ಯ ಸರ್ಕಾರ ಬಳಕೆ ಪ್ರಮಾಣಪತ್ರ ಕೊಟ್ಟ ಬಳಿಕ ಎರಡನೇ ಹಂತದಲ್ಲಿ ಹಣ ಬಿಡುಗಡೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ 3000 ಕೋಟಿ ರೂ.ಖರ್ಚು ಮಾಡಿರುವುದರಿಂದ ಬಳಕೆ ಪ್ರಮಾಣಪತ್ರವನ್ನು ಬೇಗ ಕೊಡುವುದು ಸುಲಭವಾಗುತ್ತದೆ.
ನೆರೆಯಲ್ಲಿ ವೈಯಕ್ತಿಕ ಆಸ್ತಿ ನಷ್ಟವಾಗಿರುವ ಶಾಸಕರು ಮತ್ತು ಸಂಸದರು ಪರಿಹಾರದ ಹಣವನ್ನು ಬಿಟ್ಟುಕೊಡಿ ಎಂದು ಸೂಚನೆ ನೀಡಲು ಸಾಧ್ಯವಿಲ್ಲ.ಆದರೆ ಅವರಾಗಿಯೇ ಅರಿತುಕೊಂಡು ಪರಿಹಾರವನ್ನು ಬಿಟ್ಟುಕೊಟ್ಟರೆ ಉತ್ತಮ.
ಪಕ್ಷದ ಶಿಸ್ತು ಮತ್ತು ನಿಯಮದ ಅಡಿಯಲ್ಲಿ ಎಲ್ಲರು ಸಂಯಮದಿಂದ ವರ್ತಿಸಬೇಕಾಗುತ್ತದೆ. ಅದಾಗದಿದ್ದರೆ ಕೆಲವೊಮ್ಮೆ ವಿವರಣೆ ಕೇಳಬೇಕಾಗುತ್ತದೆ.ಹಾಗಾಗಿ ಯತ್ನಾಳ್ ರಿಂದಲೂ ಸ್ಪಷ್ಟನೆ ಕೇಳಲಾಗಿದೆ.

ಕುಮಾರಸ್ವಾಮಿ ಮನೆ ಕಟ್ಟಿಸಿಕೊಟ್ಟಿದ್ರಾ?
ಕಳೆದ ಬಾರಿ ಕೊಡಗು ಹಾಗೂ ದಕ್ಷಿಣ ಕನ್ನಡ ಉತ್ತರ ಕನ್ನಡದಲ್ಲಿ ನೆರೆ ಮತ್ತು ಭೂ ಕುಸಿತ ಆದಾಗ ಆಗಿನ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದರು.ಎನ್ ಡಿಆರ್ ಎಫ್ ನಿಯಮಾವಳಿ ಪ್ರಕಾರ ಪರಿಹಾರ ಘೋಷಣೆ ಮಾಡಿದ್ದರು.ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು.ಆದರೆ ಇದುವರೆಗೆ ಮನೆ ಕಟ್ಟಿಸಿಕೊಟ್ಟಿಲ್ಲ.

ಯಡಿಯೂರಪ್ಪ ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಪಾವತಿಸಿದ್ದಾರೆ
ಆದರೆ ಸಿಎಂ ಯಡಿಯೂರಪ್ಪ ಹಾಗಲ್ಲ ಇದುವರೆಗೆ 3000 ಕೋಟಿ ರೂ.ಅನುದಾನ ನೀಡಿದೆ.ಮನೆ ನಿರ್ಮಾಣವಾಗುವವರೆಗೆ ಮನೆ ಬಾಡಿಗೆ ಪಾವತಿಸಿದ್ದಾರೆ.ಅಷ್ಟೇ ಅಲ್ಲ ಭೂ ಕುಸಿತದಿಂದ ಜಮೀನು ಕಳೆದುಕೊಂಡವರಿಗೆ ಪರ್ಯಾಯವಾಗಿ ಜಮೀನು ನೀಡುವ ತೀರ್ಮಾನ ಮಾಡಿದ್ದಾರೆ.ಇದಕ್ಕೆ ಕಂದಾಯ ಸಚಿವ ಆರ್.ಅಶೋಕ್ ರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ನಾನೂ ನೆರೆ ಪೀಡಿತ ಪ್ರದೇಶದಿಂದ ಬಂದವನು
ನಾನೂ ಕೂಡ ನೆರೆ ಪೀಡಿತ ಪ್ರದೇಶದಿಂದ ಬಂದವನೆ.ಹಿಂದೆಲ್ಲಾ ನೆರೆ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸುತ್ತಿದ್ದರು.ವರ್ಷಗಳು ಆದ ಮೇಲೆ ಪರಿಹಾರ ವಿತರಣೆ ಆಗಿದ್ದನ್ನೂ ಕಂಡಿದ್ದೇನೆ.ಆದರೆ ಇದೇ ಮೊದಲ ಬಾರಿಗೆ ಸಿಎಂ ಭೇಟಿ ನೀಡಿದ್ದರು.ಅಷ್ಟೇ ಅಲ್ಲ ತಕ್ಷಣವೇ ಪರಿಹಾರ ಕಾಮಗಾರಿಗಳನ್ನು ಕೈಗೊಂಡರು.

ರಾಜ್ಯದಲ್ಲಿ ನೆರೆ ಬರ ಎರಡೂ ಇದೆ
ಈ ವರ್ಷ ನಮ್ಮ ರಾಜ್ಯದಲ್ಲಿ ನೆರೆ ಮತ್ತು ಬರ ಎರಡೂ ಭೀಕರವಾಗಿ ಕಾಡಿದೆ.ನೆರೆ ಬಂದಾಗ ನಮ್ಮ ಸಿಎಂ ಯಡಿಯೂರಪ್ಪ ಎಲ್ಲ ಭಾಗಗಳಿಗೆ ಭೇಟಿ ನೀಡಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.ಅಧಿಕಾರಿಗಳೂ ಸಹ ಶಕ್ತಿ ಮೀರಿ ಶ್ರಮಿಸಿದ್ದಾರೆ.ಅವರಿಗೆ ಅಭಿನಂದನೆಗಳು ಎಂದರು.












Click it and Unblock the Notifications