ಪ್ರಯಾಣಿಕರಿಗೆ ಬಿಎಂಟಿಸಿ ಡಿಕ್ಕಿ, ಒಂದು ಸಾವು
ಬೆಂಗಳೂರು, ಏ. 19 : ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಪ್ರಯಾಣಿಕರಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಹಳೆ ಮದ್ರಾಸ್ ರಸ್ತೆಯ ಸುದ್ದಗುಂಟೆಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟವರನ್ನು ಹೊಸ ಬೈಯಪ್ಪನಹಳ್ಳಿ ನಿವಾಸಿ ಏಸಾ (34) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಕೆ.ಆರ್.ಪುರಂನ ವಿದ್ಯಾರ್ಥಿನಿ ಲಾವಣ್ಯ (20) ಹಾಗೂ ಖಾಸಗಿ ಕಂಪನಿ ಉದ್ಯೋಗಿ ಮುನಿರಾಜು (30) ಎಂದು ಗುರುತಿಸಲಾಗಿದ್ದು,ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದದ್ದು ಹೇಗೆ : ಎಚ್ ಪಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ನಿರ್ವಹಿಸುತ್ತಿದ್ದ ಏಸಾ, ಗಾಯಗೊಂಡ ಮುನಿರಾಜು ಮತ್ತು ಲಾವಣ್ಯ ಸುದ್ದಗುಂಟೆಪಾಳ್ಯ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7.45 ರ ಸುಮಾರಿಗೆ ನಿಂತಿದ್ದರು.
ಈ ಸಮಯದಲ್ಲಿ ಮೆಜೆಸ್ಟಿಕ್ ನಿಂದ ಹೊಸಕೋಟೆಯ ನಡುವತ್ತಿಯ ಕಡೆಗೆ ಹೋಗುವ ಬಿಎಂಟಿಸಿ ವೇಗವಾಗಿ ಆಗಮಿಸಿದೆ. ಬಸ್ಸಿನ ಬ್ರೇಕ್ ವೈಫಲ್ಯಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್, ನಿಲ್ದಾಣದ ಪಕ್ಕದಲ್ಲಿದ್ದ ಸಿಗ್ನಲ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ಸಿಗಾಗಿ ಕಾಯುತ್ತಿದ್ದ ಏಸಾ, ಲಾವಣ್ಯ ಮತ್ತು ಮುನಿರಾಜುಗೆ ಅವರಿಗೆ ಡಿಕ್ಕಿ ಹೊಡೆದಿದೆ. [ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನೋಡಿ]
ನಿಲ್ದಾಣಕ್ಕೆ ಬಸ್ ನುಗ್ಗುವುದನ್ನು ನೋಡಿ ಕೆಲವರು ಓಡಿ ತಪ್ಪಿಸಿಕೊಂಡರೆ, ಈ ಮೂವರು ಮಾತ್ರ ಸಿಕ್ಕಿ ಹಾಕಿಕೊಂಡಿದ್ದಾರೆ. ಬಸ್ ಗುದ್ದಿದ್ದರಿಂದ ತೀವ್ರವಾಗಿ ಗಾಯಗೊಂಡ ಏಸಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟರು. ಲಾವಣ್ಯ ಅವರ ತಲೆಗೆ ಗಾಯಗಳಾಗಿವೆ. ಮುನಿರಾಜು ಅವರ ಕೈ ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರಿಂದ ಕಲ್ಲು ತೂರಾಟ : ಅಪಘಾತ ಪ್ರಕರಣದಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದರು. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ಇಂದಿರಾನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಸ್ ಚಾಲಕ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.












Click it and Unblock the Notifications