ಎಂ ಎಂ ಕಲಬುರ್ಗಿ ಹತ್ಯೆ: ಕ್ಷಿಪ್ರ ತನಿಖೆಗೆ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಆಗಸ್ಟ್ 29: ಸುಪ್ರಸಿದ್ಧ ವಿದ್ವಾಂಸ ಡಾ ಎಂ. ಎಂ. ಕಲಬುರ್ಗಿ ಅವರನ್ನು 2015 ರ ಆಗಸ್ಟ್ 30 ರಂದು ಅವರ ಮನೆಯಲ್ಲಿಯೇ ಅಪರಿಚಿತ ಹಂತಕರು ಗುಂಡಿಕ್ಕಿ ಕೊಂದು ಸಾರಸ್ವತ ಲೋಕದಲ್ಲಿ ತಲ್ಲಣವನ್ನು ಉಂಟು ಮಾಡಿದ್ದು ಇದೀಗ ಕರಾಳ ಇತಿಹಾಸ.
ಈ ಕಗ್ಗೊಲೆಗೆ ತೀವ್ರವಾಗಿ ಪ್ರತಿಕ್ರಿಯಿಸಿ ಹಲವು ಬರಹಗಾರರರು ತಮಗೆ ಸಂದಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ನಾಗರೀಕ ಸಂಘ-ಸಂಸ್ಥೆಗಳು ಕಳವಳವನ್ನು ವ್ಯಕ್ತ ಪಡಿಸಿದ್ದರು. ಕರ್ನಾಟಕ ಸರ್ಕಾರವು ಹಂತಕರನ್ನು ಪತ್ತೆ ಹಚ್ಚಲು ಕೂಡಲೇ ಕ್ರಮಗಳನ್ನು ಕೈಗೊಂಡು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದರ್ಜೆಯ ಇಬ್ಬರು, 27 ಇತರೆ ಅಧಿಕಾರಿಗಳು ಹಾಗೂ 30 ತಾಂತ್ರಿಕ ವಿಶ್ಲೇಷಕರ ಸಮರ್ಥ ತಂಡವನ್ನು ರಚಿಸಿ, ತನಿಖೆಯನ್ನು ಚುರುಕುಗೊಳಿಸಲು ಪ್ರಕರಣವನ್ನು ಸಿ ಐ ಡಿ ಗೆ ವಹಿಸಿದೆ.

ತನಿಖಾ ತಂಡವು ಕಲೆ ಹಾಕಿದ ಎಲ್ಲಾ ಮಾಹಿತಿಯನ್ನು ವಿಶ್ಲೇಷಿಸಿ ಮಹಾರಾಷ್ಟ್ರದಲ್ಲಿ ಇದೇ ಮಾದರಿಯಲ್ಲಿ ನಡೆದಿರುವ ಡಾ ನರೇಂದ್ರ ದಾಬೋಲ್ಕರ್ ಮತ್ತು ಕಾಮ್ರೆಡ್ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ತಂಡಗಳೊಂದಿಗೆ ರಾಜ್ಯದ ತನಿಖಾ ತಂಡವು ನಿರಂತರ ಸಂಪರ್ಕದಲ್ಲಿದೆ. ಈ ಎರಡೂ ತಂಡಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಸಾಮ್ಯತೆಗಳಿವೆ ಎಂಬುದನ್ನು ಗಮನಿಸಿವೆ.
ಐತಿಹಾಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವ ಬುದ್ದಿ ಜೀವಿಗಳ ಮೇಲೆ ದಾಳಿ ಈ ಅಪರಾಧದ ಹಿಂದಿನ ಉದ್ದೇಶ ಎಂಬುದು ಸಾಬೀತಾಗಿದೆ.
ಕಳೆದ ವರ್ಷ ನಾಗರೀಕರ ಹಲವು ನಿಯೋಗಗಳು ನನ್ನಲ್ಲಿ ಹಾಗೂ ಗೃಹ ಇಲಾಖೆಯಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ. ಅವರ ಭಾವನೆಗಳನ್ನು ಗಮನದಲ್ಲಿರಿಸಿ ಅಪರಾಧಿಗಳನ್ನು ಹಿಡಿಯಲು ಕರ್ನಾಟಕ ಸರ್ಕಾರವು ತನ್ನ ಸಂಪೂರ್ಣ ಬದ್ಧತೆ ಪ್ರದರ್ಶಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಕರ್ನಾಟಕವು ಚಿಂತಕರು ಹಾಗೂ ಸಮಾಜ ಸುಧಾರಕರ ಒಂದು ಸುದೀರ್ಘ ಪರಂಪರೆಯನ್ನು ಹೊಂದಿದೆ. ಶಾಂತಿಯುತ ಹಾಗೂ ಸುವ್ಯವಸ್ಥಿತ ರಾಜ್ಯ ಎಂಬ ಹೆಸರನ್ನು ಗಳಿಸಿದೆ. ಕರ್ನಾಟಕ ಜನತೆಯ ಕೂಡ ಬರಹಗಾರರನ್ನು ಮತ್ತು ಚಿಂತಕರನ್ನು ಗೌರವಯುತವಾಗಿ ಕಂಡಿದ್ದಾರೆ. ಇದರು ರಾಜ್ಯದಲ್ಲಿ ಸಾಹಿತ್ಯ ಮತ್ತು ಕಲೆ ಪಸರಿಸಲು ಸಹಾಯಕಾರಿಯಾಗಿದೆ. ನಮ್ಮಬಹುಮುಖಿ ಸಾಂಸ್ಕೃತಿಕ ಪರಂಪರೆಯ ಪ್ರಾಮುಖ್ಯತೆಯನ್ನು ಗಣನೆಗೆ ತೆಗೆದುಕೊಂಡಿರುವ ನಮ್ಮ ಸರ್ಕಾರವು ರಾಜ್ಯದಲ್ಲಿ ಅಸಹಿಷ್ಣುತೆಯನ್ನು ಹರಡುವುದನ್ನು ಬಲವಾಗಿ ಕಿತ್ತೊಗೆಯಲಿದೆ. ಅಲ್ಲದೆ, ಅಂದಾಭಿಮಾನದ ದೃಷ್ಠಿ ಹೊತ್ತು ಬರಹಗಾರರು ಹಾಗೂ ಬುದ್ಧಿ ಜೀವಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವವವರನ್ನು ಮಟ್ಟ ಹಾಕಲಿದೆ.
ಆಗಸ್ಟ್ 30 ರಂದು ಡಾ ಎಂ ಎಂ ಕಲಬುರ್ಗಿ ಅವರ ಕಗ್ಗೊಲೆಯ ಎರಡನೇ ವರ್ಷದ ಕಹಿ ನೆನಪಿನ ಸಂದರ್ಭದಲ್ಲಿ ವಿಶೇಷವಾಗಿ ಸಭೆಗಳನ್ನು ಆಯೋಜಿಸುವವರಿಗೆ ಅಪರಾಧಿಗಳನ್ನು ಹಿಡಿಯುವಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲು ಇಚ್ಛಿಸುತ್ತೇನೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರ ತನಿಖಾ ತಂಡದ ಜೊತೆಗೆ ಕರ್ನಾಟಕ ತನಿಖಾ ತಂಡವು ಮತ್ತಷ್ಟು ಸಹಕಾರವನ್ನು ಹೆಚ್ಚಿಸಿಕೊಳ್ಳುವಂತೆ ಹಾಗೂ ಎಲ್ಲಾ ಮಾಹಿತಿಗಳನ್ನು ಸಮೀಪದ ದೃಷ್ಟಿಕೋನದಿಂದ ಪರಿಶೀಲಿಸಬೇಕೆಂದು ಸೂಚಿಸಿದ್ದೇನೆ. ನಮ್ಮ ತನಿಖಾ ತಂಡವು ಈ ಅಪರಾಧವನ್ನು ಬಗೆ ಹರಿಸುವಲ್ಲಿ ಅಂತಿಮ ಘಟ್ಟ ತಲುಪಿದೆ ಹಾಗೂ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದೆ. ತನಿಖೆಯನ್ನು ಕ್ಷಿಪ್ರ ಗತಿಯಲ್ಲಿ ನಡೆಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿರುವ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೃಪೆ:ಕರ್ನಾಟಕ ವಾರ್ತೆ)












Click it and Unblock the Notifications