ಸಿಎಂ ರೇಸ್ನಲ್ಲಿ ಉತ್ತರ ಕರ್ನಾಟಕದ ಈ ಬಿಜೆಪಿ ನಾಯಕ!?
ಬೆಂಗಳೂರು, ಮೇ 26: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಸಾಧ್ಯತೆಯ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.
ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪರನ್ನು ಒಂದು ವೇಳೆ ಬದಲಾವಣೆ ಮಾಡಿದರೆ, ಆ ಸ್ಥಾನ ತುಂಬಲು ಉತ್ತರ ಕರ್ನಾಟಕ ಮೂಲದ ಮೂವರು ಬಿಜೆಪಿ ನಾಯಕರು ರೇಸ್ನಲ್ಲಿದ್ದಾರೆ.
ನಾಯಕತ್ವ ಬದಲಾವಣೆ ಗಾಳಿ ಸುದ್ದಿ ಬೆನ್ನಲ್ಲೇ, ಬಿಜೆಪಿ ಶಾಸಕರ ಸಭೆ ಕರೆದ ಸಿಎಂ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮೂಲ ಬಿಜೆಪಿ ಶಾಸಕರೇ ಮನಸ್ಸು ಮಾಡಿದ್ದು, ಇದು ಯಡಿಯೂರಪ್ಪರನ್ನು ಚಿಂತೆಗೀಡು ಮಾಡಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಕೇವಲ ಶಾಸಕ ಬೆಂಬಲ ಮಾತ್ರವಲ್ಲದೆ, ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯವಾಗಿ ಸಂಘ ಪರಿವಾರದ ಬೆಂಬಲ ಅತ್ಯವಶ್ಯಕವಾಗಿದೆ.
ಇನ್ನು ಸಿಎಂ ರೇಸ್ನಲ್ಲಿ ಉತ್ತರ ಕರ್ನಾಟಕದ ಮೂವರು ಬಿಜೆಪಿ ನಾಯಕರಿದ್ದು, ಅವರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಂಚೂಣಿಯಲ್ಲಿದ್ದಾರೆ. ಈ ಮೂವರ ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣೀಟ್ಟಿದೆ.
ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ಆಡಳಿತ ಮತ್ತು ವಿವಿಧ ಇಲಾಖೆಗಳಲ್ಲಿ ನಿರಂತರ ಹಸ್ತಕ್ಷೇಪದಿಂದ ಅನೇಕ ಬಿಜೆಪಿ ಸಚಿವರು ಹಾಗೂ ಶಾಸಕರು ಬೇಸತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪಗೆ ಇದೆಲ್ಲ ಗೊತ್ತಿದ್ದರೂ, ಪುತ್ರನಿಗೆ ಕಡಿವಾಣ ಹಾಕುತ್ತಿಲ್ಲ ಎಂದು ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ.
ವಿಜಯಪುರ ಶಾಸಕ ಹಾಗೂ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಯಡಿಯೂರಪ್ಪ ವಿರುದ್ಧ ಕಳೆದ ಒಂದೂವರೆ ವರ್ಷದಿಂದಲೂ ಕಿಡಿಕಾರುತ್ತಲೇ ಬಂದಿದ್ದಾರೆ. ಸಿಎಂ ಬದಲಾಗಲಿದ್ದಾರೆ ಎಂದು ಮೊದಲು ಭವಿಷ್ಯ ನುಡಿದವರೇ ಬಸನಗೌಡ ಪಾಟೀಲ್ ಯತ್ನಾಳ್.
ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಬಿಜೆಪಿಯ ಹಲವು ಶಾಸಕ ಒಪ್ಪಿಗೆ ಸೂಚಿಸಲಿದ್ದಾರೆ. ಆದರೆ ಸಚಿವ ಸ್ಥಾನ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದ್ದಾರೆ. ಆದರೆ ಈ ಇಬ್ಬರನ್ನೂ ಮೀರಿ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ಅಚ್ಚರಿಯಿಲ್ಲ.
ಈ ಎಲ್ಲ ಬೆಳವಣಿಗೆ ಆಗುತ್ತಿದ್ದಂತೆಯೇ ಸಿಎಂ ಯಡಿಯೂರಪ್ಪ ಜೂನ್ 7ರಂದು ಬಿಜೆಪಿ ಶಾಸಕರ ಸಭೆ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಆದರೆ ಬಿಜೆಪಿ ಮೂಲಗಳ ಪ್ರಕಾರ, ಮುಂದಿನ ಮೂರು ತಿಂಗಳು ನಾಯಕತ್ವದಲ್ಲಿ ಬದಲಾವಣೆ ಮಾತು ಇಲ್ಲವೆಂಬ ಮಾಹಿತಿಯಿದೆ. ಶಾಸಕರ ಅಸಮಾಧಾನವನ್ನು ಸಿಎಂ ಹಾಗೂ ಹೈಕಮಾಂಡ್ ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.