'ಜಮೀರ್ ಅಹ್ಮದ್ ರಹಸ್ಯ ಬಯಲು ಮಾಡುವೆ': ಸಿಸಿಬಿ ಕಚೇರಿಯಲ್ಲಿ ಪ್ರಶಾಂತ್ ಸಂಬರಗಿ
ಬೆಂಗಳೂರು, ಸೆ 12: ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ನೊಟೀಸ್ ನೀಡಿದನ್ವಯ, ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಪ್ರಶಾಂತ್ ಸಂಬರಗಿ ಶನಿವಾರ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹೋಗುವ ಮುನ್ನ, ತಾನು ಹಿಂದೆ ನೀಡಿದ್ದ ಹೇಳಿಕೆಯನ್ನು ಪುನರುಚ್ಚಿಸಿದ್ದಾರೆ.
"ಸತ್ಯಕ್ಕೆ ಆಯಸ್ಸು ಜಾಸ್ತಿಯಿರುತ್ತದೆ. ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಆಸ್ತಿಯನ್ನು ಸರಕಾರಕ್ಕೆ ತಂದು ಕೊಡುವ ಮೂಲಕ, ಸರಕಾರಕ್ಕೆ ಇನ್ನೊಂದು ಆದಾಯ ತಂದು ಕೊಡಲಿದ್ದೇನೆ"ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
"ಜಮೀರ್ ಅಹ್ಮದ್ ಬಗ್ಗೆ ನಾನು ನೀಡಿದ್ದ ಹೇಳಿಕೆ ಎಲ್ಲಾ ಸತ್ಯಾಂಶದಿಂದ ಕೂಡಿರುತ್ತದೆ. ನಾನು ದಾಖಲೆಯಿಲ್ಲದೆ ಮಾತನಾಡುವುದಿಲ್ಲ. ಈಗ ವಿಚಾರಣೆಗೆ ಹೋಗುತ್ತಿದ್ದೇನೆ. ಅಧಿಕಾರಿಗಳಿಗೆ ಎಲ್ಲಾ ವಿಷಯಗಳನ್ನು, ದಾಖಲೆಗಳನ್ನು ಒದಗಿಸುತ್ತೇನೆ"ಎಂದು ಸಂಬರಗಿ ಹೇಳಿದ್ದಾರೆ.

ಸಿಸಿಬಿ ಕಚೇರಿಗೆ ಹೋಗುವ ಮುನ್ನ ಎಲ್ಲಾ ದಾಖಲೆಗಳು ಈ ಫೈಲಿನಲ್ಲಿ ಇದೆ ಎಂದು ಮಾಧ್ಯಮದವರಿಗೆ ತೋರಿಸಿದ ಸಂಬರಗಿ, "ಅಧಿಕಾರಿಗಳ ಮುಂದೆ ನನ್ನಲ್ಲಿ ಏನೇನು ಮಾಹಿತಿಯಿದೆಯೋ ಎಲ್ಲವನ್ನೂ ಹೇಳುತ್ತೇನೆ"ಎಂದು ಹೇಳಿದ್ದಾರೆ.
"ಕಳೆದ ವರ್ಷ ಜೂನ್ ತಿಂಗಳಲ್ಲಿ ಜಮೀರ್ ಅಹ್ಮದ್, ನಟಿ ಸಂಜನಾ ಜೊತೆ ಶ್ರೀಲಂಕಾದ ರಾಜಧಾನಿ ಕೊಲೊಂಬೋಗೆ ಹೋಗಿದ್ದರು. ಅದಕ್ಕೆ ಬೇಕಾಗಿರುವ ಎಲ್ಲಾ ದಾಖಲೆಗಳು ನನ್ನಲ್ಲಿವೆ"ಎಂದು ಪ್ರಶಾಂತ್ ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಜಮೀರ್ ಅಹ್ಮದ್, "ನನ್ನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಿ. ಸಂಬರಗಿ ಮಾಡಿರುವ ಆರೋಪ ಸಾಬೀತಾದರೆ, ರಾಜಕಾರಣದಿಂದ ನಿವೃತ್ತಿ ಅಷ್ಟೇ ಅಲ್ಲ, ನನ್ನ ಎಲ್ಲಾ ಆಸ್ತಿಗಳನ್ನು ಸರಕಾರಕ್ಕೆ ಬರೆದು ಕೊಡುತ್ತೇನೆ"ಎಂದು ಸಂಬರಗಿಗೆ ಮರು ಸವಾಲು ಹಾಕಿದ್ದರು.












Click it and Unblock the Notifications