ಸಾರ್ವಜನಿಕವಾಗಿ ದಂ ಎಳೆದರೆ ಇಂಟರ್ನೆಟ್ಟಿನಲ್ಲಿ ಫೋಟೋ!
ಬೆಂಗಳೂರು, ಡಿ.24- ಧೂಮಪಾನಿಗಳೇ ಎಚ್ಚರಾ! ಸಾರ್ವಜನಿಕ ಸ್ಥಳಗಳಲ್ಲಿ ರಾಜಾರೋಶವಾಗಿ ಧೂಮಪಾನ ಮಾಡಿ, ಅಕ್ಕಪಕ್ಕದವರಿಗೆ ಕಸಿವಿಸಿಯನ್ನುಂಟುಮಾಡುತ್ತಿದರೆ ಅದಷ್ಟೂ ದೃಶ್ಯಾವಳಿ ಅಂತರ್ಜಾಲಕ್ಕೆ ಅಪ್ ಲೋಡ್ ಆಗಿ, ನಿಮ್ಮ ಮಾನ ಹರಾಜಾಗುವ ಕಾಲ ಬಂದಿದೆ. (ಮುಖ್ಯಮಂತ್ರಿ ಸಿದ್ದರಾಮಯ್ಯ ಉಚಿತ ಸಲಹೆ ಕೇಳಿಸಿಕೊಳ್ಳಿ)
ಯಾಕಪ್ಪಾ? ನಮ್ಮೀ ಸೌಭಾಗ್ಯವನ್ನು ಕಿತ್ತುಕೊಂಡವರು ಯಾರು? ಎಂದು ಪ್ರಶ್ನಿಸಿದಾಗ ರಾಜ್ಯ ಆರೋಗ್ಯ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘಟನೆಗಳ ಮುಖಂಡರು ಜಂಟಿಯಾಗಿ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಇನ್ಮುಂದೆ ಬೆಂಗಳೂರಿನ ಎಲ್ಲಾ ಹೌದು ಎಲ್ಲ ಹೋಟೆಲುಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇದೇ ವೇಳೆ, ಬಸ್ ನಿಲ್ದಾಣಗಳ 100 ಮೀ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ. ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ವ್ಯಾಪಕ ದೂರುಗಳು ಬಂದಿವೆ.
ಸಾರ್ವಜನಿಕರ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳ ನಿಷೇಧದ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಕೆಬಿ ಈಶ್ವರಪ್ಪ ಹೇಳಿದ್ದಾರೆ. (ಭಾರತೀಯ ಸಿಗರೇಟುಗಳು ನಿಜಕ್ಕೂ ಅಪಾಯಕಾರಿ!)
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಆರೋಗ್ಯ ಜಾಗೃತಿ ಸಮಿತಿ ಮುಖಂಡ ಹಾಗೂ ಕ್ಯಾನ್ಸರ್ ತಜ್ಞ ವಿಶಾಲ್ ರಾವ್ ಮಾತನಾಡಿ ಹೆಚ್ಚಿನ ಮಾಹಿತಿ ನೀಡಿದರು. ಧೂಮಪಾನದಿಂದಾಗುವ ಅಪಾಯಗಳು ಮತ್ತು ಧೂಮಪಾನ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗುವುದು.
ತಂಬಾಕು ಉತ್ಪನ್ನಗಳು ದುರ್ಬಲ ಮನಸ್ಥಿತಿಯವರನ್ನು ಚಟಕ್ಕೆ ಹಚ್ಚಿಸುತ್ತವೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರ ಛಾಯಾಚಿತ್ರವನ್ನು ಸೆರೆ ಹಿಡಿದು ಅಂತರ್ಜಾಲಕ್ಕೆ ಅಪ್ ಲೋಡ್ ಮಾಡುವ ಚಿಂತನೆಯೂ ನಡೆದಿದೆ.
ಬೆಂಗಳೂರು ನಗರ ವ್ಯಾಪ್ತಿಯ ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್, ನಗರ ವ್ಯಾಪ್ತಿಯಲ್ಲಿರುವ 1500 ಹೋಟೆಲುಗಳಲ್ಲಿ ಧೂಮಪಾನ ನಿಷೇಧಿಸುವ ನಿರ್ಧಾರ ಕೈಗೊಳ್ಳಲಿದೆ. ಬಿಬಿಎಂಪಿಯು ಹೋಟೆಲ್ ಆರಂಭಕ್ಕೆ ಪರವಾನಗಿ ನೀಡುವ ಮುನ್ನ ನಮ್ಮ ಸಂಘದ ಸದಸ್ಯತ್ವವನ್ನು ಪಡೆಯುವುದು ಕಡ್ಡಾಯಗೊಳಿಸಬೇಕು. ಇದರಿಂದ ಧೂಮಪಾನ ನಿಷೇಧದಂತಹ ಅಭಿಯಾನ ಸಮರ್ಪಕವಾಗಿ ಜಾರಿಗೆ ಬರಲಿದೆ ಎಂದರು.












Click it and Unblock the Notifications