ದೇವೇಗೌಡರ ಮನೆ ಮುಂದೆ ಎಸ್.ಎಂ.ಕೃಷ್ಣ ನಿಂತಿದ್ದರು: ರಮೇಶ್ ಬಾಬು
ಬೆಂಗಳೂರು, ಡಿಸೆಂಬರ್ 26: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು 2004 ರಲ್ಲಿ ಸೋತಾಗ, ಜೆಡಿಎಸ್ ಬೆಂಬಲದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗಲು ಬಯಸಿದ್ದರು. ಅದಕ್ಕಾಗಿ ಎಚ್.ಡಿ.ದೇವೇಗೌಡರ ಮನೆ ಮುಂದೆ ನಿಂತಿದ್ದರು ಎಂದು ಜೆಡಿಎಸ್ ಮುಖಂಡ ರಮೇಶ್ ಬಾಬು ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಅವರ ಅವರ ಪುಸ್ತಕದಲ್ಲಿ ಬರೆದಿರುವ ಸಂಗತಿಗಳ ಬಗ್ಗೆ ಟ್ವಿಟ್ ಮಾಡಿರುವ ರಮೇಶ್ ಬಾಬು, "ಆತ್ಮಚರಿತ್ರೆಗಳು ನಮಗೆ ಮಾಹಿತಿ ಕೊಡುವುದರ ಜೊತೆಗೆ ದಾರಿದೀಪವಾಗಬೇಕು, ಯಾವುದೇ ಕಾರಣಕ್ಕೂ ಸತ್ಯವನ್ನು ಮರೆಮಾಚಬಾರದು" ಎಂದು ತಿಳಿಸಿದ್ದಾರೆ.
"ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎಂದು ಕೃಷ್ಣ ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದರು. ಇದನ್ನು ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಬೇಕಿದೆ" ಎಂದಿದ್ದಾರೆ.

"ದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ರೂಪಿಸಿದ ಕಾಂಗ್ರೆಸ್, ಇಂದಿನ ಬಹುತೇಕ ಪಕ್ಷಗಳಿಗೆ ಮೂಲ ಪಕ್ಷವಾಗಿದೆ. ಎಸ್.ಎಂ.ಕೃಷ್ಣ ಅವರು ಪಿಎಸ್ಪಿ ಪಕ್ಷದವರು, ಅವರೂ ಕೂಡಾ ಮೂಲ ಕಾಂಗ್ರೆಸ್ಸಿಗರಲ್ಲ" ಎಂದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಅಧಿಕಾರ ಮತ್ತು ಕುರ್ಚಿಗಾಗಿ ಎಲ್ಲ ಪಕ್ಷಗಳ ಬಾಗಿಲು ತಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ರವಿಕುಮಾರ್ ನೀಡಿರುವ ಹೇಳಿಕೆಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮತನಾಡಿದ ರವಿಕುಮಾರ್ ಅವರು "ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಸಿದ್ದಾಂತ, ಆದರ್ಶವೆಂಬುದೇ ಇಲ್ಲ. ಇವರು ಬಿಜೆಪಿ, ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷ ಹೀಗೆ ಕಲಕ್ಕೆ ತಕ್ಕಂತೆ ವಿವಿಧ ಪಕ್ಷಗಳ ಬಾಗಿಲು ತಟ್ಟುತ್ತಾರೆ, ಅದು ಕೇವಲ ಅಧಿಕಾರ ದಾಹಕ್ಕಾಗಿ" ಎಂದು ಟೀಕಿಸಿದ್ದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಉದ್ದೇಶದಿಂದ ತಮ್ಮ ಮನೆಯ ಅಡ್ರೆಸ್ ಹುಡುಕಿಕೊಂಡು ಬಂದಿದ್ದರು ಎಂದು ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ ರವಿಕುಮಾರ್, ಅದಕ್ಕಾಗಿಯೇ ದೇವೇಗೌಡರನ್ನು ತುಮಕೂರಿನಲ್ಲಿ, ಮಗ ನಿಖಿಲ್ ರನ್ನು ಮಂಡ್ಯದಲ್ಲಿ ಸೋಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಮುಖಂಡರು, ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ರವಿಕುಮಾರ್ ಗೆ ಇಲ್ಲ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ದೇಶದ ಕೆಲವೇ ಕಲೆವು ರಾಜಕಾರಣಿಗಳಿಗೆ ಇದೆ ಎಂದು ಜೆಡಿಎಸ್ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿರುಗೇಟು ನೀಡಿದ್ದಾರೆ.











Click it and Unblock the Notifications