ಗ್ರೀನ್ ಜೋನ್ನಲ್ಲಿ ಮದ್ಯದಂಗಡಿ ತೆರೆಯಲು ಸಿದ್ದರಾಮಯ್ಯ ಸಲಹೆ
ಬೆಂಗಳೂರು, ಏಪ್ರಿಲ್ 28: ಎರಡನೇ ಹಂತದ ಲಾಕ್ಡೌನ್ ಅವಧಿ ಮುಗಿಯುತ್ತಾ ಬಂದಿದೆ. ಮೇ 3ರ ಬಳಿಕ ಆದರೂ ರಾಜ್ಯದಲ್ಲಿ ಮದ್ಯದಂಗಡಿ ತೆರೆಯುವ ನಿರೀಕ್ಷೆ ಇಟ್ಟಿದ್ದವರಿಗೆ ರಾಜ್ಯ ಸರ್ಕಾರ ನಿರಾಸೆ ಮಾಡಿದೆ.
Recommended Video
ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಪೆರೆನ್ಸ್ ಮೂಲಕ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್ಡೌನ್ ಪರಿಷ್ಕರಿಸಿ ಮತ್ತಷ್ಟು ಸಡಿಲಿಕೆ ಘೋಷಿಸಿದ್ದಾರೆ. ರಾಜ್ಯವನ್ನು ಮೂರು ವಲಯಗಳಾಗಿ ವಿಂಗಡಿಸಿ ಹಸಿರು ವಲಯದಲ್ಲಿ ಕೈಗಾರಿಕೆ ಹಾಗೂ ಸಣ್ಣ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿದ್ದಾರೆ.
ಆದರೆ, ಮದ್ಯದಂಗಡಿ ತೆರೆಯಲು ಅನುಮತಿ ನೀಡಿಲ್ಲ. ಇದೀಗ, ವಿಪಕ್ಷ ನಾಯಕ ಸಿದ್ದರಾಮಮಯ್ಯ ಅವರು, ಗ್ರೀನ್ ಜೋನ್ನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮುಂದೆ ಓದಿ....

ಆರ್ಥಿಕ ಹಿತದೃಷ್ಟಿಯಿಂದ ಮದ್ಯದಂಗಡಿ ತೆರೆಯಲಿ
ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕೆಳಮಟ್ಟಕ್ಕೆ ಜಾರಿದೆ. ಆರ್ಥಿಕ ಚೇತರಿಕೆ ಕಾಣುವ ಉದ್ದೇಶದಿಂದ ಹಸಿರು ವಲಯಗಳಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಹುದು. ಅಬಕಾರಿ ಸುಂಕ ಸಂಗ್ರಹದಿಂದ ಆರ್ಥಿಕತೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಬಹುದು. ಷರತ್ತುಗಳನ್ನು ವಿಧಿಸಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅಧಿಕಾರಿಗಳು ಅದೇ ಸಲಹೆ ನೀಡಿದ್ದರು
ಇದಕ್ಕು ಮುಂಚೆ ಆರ್ಥಿಕ ವಲಯದ ಅಧಿಕಾರಿಗಳು ಸಿಎಂ ಯಡಿಯೂರಪ್ಪ ಅವರ ಜೊತೆ ಸಭೆ ಮಾಡಿದ್ದರು. ಈ ಸಭೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಡುವುದು ಆರ್ಥಿಕತೆ ದೃಷ್ಟಿಯಿಂದ ಒಳ್ಳೆಯದು ಎಂದು ಸಲಹೆ ನೀಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲಿ. ಎಂಎಸ್ಐಎಲ್ನಲ್ಲಿ ಆದರೂ ಅವಕಾಶ ಕೊಡಿ ಎಂದು ಹೇಳಿದ್ದರು. ಆದರೆ, ಸಿಎಂ ಇದಕ್ಕೆ ಸಮ್ಮತಿಸಿಲ್ಲ ಎಂದು ತಿಳಿದು ಬಂದಿದೆ.

ಮೋದಿ ಆದೇಶದ ಬಳಿಕವೇ ಮದ್ಯದಂಗಡಿ ಓಪನ್
ಎಂಎಸ್ಐಎಲ್ ತೆರೆಯಲು ರಾಜ್ಯ ಸರ್ಕಾರ ಸಜ್ಜಾಗಿತ್ತು. ಆದರೆ, ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗದ ಕಾರಣ ಹಾಗೂ ಕೇಂದ್ರ ಸರ್ಕಾರದಿಂದ ಈ ಕುರಿತು ವಿನಾಯಿತಿ ಸಿಗದ ಕಾರಣ, ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ಈಗಲೂ ಆರ್ಥಿಕ ವಲಯದ ಅಧಿಕಾರಿಗಳು ಸಲಹೆ ನೀಡಿದ್ದರೂ, ಮೋದಿ ಆದೇಶ ಬಳಿಕವಷ್ಟೇ ಮದ್ಯದಂಗಡಿ ತೆರೆಯಲು ಅನುಮತಿ ಎಂದು ಸಿಎಂ ಖಡಕ್ ಆಗಿ ಹೇಳಿದ್ದಾರಂತೆ.

ಹೊಸ ಮಾರ್ಗಸೂಚಿಯಲ್ಲಿ ಅನುಮತಿ ಸಿಕ್ಕಿಲ್ಲ
ಲಾಕ್ಡೌನ್ ಸಡಿಲಿಕೆ ಬಗ್ಗೆ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಹಸಿರು ವಲಯದಲ್ಲಿ ಕೈಗಾರಿಕೆಗಳಿಗೆ, ಸಣ್ಣ ಅಂಗಡಿಗಳಿಗೆ ಹಾಗೂ ಇನ್ನಿತರ ಕೆಲಸಗಳಿಗೆ ಅನುಮತಿ ನೀಡಿದೆ. ಬಹುಶಃ, ಗ್ರೀನ್ ಜೋನ್ನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಸಿಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸರ್ಕಾರಕ್ಕೆ ಕುಡುಕರಿಗೆ ನಿರಾಸೆ ಮಾಡಿದೆ. ಆದರೆ, ಮೇ 3 ಬಳಿಕ ಮೋದಿ ಭಾಷಣದ ಬಳಿಕ ಮತ್ತೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.












Click it and Unblock the Notifications