ಮಹಿಳೆಯರಿಗೆ ಸಚಿವ ಸ್ಥಾನ ಕೊಡ್ತೀನಿ : ಸಿದ್ದರಾಮಯ್ಯ
ಬೆಂಗಳೂರು, ಅ.18 : ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನಾನು ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾಧಾನ್ಯತೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಂಪುಟಕ್ಕೆ ಮಹಿಳೆಯರನ್ನು ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಗುರುವಾರ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಡಾ.ಕೆ.ಎಂ.ಮುನ್ಷಿ ಇನ್ಸ್ಟಿಟ್ಯೂಟ್ ಫಾರ್ ಗುಡ್ ಗವರ್ನನ್ಸ್' ಕಾರ್ಮುಕ್ರಮ ಉದ್ಘಾಟಿಸಿ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ, ತಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿಲ್ಲ ಎಂದರು.

ನಿಮ್ಮ ಮಂತ್ರಿ ಮಂಡಲದಲ್ಲಿ ಒಬ್ಬರೇ ಮಹಿಳಾ ಸಚಿವರು ಇರುವುದು ಏನನ್ನು ಸೂಚಿಸುತ್ತದೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಿಎಂಗೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತೇವೆ. ನನ್ನ ಸಂಪುಟದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಡಬೇಕಿತ್ತು ಎಂದು ಹೇಳಿದರು.
ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪಾತಿನಿಧ್ಯ ನೀಡಬೇಕಾಗಿತ್ತು. ಆದರೆ, ಅನೇಕ ನಿರ್ಬಂಧಗಳಿತ್ತು. ಆದ್ದರಿಂದ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲು ಸಾಧ್ಯವೇ ಎಂದು ಹೈಕಮಾಂಡ್ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇಷ್ಟು ತಿಂಗಳ ಆಡಳಿತದಲ್ಲಿ ನಿಮಗೆ ಹೆಚ್ಚು ಬೇಸರ ತಂದ ಮತ್ತು ಖುಷಿ ನೀಡಿದ ಸಂಗತಿ ಯಾವುದು? ಎಂಬ ಪ್ರಶ್ನೆ ತೂರಿಬಂತು. ಇದಕ್ಕೆ ಮುಗುಳ್ನಕ್ಕು ಉತ್ತರಿಸಿದ ಸಿದ್ದರಾಮಯ್ಯ, "ಬೇಸರದ ಸಂಗತಿಗಳು ಯಾವುವೂ ಈವರೆಗೆ ನಡೆದಿಲ್ಲ. ಹೆಚ್ಚು ಖುಷಿ ನೀಡಿದ ಸಂಗತಿ ಬಡವರಿಗೆ ಒಂದು ರೂ.ಗೆ ಒಂದು ಕೆ.ಜಿ ಅಕ್ಕಿ ನೀಡುವ ಯೋಜನೆ ಎಂದರು.
ಪಂಚೆ-ಜುಬ್ಬಾದ ರಹಸ್ಯವೇನು : ಸದಾ ಪಂಚೆ-ಜುಬ್ಟಾದಲ್ಲಿ ಕಂಗೊಳಿಸಲು ಕಾರಣವೇನು ಎಂಬ ಪ್ರಶ್ನೆಯೂ ಎದುರಾಯಿತು. ಪಂಚೆ-ಜುಬ್ಟಾವನ್ನು ನಾನು 1995ರಿಂದ ಹಾಕುತ್ತಿದ್ದೇನೆ. ಅದಕ್ಕೂ ಮೊದಲು ಪ್ಯಾಂಟು-ಶರ್ಟು ಹಾಕುತ್ತಿದ್ದೆ.
ಆದರೆ, ಚರ್ಮದ ಸಮಸ್ಯೆ ಕಾಡುತ್ತಿತ್ತು. ಇದಕ್ಕಾಗಿ ವೈದ್ಯರು ಈ ಪಂಚೆ-ಜುಬ್ಟಾ ಸಲಹೆ ಮಾಡಿದ್ದರಿಂದ ಧರಿಸುತ್ತಿದ್ದೇನೆ. ಇದಕ್ಕೆ ವಿಶೇಷ ಅರ್ಥವೇನೂ ಇಲ್ಲ. ಇನ್ನು ಚೀನಾಕ್ಕೆ ಹೋಗುವಾರ ಸೂಟು-ಬೂಟು ಧರಿಸಿದ್ದೆ ಎಂದು ಸಿದ್ದರಾಮಯ್ಯ ನಗುಮೊಗದಿಂದಲೇ ಉತ್ತರಿಸಿದರು.
ಯುವ ಉದ್ಯಮಿಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ. ನೂತನ ಕೈಗಾರಿಕಾ ನೀತಿ ಹೂಡಿಕೆದಾರರ ಸ್ನೇಹಿಯಾಗಿದೆ. ಯುವ ಉದ್ಯಮಿಗಳಿಗೆ ಎಲ್ಲ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಭರವಸೆ ನೀಡಿದರು.












Click it and Unblock the Notifications