'ಚತುರ ಸಾರಿಗೆ' ವ್ಯವಸ್ಥೆಗೆ ಚಾಲನೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಮೇ 25 : ಬಿಎಂಟಿಸಿ ಬಸ್ಸುಗಳ ಕುರಿತು ಬೆರಳ ತುದಿಯಲ್ಲಿ ಮಾಹಿತಿ ನೀಡುವ 'ಚತುರ ಸಾರಿಗೆ ವ್ಯವಸ್ಥೆಗೆ' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸಲು ಅನುಕೂಲವಾಗುವಂತಹ ಸ್ಮಾರ್ಟ್ ಕಾರ್ಡ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಚತುರ ಸಾರಿಗೆ ವ್ಯವಸ್ಥೆ ಮತ್ತು ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು. ಚತುರ ಸಾರಿಗೆ ವ್ಯವಸ್ಥೆ ಮೂಲಕ ಬಿಎಂಟಿಸಿ ಮತ್ತಷ್ಟು ಜನಸ್ನೇಹಿ ಆಗಲಿದ್ದು, ಬಸ್ಸಿನ ಕುರಿತ ಕ್ಷಣ-ಕ್ಷಣದ ಮಾಹಿತಿ ಮೊಬೈಲ್ ಮೂಲಕ ಲಭ್ಯವಾಗಲಿದೆ. [ಬಿಎಂಟಿಸಿಯ ಐಟಿಎಸ್ ಯೋಜನೆ ಬಗ್ಗೆ ತಿಳಿಯಿರಿ]

ಏನಿದು ವ್ಯವಸ್ಥೆ? : ಚತುರ ಸಾರಿಗೆ ವ್ಯವಸ್ಥೆ ಎಂದರೆ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್ (ಐಟಿಎಸ್). ಬಿಎಂಟಿಸಿ ಬಸ್ ಎಲ್ಲಿದೆ?, ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರುತ್ತದೆ?, ಸಂಚಾರ ದಟ್ಟಣೆಯಲ್ಲಿ ಸಿಲುಕಿದೆಯೇ? ಬಸ್ಸಿಗಾಗಿ ಎಷ್ಟು ಹೊತ್ತು ಕಾಯಬೇಕು? ಎಂಬ ಮಾಹಿತಿ ಈ ವ್ಯವಸ್ಥೆ ಮೂಲಕ ಜನರಿಗೆ ಲಭ್ಯವಾಗಲಿದೆ.[ಬಿಎಂಟಿಸಿ ಮಾಹಿತಿ ಬೆರಳ ತುದಿಯಲ್ಲಿ ಪಡೆಯಿರಿ]
ಚತುರ ಸಾರಿಗೆ ವ್ಯವಸ್ಥೆಯಡಿಯಲ್ಲಿ ಎಲ್ಲಾ ಬಿಎಂಟಿಸಿ ಬಸ್ಸುಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ನಿಯಂತ್ರಣ ಕೊಠಡಿಗೆ 10 ಸೆಕೆಂಡ್ಗೊಮ್ಮೆ ಎಲ್ಲಾ ಬಸ್ಸುಗಳು ಎಲ್ಲಿವೆ? ಎಂಬ ಮಾಹಿತಿ ಲಭ್ಯವಾಗುತ್ತದೆ. ಬಸ್ ಗಳಲ್ಲಿ ವಾಯ್ಸ್ ಕಿಟ್ ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ನಿರ್ವಹಾಕರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.
ಚಿಲ್ಲರೆ ಸಮಸ್ಯೆಗೆ ಮುಕ್ತಿ : ಐಟಿಎಸ್ ಯೋಜನೆಯಡಿ ಎಲ್ಲಾ ಬಸ್ಸುಗಳ ನಿರ್ವಾಹಕರಿಗೂ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ಗಳು (ಇಟಿಎಂ)ಗಳನ್ನು ನೀಡಲಾಗುತ್ತಿದೆ. ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸಲು ಅನುಕೂಲವಾಗುವಂತಹ ಸ್ಮಾರ್ಟ್ ಕಾರ್ಡ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಗಲಿದೆ.












Click it and Unblock the Notifications