ಜೆಡಿಎಸ್ ಬಿಟ್ಟಿದ್ದೇಕೆ: ಸಿಟಿ ರವಿಗೆ ವಿವರಣೆ ನೀಡಿದ ಸಿದ್ದರಾಮಯ್ಯ
Recommended Video
ಬೆಂಗಳೂರು, ಜುಲೈ 22: ಪಕ್ಷಾಂತರ ವಿಷಯ ಸದನದಲ್ಲಿ ಚರ್ಚೆ ಆದಾಗೆಲ್ಲಾ ಬಿಜೆಪಿಯು ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪಿಸದೇ ಇರುವುದಿಲ್ಲ. ಇಂದೂ ಸಹ ಸದನದಲ್ಲಿ ಹೀಗೆಯೇ ಆಯಿತು.
ಭೊಜನ ವಿರಾಮದ ನಂತರ ಕಲಾಪ ಆರಂಭವಾದಾಗ ಬಿಜೆಪಿಯ ಶಾಸಕರನ್ನು ಆಮೀಷವೊಡ್ಡಿ ಕರೆದುಕೊಂಡು ಹೋಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದರು. ಇದಕ್ಕೆ ಉತ್ತರಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಆಗ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಕ್ಕೆ ಏನು ತೆಗೆದುಕೊಂಡಿದ್ದರು ಎಂದು ಪ್ರಶ್ನೆ ಮಾಡಿದರು.
ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಎದ್ದು ಸಿ.ಟಿ.ರವಿ ಅವರಿಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಸರಿಯಾಗಿ ತಿಳಿದುಕೊಂಡಿ ಮಾತನಾಡಿ, ನಾನು ಜೆಡಿಎಸ್ ಬಿಟ್ಟು ಬಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಜೆಡಿಎಸ್ ಪಕ್ಷವನ್ನು ನಾನು ತೊರೆಯಲಿಲ್ಲ: ಸಿದ್ದರಾಮಯ್ಯ
ನಾನು ಜೆಡಿಎಸ್ ಪಕ್ಷವನ್ನು ತೊರೆಯಲಿಲ್ಲ, ಜೆಡಿಎಸ್ ಪಕ್ಷದಿಂದ ನನ್ನನ್ನು ಉಚ್ಛಾಟಿಸಲಾಯಿತು, ಆಗ ನಾನು ಉಪಮುಖ್ಯಮಂತ್ರಿ ಆಗಿದ್ದೆ ಆ ಸ್ಥಾನದಿಂದಲೂ ನನ್ನನ್ನು ಕೆಳಗೆ ಇಳಿಸಲಾಯಿತು, ನಾನು ಪಕ್ಷವನ್ನು ತೊರೆದು ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ನಿಂದ ಉಚ್ಛಾಟನೆ ಮಾಡಲಾಯಿತು: ಸಿದ್ದರಾಮಯ್ಯ
ಆಗ ನಾನು ಅಹಿಂದ ಸಂಘಟನೆ ಮಾಡುತ್ತಿದ್ದೆ. ನನ್ನನ್ನು 2005 ರ ಮೇ ತಿಂಗಳಲ್ಲಿ ಜೆಡಿಎಸ್ನಿಂದ ಉಚ್ಛಾಟಿಸಲಾಯಿತು. ಆದರೆ ನಾನು ಕೂಡಲೇ ಹೋಗಿ ಕಾಂಗ್ರೆಸ್ ಪಕ್ಷ ಸೇರಲಿಲ್ಲ. ಕಾಂಗ್ರೆಸ್ ಪಕ್ಷದ ಆಹ್ವಾನದ ಮೇರೆಗೆ ನಾನು 2006 ರಲ್ಲಿ ಕಾಂಗ್ರೆಸ್ ಸೇರಿದೆ. ಆದರೆ ನಾನು ಪಕ್ಷಾಂತರ ಮಾಡಿದೆ ಎಂಬುದು ಸುಳ್ಳು ಆಪಾದನೆ, ಸತ್ಯ ಗೊತ್ತಿದ್ದು ಮಾತನಾಡಬೇಕು ಎಂದು ಸಿದ್ದರಾಮಯ್ಯ ಅವರು ಸಿ.ಟಿ.ರವಿ ಅವರಿಗೆ ಹೇಳಿದರು.

'ನೀವು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದೀರಿ'
ನೀವು ಸ್ಥಾಪಿತ ಸರ್ಕಾರದ ಶಾಸಕರಿಗೆ ಆಮೀಷ ತೋರಿ ಅವರನ್ನು ನಿಮ್ಮ ಕಡೆ ಸೆಳೆದುಕೊಂಡಿದ್ದೀರಿ. ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಇತಿಹಾಸವನ್ನು ತಿರುಚಬಾರದು: ಸಿದ್ದರಾಮಯ್ಯ
ಅಷ್ಟೆ ಅಲ್ಲದೆ, ಸಿ.ಟಿ.ರವಿ ಅವರ ವಿರುದ್ಧ ಸಿಟ್ಟನ್ನು ವ್ಯಕ್ತಪಡಿಸಿದ ಸಿದ್ದರಾಮಯ್ಯ, 'ಇತಿಹಾಸವನ್ನು ತಿರುಚಬಾರದು, ಸದನದ ರೆಕಾರ್ಡ್ ಒಳಗೆ ತಪ್ಪು ಮಾಹಿತಿ ಹೋಗಬಾರದು' ಎಂದರು. ಅಲ್ಲದೆ 'ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷ ಬಿಟ್ಟರು' ಎಂದು ಸಿ.ಟಿ.ರವಿ ಅವರು ಹೇಳಿದ ವಿಷಯ ರೆಕಾರ್ಡ್ಗೆ ಹೋಗಬಾರದು ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ಒತ್ತಾಯಿಸಿದರು.












Click it and Unblock the Notifications