ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ರೋಷನ್ ಬೇಗ್
ಬೆಂಗಳೂರು, ಜುಲೈ 09: ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯವಾಗುವ ವೇಳೆಗೆ ಪಕ್ಷಕ್ಕೆ ಮತ್ತೊಂದು ನಿರೀಕ್ಷಿತ ಆಘಾತ ಎದುರಾಗಿದೆ. ಶಾಸಕ ಸ್ಥಾನಕ್ಕೆ ಶಿವಾಜಿನಗರದ ಶಾಸಕ ಆರ್ ರೋಷನ್ ಬೇಗ್ ಅವರು ಮಂಗಳವಾರ (ಜುಲೈ 09) ದಂದು ರಾಜೀನಾಮೆ ಸಲ್ಲಿಸಿದ್ದಾರೆ.
'ನನ್ನ ರಾಜೀನಾಮೆಗೆ ಸಿದ್ದರಾಮಯ್ಯ ಅವರು ನೇರ ಹೊಣೆ, ಮಂಗಳವಾರ ರಾಜೀನಾಮೆ ಸಲ್ಲಿಸುವೆ ಎಂದು ಭಾನುವಾರದಂದೇ ರೋಷನ್ ಬೇಗ್ ಘೋಷಿಸಿದ್ದರು. ಇಂದು ರಾಜೀನಾಮೆ ಸಲ್ಲಿಸಿ ಹೊರ ಬಂದ ನಂತರ ಮಾತನಾಡಿ, 'ನಾನು ಶಾಸಕನಲ್ಲದಿದ್ದರೂ ನಾನು ಹಜ್ ಸಮಿತಿ ಅಧ್ಯಕ್ಷನಾಗಿದ್ದೇನೆ. ನಾನು ಪ್ರತಿದಿನ ಯಾತ್ರಾರ್ಥಿಗಳ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿದೆ' ಎಂದರು.
ಕಾಂಗ್ರೆಸ್ಸಿನ 9 ಮಂದಿ ಶಾಸಕರು, ಪಕ್ಷೇತರರಾಗಿ ಕಾಂಗ್ರೆಸ್ ಜತೆ ಕೆಪಿಜೆಪಿ ವಿಲೀನಗೊಳಿಸಿದ ಶಾಸಕ ಆರ್ ಶಂಕರ್ ಹಾಗೂ ಮೂವರು ಜೆಡಿಎಸ್ ಶಾಸಕರು ಸದ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಾಲಿಗೆ ರೋಷನ್ ಬೇಗ್ ಅವರು ಸೇರಿದ್ದಾರೆ.
ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯ ನಡುವೆಯೂ ಸರ್ಕಾರವನ್ನು ಉಳಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ.
ರಾಜೀನಾಮೆ ಹಿಂಪಡೆಯುವಂತೆ ಕಾಂಗ್ರೆಸ್ ಶಾಸಕರಿಗೆ ಆಫರ್ ನೀಡಲಾಗಿದೆ, ಇಲ್ಲದಿದ್ದರೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅನರ್ಹಗೊಳಿಸುವ ಎಚ್ಚರಿಕೆಯನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದಾರೆ.

ನನ್ನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ
'ನನ್ನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಕಾಂಗ್ರೆಸ್ನಲ್ಲಿ ಪಕ್ಷದ ವ್ಯವಸ್ಥೆ ಹಾಳಾಗಲು ಸಿದ್ದರಾಮಯ್ಯ ನಡವಳಿಕೆ ಕಾರಣ. ಈ ವಿಚಾರದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಬೇಕಿಲ್ಲ. ನಮಗೆ ಸಚಿವ ಸ್ಥಾನದ ಅಗತ್ಯವಿಲ್ಲ. ರಾಮಲಿಂಗಾರೆಡ್ಡಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ' ಎಂದರು.
ಲೋಕಸಭಾ ಚುನಾವಣೆ ಮುಗಿದ ಬಳಿಕ ರೋಷನ್ ಬೇಗ್ ಅವರು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದ್ದರಿಂದ, ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿ ಪಕ್ಷದಿಂದ ಅಮಾನತು ಮಾಡಲಾಗಿತ್ತು

ಬೇಗ್ ರಾಜೀನಾಮೆ ನಂತರ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
13 ಶಾಸಕರ ರಾಜೀನಾಮೆ ಹಾಗೂ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ. ಬಿಜೆಪಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ಹಾಗೂ ಹೊಸ ಸರ್ಕಾರದ ಉದಯ ಎಲ್ಲವೂ ಸಂಭವಿಸಲಿದೆ.
ಜುಲೈ 09 ರಂದು ಬೇಗ್ ರಾಜೀನಾಮೆ ನಂತರ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
ಒಟ್ಟು ಸದಸ್ಯ ಬಲ : 211
ಕಾಂಗ್ರೆಸ್ + ಜೆಡಿಎಸ್ : 104
ಮ್ಯಾಜಿಕ್ ನಂಬರ್ : 105
ಬಿಜೆಪಿ : 105+1(ಪಕ್ಷೇತರ ಎಚ್ ನಾಗೇಶ್)
ಬಿಎಸ್ ಪಿ: 1
ಕಾಂಗ್ರೆಸ್ : 68
ಜೆಡಿಎಸ್ : 34
ಪಕ್ಷೇತರ : 1 (ಕಾಂಗ್ರೆಸ್ ಸೇರಿರುವ ಶಂಕರ್)

ರೋಷನ್ ಬಿಜೆಪಿ ಸೇರ್ಪಡೆಗೆ ಯಾರು ಅಡ್ಡಿ
ಬೆಂಗಳೂರಿನಲ್ಲಿ ಪಕ್ಷಾತೀತ ಶಾಸಕರು ಎಂಬ ಗುಂಪೊಂದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಯಾವುದೇ ಇದ್ದರೂ ಬೆಂಗಳೂರಿನಲ್ಲಿ ಸಮಪಾಲು, ಸರ್ವರಿಗೂ ಅವಕಾಶ ಎಂಬ ಅಘೋಷಿತ ವಾಕ್ಯದಡಿಯಲ್ಲಿ ಕೆಲವು ಶಾಸಕರು ಇನ್ನೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ರೋಷನ್ ಬೇಗ್ ಅವರು ಬಿಜೆಪಿ ಸೇರಲು ಮುಂದಾದಾಗ, ಬಿಜೆಪಿಯ ಬೆಂಗಳೂರು ಶಾಸಕರು ಬೆನ್ನಿಗೆ ನಿಂತು ಪಕ್ಷದ ಹೈಕಮಾಂಡ್ ತನಕ ಸುದ್ದಿ ಮುಟ್ಟಿಸಿದ್ದರು. ಆದರೆ, ಬೇಗ್ ಅವರು ಬಿಜೆಪಿ ಸೇರುವುದು ಬೇಡ ಎಂದು ಆರೆಸ್ಸೆಸ್ ಮುಖಂಡರು ಖಡಾಖಂಡಿತವಾಗಿ ಹೇಳಿದ್ದರಿಂದ ಬೇಗ್ ಗೆ ಬಾಗಿಲು ಬಂದ್ ಆಯಿತು.

ಬೇಗ್ ಗೆ ಬಿಜೆಪಿ ಬಾಗಿಲು ತೆರೆಯಬಹುದು, ಆದರೆ
ಬೆಂಗಳೂರಿನ ಶಾಸಕರ ಮೂಲಕ ಮಾಜಿ ಸಚಿವ ಎಂಜೆ ಅಕ್ಬರ್, ಮುಕ್ತಾರ್ ಅಬ್ಬಾಸ್ ನಖ್ವಿ ಸಂಪರ್ಕಿಸಿದ್ದ ಬೇಗ್ ಅವರು ಬಿಜೆಪಿ ಸೇರುವುದಕ್ಕೆ ಬೇಗ್ ಯತ್ನಿಸಿದ್ದರು. ಆದರೆ, ಬಹುಕೋಟಿ ಐಎಂಎ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದ ಬೇಗ್ ಅವರಿಗೆ ಆರೆಸ್ಸೆಸ್ ತಡೆ ಬಲವಾಯಿತು. ಈ ಹಿಂದೆ ನಕಲಿ ಛಾಪಾ ಕಾಗದ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿದ್ದರಿಂದಲೇ ಬಿಜೆಪಿ ಸೇರುವುದಕ್ಕೆ ಆರೆಸ್ಸೆಸ್ ಅಡ್ಡಿಪಡಿಸಿತ್ತು. ಆದರೆ, ಈಗ ಹೈಕಮಾಂಡ್ ನಿರ್ಧರಿಸಿದರೆ, ಆರೆಸ್ಸೆಸ್ ವಿರೋಧದ ನಡುವೆಯೂ ಬೇಗ್ ಗೆ ಬಿಜೆಪಿ ಬಾಗಿಲು ತೆರೆಯಬಹುದು.












Click it and Unblock the Notifications