ಟ್ರಾನ್ಸ್ಫಾರ್ಮರ್ಗಳ ಸ್ಥಳಾಂತರ ಪ್ರಕ್ರಿಯೆ; ಹೈಕೋರ್ಟ್ಗೆ ಬೆಸ್ಕಾಂ ಹೇಳಿಕೆ
ಬೆಂಗಳೂರು, ಏ.18. ಹೈಕೋರ್ಟ್ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡಿರುವ ಬೆಸ್ಕಾಂ ಬೆಂಗಳೂರು ಮಹಾನಗರದ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತು ಬೆಸ್ಕಾಂ ಪರ ವಕೀಲರು ಹೈಕೋರ್ಟ್ಗೆ ಸೋಮವಾರ ವರದಿಯನ್ನು ಸಲ್ಲಿಸಿದ್ದಾರೆ.
ನಗರದಲ್ಲಿ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್ ಫಾರ್ಮರ್ ತೆರವಿಗೆ ಆದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ವಿ.ಜಿ. ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಬೆಸ್ಕಾಂ ಪರ ವಕೀಲರು, ಬೆಸ್ಕಾಂ, ಬಿಬಿಎಂಪಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಅಧ್ಯಯನ ನಡೆಸಿ ಸ್ಥಳಾಂತರಿಸಬೇಕಾದ 8659 ಟ್ರಾನ್ಸ್ ಫಾರ್ಮರ್ ಗುರುತಿಸಲಾಗಿದೆ. ಆ ಪೈಕಿ 3000 ರಷ್ಟು ಟ್ರಾನ್ಸ್ಫಾರ್ಮರ್ಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ ಮತ್ತು ಎತ್ತರದ ಸ್ಥಳಕ್ಕೆ ಏರಿಸಲಾಗಿದೆ. ಉಳಿದ 5000 ಟ್ರಾನ್ಸ್ಫಾರ್ಮರ್ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಲ್ಲದೆ, ಆ ಕಾರ್ಯಕ್ಕೆ ಸುಮಾರು 100 ಕೋಟಿ ಖರ್ಚಾಗುವ ಸಾಧ್ಯತೆ ಇದ್ದು, ಆ ಮೊತ್ತದ ಟೆಂಡರ್ ಕರೆಯಲಾಗಿದೆ. ಈಗಾಗಲೇ ಟೆಂಡರ್ ಅಂತಿಮಗೊಳಿಸಿ ಏ.1 ರಿಂದ ಸ್ಥಳಾಂತರ ಕಾಮಗಾರಿಯೂ ಆರಂಭವಾಗಿದೆ ಎಂದು ವಿವರಿಸಿದರು.
ಇದು ಮಳೆಗಾಲ ಹತ್ತಿರವಾಗುತ್ತಿದೆ, ಜೊತೆಗೆ ಪರೀಕ್ಷಾ ಸಮಯವಾದ್ದರಿಂದ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ ವಿದ್ಯುತ್ ಪರಿವರ್ತಕಗಳ ಸಂಪೂರ್ಣ ಸ್ಥಳಾಂತರಕ್ಕೆ 18 ತಿಂಗಳ ಕಾಲಾವಕಾಶ ಬೇಕು. ಟೆಂಡರ್ನಲ್ಲೂ ಅದೇ ಅಂಶವನ್ನು ಪ್ರಸ್ತಾಪಿಸಲಾಗಿದೆ. ಹಾಗಾಗಿ ಸಮಯ ನೀಡಬೇಕು, ರಜೆಯ ನಂತರ ಮುಂದೂಡಿದರೆ ಅಷ್ಟರಲ್ಲಿ ಕಾಮಗಾರಿ ಪ್ರಗತಿಯ ವರದಿ ಸಲ್ಲಿಸಲಾಗುವುದು ಎಂದು ಮನವಿ ಮಾಡಿದರು. ಆ ಮನವಿಯನ್ನು ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿತು.
ಎಂಡಿಗೆ ತರಾಟೆ: ಕಳೆದ ವಿಚಾರಣೆ ವೇಳೆ ನ್ಯಾಯಪೀಠ ಟ್ರಾನ್ಸ್ಫಾರ್ಮರ್ಗಳ ಸ್ಥಳಾಂತರ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆದೇಶ ನೀಡಿತ್ತು.
"ಸಾಕಷ್ಟು ಸಮಯಾವಕಾಶ ನೀಡಿದ್ದರೂ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಳಾಂತರಿಸಿಲ್ಲ. ಇದರಿಂದ, ಸಾರ್ವಜನಿಕರಿಗೆ ಅನನುಕೂಲವಾಗುವ ಜತೆಗೆ ಅವರೇ ಜೀವವನ್ನು ಅಪಾಯಕ್ಕೆ ದೂಡಿದಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತು.
ಇತ್ತೀಚೆಗೆ ಉಲ್ಲಾಳ ಸಮೀಪದ ಮಂಗನಹಳ್ಳಿಯಲ್ಲಿ ವಿದ್ಯುತ್ ಪರಿವರ್ತಕ ಸ್ಪೋಟಗೊಂಡು ಇಬ್ಬರು ಮೃತಪಟ್ಟ ಘಟನೆಯ ಬಗ್ಗೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಮೂರು ತಿಂಗಳ ಕಾಲಾವಕಾಶ:
ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ತೆರವುಗೊಳಿಸಲು ಬಿಬಿಎಂಪಿ ಮತ್ತು ಬೆಸ್ಕಾಂಗೆ ಹೈಕೋರ್ಟ್ ಕಳೆದ ಸೆ. 15 ರಂದು ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಬೆಸ್ಕಾಂ ಪರ ವಕೀಲರು, ನಗರದಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್ಫಾರ್ಮರ್ಗಳ ತೆರವು ವಿಚಾರವಾಗಿ ಬೆಸ್ಕಾಂ ಸಲ್ಲಿಸಿರುವ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು.
ಅಲ್ಲದೆ, ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್ಫಾರ್ಮರ್ಗಳ ತೆರವುಗೊಳಿಸುವ ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ಮನೋಜ್ ಜೈನ್ ಅವರ ನೇತೃತ್ವದ ಬೆಸ್ಕಾಂ ಹಾಗೂ ಪಾಲಿಕೆಯ ಅಧಿಕಾರಿಗಳ ಉನ್ನತಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ. ಸಮಿತಿಯು ಸೆ.9ರಂದು ಸಭೆ ನಡೆಸಿದ್ದು, ಬಿಬಿಎಂಪಿ ಮತ್ತು ಬೆಸ್ಕಾಂನ ಎಲ್ಲಾ ಮುಖ್ಯ ಎಂಜಿನಿಯರ್ಗಳಿಂದ ತರಿಸಿಕೊಂಡ ವರದಿ ಪರಿಶೀಲಿಸಿ ಅಗತ್ಯ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ಅಲ್ಲದೆ, ಈಗಾಗಲೇ ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್ ಫಾರ್ಮರ್ಗಳನ್ನು ಸರ್ವೆ ನಡೆಸಿದೆ. ಹಾಗೆಯೇ, ಸ್ಥಳಾಂತರಿಸಬಹುದಾದ ಟ್ರಾನ್ಸ್ಫಾರ್ಮರ್ಗಳನ್ನು ಗುರುತಿಸಲಾಗಿದೆ. ಸ್ಥಳಾಂತರಿಸಲು ಸಾಧ್ಯವಾಗದ ಟ್ರಾನ್ಸ್ಫಾರ್ಮರ್ಗಳನ್ನು ಹೊಸ ವಿನ್ಯಾಸಕ್ಕೆ (ಸ್ಪನ್ ಪೋಲ್ ಬಳಸಿ ಅಳವಡಿಸುವುದು) ಪರಿವರ್ತಿಸಲು ನಿರ್ಧರಿಸಲಾಗಿದೆ. ಈಗಾಗಲೇ ಸ್ಥಳಾಂತರ ಕಾರ್ಯವೂ ಆರಂಭಿಸಲಾಗಿದ್ದು, ಅದನ್ನು ಪೂರ್ಣಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.












Click it and Unblock the Notifications