ಸ್ವಾತಂತ್ರ್ಯ ಹೋರಾಟಗಾರ, ಅನ್ನದಾನಯ್ಯ ಪುರಾಣಿಕ್ ನೆನಪು
ಬೆಂಗಳೂರು, ಅ.21: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಾಹಿತಿ ಅನ್ನದಾನಯ್ಯ ಪುರಾಣಿಕ್ ಅವರು (87) ಸಾಗರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅನ್ನದಾನಯ್ಯ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಅನ್ನದಾನಯ್ಯ ಪುರಾಣಿಕ್ ಅವರು ಒಬ್ಬ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. 1928ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜನಿಸಿದ್ದ ಅನ್ನದಾನಯ್ಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಮಹಾತ್ಮಾ ಗಾಂಧೀಜಿ ಜೊತೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಏಕೀಕರಣ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ನೇತೃತ್ವ ವಹಿಸಿಕೊಂಡಿದ್ದರು. ರಜಾಕಾರರಿಂದ ಕಲ್ಯಾಣ ಕರ್ನಾಟಕ ಮುಕ್ತವಾಗಲು ಶ್ರಮಿಸಿದರು.

1957ರಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದರು. ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯದರ್ಶಿಯಾಗಿದ್ದ ಅನ್ನದಾನಯ್ಯ, ಅವರು ತಮ್ಮ ಸೋದರ ಸಾಹಿತಿ ಸಿದ್ದಯ್ಯ ಪುರಾಣಿಕರ ಜೊತೆಗೂಡಿ ಕನ್ನಡ ಸಾಹಿತ್ಯ ಪರಿಷತ್ ಏಳಿಗೆಗೆ ಕಾರಣರಾದರು.
ಸ್ವಂತ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿ ಪರಿಷತ್ಗೆ ನೀಡಿದ್ದರು.. 20ಕ್ಕೂ ಹೆಚ್ಚು ಪುಸ್ತಕ ರಚಿಸಿದ್ದ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಅನ್ನದಾನಯ್ಯ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸಚಿವರಾದ ಉಮಾಶ್ರೀ, ಎಸ್.ಆರ್.ಪಾಟೀಲ ಅವರು ಭರವಸೆ ನೀಡಿದ್ದರು.
ಸ್ವಾತಂತ್ರ್ಯ ಹೋರಾಟಗಾರ ಶರ್ಮ ನಿಧನ: 1934ರಲ್ಲಿ ಗಾಂಧೀಜಿ ಉಡುಪಿಗೆ ಭೇಟಿ ನೀಡಿದ ಬಳಿಕ ಅವರ ಮಾತುಗಳನ್ನು ಕೇಳಿ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಿದ್ದ, ಪ್ರಗತಿಪರ ಕೃಷಿಕ ಉಡುಪಿ ಜಿಲ್ಲೆಯ ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ (97) ಅವರು ಬುಧವಾರ ಬೆಳಗ್ಗೆ ನಿಧನರಾದರು. ಮೃತ ಲಕ್ಷ್ಮೀನಾರಾಯಣ ಶರ್ಮ ಮೂವರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.












Click it and Unblock the Notifications