ಧವನಂ ಜ್ಯುವೆಲರ್ಸ್ ವಿರುದ್ಧ ವಂಚನೆ ಕೇಸ್
ಬೆಂಗಳೂರು, ಜೂ.26: ಗ್ರಾಹಕರಿಂದ ಚಿನ್ನ ಖರೀದಿಸಿ ಸೂಕ್ತ ಸಮಯಕ್ಕೆ ಹಣ ನೀಡಲಾಗದೆ ಕೈ ಚೆಲ್ಲಿದ ಧವನಂ ಜ್ಯುವೆಲ್ಲರ್ಸ್ ಮಳಿಗೆಯೊಂದರ ಮೇಲೆ ಸಾರ್ವಜನಿಕರು ಮುಗಿಬಿದ್ದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಗ್ರಾಹಕರನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಧವನಂ ಜ್ಯುವೆಲರ್ಸ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧವನಂ ಜ್ಯುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ವಿರುದ್ಧ 15 ಮಂದಿ ದೂರು ದಾಖಲಿಸಿದ್ದು, ರು. 65 ಲಕ್ಷ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕನಕಪುರ ರಸ್ತೆ, ಮೈಸೂರು ರಸ್ತೆ, ಆರ್ ಟಿ ನಗರ ಹಾಗೂ ವಿವಿಧ ಬಡಾವಣೆ ನಿವಾಸಿಗಳಾದ ಮಹೇಂದ್ರ, ಮುನಿಯಪ್ಪ, ರಫೀಕ್ ಬರ್ಬಾರ್, ಮಂಗಳ, ಗೌರಮ್ಮ, ಹೇಮಲತಾ, ಸುಶೀಲಾ ದೇವರಾಜ್, ನಾರಾಯಣಮ್ಮ, ಮೋಹನ್ ಇತರರು ಸಂಘಸಂಸ್ಥೆ ನಡೆಸುತ್ತಿದ್ದರು. ಸಂಸ್ಥೆಗೆ ಬೇಕಿರುವ ಹಣ ಒದಗಿಸಲು ಸಂಘದ 15 ಮಂದಿ ತಮ್ಮ ಬಳಿ ಇದ್ದ ರು. 65 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮಲ್ಲೇಶ್ವರದಲ್ಲಿರುವ ಧವನಂ ಜ್ಯುವೆಲರ್ಸ್ನಲ್ಲಿ ಮಾರಾಟ ಮಾಡಿದ್ದರು.

ಚಿನ್ನ ಖರೀದಿಸಿದ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಅವರು, ಚಿನ್ನವನ್ನು ಪರೀಕ್ಷಿಸಬೇಕಿದೆ. ಕೆಲ ದಿನಗಳ ನಂತರ ಬಂದು ಹಣ ಪಡೆಯಿರಿ ಎಂದು ಸೂಚಿಸಿದ್ದರು.ಕೆಲ ದಿನಗಳ ನಂತರ ಸಂಘದ ಸದಸ್ಯರು ಬಂದಾಗ ರು. 1.5 ಲಕ್ಷದಂತೆ 2 ಬಾರಿ ರು. 3 ಲಕ್ಷ ಬಡ್ಡಿ ಹಣ ನೀಡಿದ್ದಾರೆ. ಉಳಿದ ಹಣವನ್ನು ಮತ್ತೆ ಕೊಡುವುದಾಗಿ ತಿಳಿಸಿದ್ದರು. ಆದರೆ ಕೊಟ್ಟಿರಲಿಲ್ಲ. ಮಳಿಗೆಗೆ ಹೋಗಿ ಕೇಳಿದರೆ ಇನ್ನೂ ಪರೀಕ್ಷೆ ಮುಗಿದಿಲ್ಲ, ತಡವಾಗುತ್ತದೆ ಎಂದು ಹಾರಿಕೆ ಉತ್ತರ ಸಿಕ್ಕಿದೆ.
ನಂತರ ಸಂತ್ರಸ್ತ ಗ್ರಾಹಕರು ಒಟ್ಟಿಗೆ ಮಳಿಗೆ ಮುಂದೆ ಪ್ರತಿಭಟನೆ ಮಾಡಿದ್ದರಿಂದ ಆ ಭಾಗದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ನಂತರ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು.
ನಾವು ಸಂತ್ರಸ್ತ ಗ್ರಾಹಕರಿಗೆ ಅವರ ಬಳಿ ಇರುವ ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದೇವೆ. ಮಳಿಗೆಯ ಮಾಲೀಕರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಮಾಹಿತಿ ಎಲ್ಲವೂ ಕಲೆ ಹಾಕಿದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ(ಪೂರ್ವ) ಪಿ.ಎಸ್ ಹರ್ಷ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನದ ದರ(ಜೂ.26) 22K ಚಿನ್ನದ ಬೆಲೆ 10 ಗ್ರಾಂಗೆ 26,700 ರು ಹಾಗೂ ಅಪರಂಜಿ 28,520 ರು ನಷ್ಟಿದೆ.












Click it and Unblock the Notifications