ಪರಪ್ಪನ ಅಗ್ರಹಾರ ಜೈಲಿಗೆ ಹೆಚ್ಚಿದ ಭದ್ರತೆ
ಫೆಬ್ರವರಿ 14ರ ಸಂಜೆ ವೇಳೆಗೆ ಬೆಂಗಳೂರು ಪೊಲೀಸರ ಮುಂದೆ ಶರಣಾಗಬೇಕಿರುವ ಶಶಿಕಲಾ; ಮುನ್ನೆಚ್ಚರಿಕೆ ಕ್ರಮವಾಗಿ ಪರಪ್ಪನ ಅಗ್ರಹಾರದ ಜೈಲಿಗೆ ಭದ್ರತೆ ಹೆಚ್ಚಳ.
ಬೆಂಗಳೂರು, ಫೆಬ್ರವರಿ 14: ತಮಿಳುನಾಡು ಎಐಎಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ ಬಿಗಿಭದ್ರತೆ ಹೆಚ್ಚಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ, ಇಂದು ಸಂಜೆಯೊಳಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶರಣಾಗಬೇಕಿದೆ. ಅವರೊಂದಿಗೆ, ಅಕ್ರಮ ಆಸ್ತಿ ಪ್ರಕರಣದಲ್ಲಿ ಇತರ ಅಪರಾಧಿಗಳಾಗಿರುವ ಇಳವರಸಿ ಹಾಗೂ ಸುಧಾಕರನ್ ಅವರೂ ಬೆಂಗಳೂರಿಗೆ ಬಂದು ಶರಣಾಗಬೇಕಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರೀಯ ಕಾರಾಗೃಹಕ್ಕೆ ಬಿಗಿಬಂದೋಬಸ್ತ್ ನೀಡಲಾಗಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.[ಅಕ್ರಮ ಆಸ್ತಿ: ಶಶಿಕಲಾಗೆ ಜೈಲು, ಸುಪ್ರೀಂ ಕೋರ್ಟ್ ಆದೇಶ]
ಶಶಿಕಲಾ ಅವರು ಶರಣಾಗುವ ವೇಳೆ ಯಾವುದೇ ಅಹಿತಕರ ಘಟನೆಗಳು, ದೊಂಬಿ, ಗಲಾಟೆ ನಡೆಯದಿರಲೆಂದು ಕಾರಾಗೃಹದ ಸುತ್ತಲೂ ನಿರ್ದಿಷ್ಟ ದೂರದವರೆಗೆ 144ನೇ ಸೆಕ್ಷನ್ ಜಾರಿಗೊಳಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.[ಶಶಿಕಲಾರಿಂದ ಸುಪ್ರೀಂ ತೀರ್ಪು ಮರುಪರಿಶೀಲನಾ ಅರ್ಜಿ?]