ಬಿಳಿ ಸೀರೆ ಉಟ್ಟು ಸಾಮಾನ್ಯ ಖೈದಿಯಾದ ಶಶಿಕಲಾ!
ಬೆಂಗಳೂರು, ಜುಲೈ 22: ಪರಪ್ಪನ ಅಗ್ರಹಾರದಲ್ಲಿ ಖೈದಿಯಾಗಿದ್ದರೂ, ಸಕಲ ಸೌಲಭ್ಯಗಳನ್ನೂ ಪಡೆಯುತ್ತಿದ್ದ ತಮಿಳುನಾಡಿನ ಶಶಿಕಲಾ ನಟರಾಜನ್ ಇದೀಗ ಸಾಮಾನ್ಯ ಖೈದಿಯಂತೆ ಬಿಳಿಸೀರೆ ಉಟ್ಟು ಕುಳಿತಿದ್ದಾರೆ! ಇದು ಕಾರಾಗೃಹ ಎಡಿಜಿಪಿ ಎನ್ ಎಸ್ ಮೇಘರಿಕ್ ಖಡಕ್ ಎಚ್ಚರಿಕೆಯ ಫಲ!
ಹೌದು, ನಿನ್ನೆ(ಜುಲೈ 21) ತಾನೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ಮೇಘರಿಕ್, 'ಜೈಲಿನಲ್ಲಿರುವ ಖೈದಿಗಳೆಲ್ಲರೂ ಒಂದೇ, ಯಾರಿಗೂ ವಿಶೇಷ ಸೌಲಭ್ಯ ನೀಡುವಂತಿಲ್ಲ, ನೀಡಿದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಪೂರೈಕೆಯಾಗುತ್ತಿದ್ದ ಎಣ್ಣೆ, ಬೀಡಿ, ಸಿಗರೇಟ್, ಗಾಂಜಾ ಎಲ್ಲ ವಸ್ತುಗಳಿಗೂ ಬ್ರೇಕ್ ಬಿದ್ದಿದೆ.
ಖೈದಿಗಳಿಗೆಂದೇ ಇರುವ ಅಡುಗೆ ಮನೆಯಲ್ಲಿಯೇ ಎಲ್ಲರಿಗೂ ಅಡುಗೆ ತಯಾರಾಗಬೇಕು, ಯಾರೂ ಪ್ರತ್ಯೇಕ ಅಡುಗೆಯವರನ್ನಾಗಲೀ, ಅಡುಗೆ ಮನೆಯನ್ನಾಗಲೀ ಹೊಂದುವಂತಿಲ್ಲ ಎಂದು ಮೇಘರಿಕ್ ಹೇಳಿದ್ದರು.
ಖೈದಿಗಳಲ್ಲಿ ಸಾಮಾನ್ಯ, ವಿಐಪಿ ಎಂಬ ಭೇದವಿಲ್ಲ ಎಂಬ ಅವರ ಮಾತಿನ ಪರಿಣಾಮವಾಗಿ, ಇಷ್ಟು ನೈಟಿ ತೊಟ್ಟು ಹಾಯಾಗಿರುತ್ತಿದ್ದ ಶಶಿಕಲಾ, ಬಿಳಿ ಸೀರೆ ಉಟ್ಟು ಕೂತಿದ್ದಾರೆ! ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ನಡೆಯುತ್ತಿದೆ, ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾಜಿ ಡಿಐಜಿ (ಕಾರಾಗೃಹ) ರೂಪಾ ಅವರ ವರದಿಯಿಂದಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿರುವುದಂತೂ ಸುಳ್ಳಲ್ಲ. ಆದರೆ ಇವೆಲ್ಲ ಎಷ್ಟು ದಿನ ಎಂಬುದನ್ನು ಮಾತ್ರ ಕಾದುನೋಡಬೇಕಷ್ಟೆ!