ಸರಳ ವಿವಾಹದ ಸಪ್ತಪದಿ ಯೋಜನೆ ಯಶಸ್ವಿ; ಶ್ರೀನಿವಾಸ ಪೂಜಾರಿ
ಬೆಂಗಳೂರು, ಫೆಬ್ರವರಿ 26: "ರಾಜ್ಯಾದ್ಯಂತ ಸಪ್ತಪದಿ ಯೋಜನೆ ಯಶಸ್ವಿಯಾಗಿ ನೆರವೇರುತ್ತಿದ್ದು, ಸರಳ ವಿವಾಹದಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ" ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ನಡೆದ ಉಚಿತ ಸಾಮೂಹಿಕ ಸರಳ ವಿವಾಹ ಸಪ್ತಪದಿ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು.
"ಕೋವಿಡ್ ಕಾರಣದಿಂದಾಗಿ ಸರಳ ವಿವಾಹ ಕಾರ್ಯಕ್ರಮ ವಿಳಬಂವಾಗಿ ನಡೆದಿದ್ದು, ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ದೇವಾಲಯಗಳಲ್ಲಿ ಸಪ್ತಪದಿ ಯೋಜನೆಯಡಿ ವಿವಾಹಗಳು ನೆರವೇರಲಿದೆ" ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

"ಕೋವಿಡ್ ಸಂಕಷ್ಟದ ನಡುವೆಯೂ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಉತ್ತಮ ಬಜೆಟ್ ಮಂಡನೆ ಮಾಡಲಿದ್ದಾರೆ. ದೇವಾಲಯಗಳ ಅಭಿವೃದ್ಧಿ ಹಾಗೂ ಟ್ರಸ್ಟಿಗಳ ಸಂಖ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ" ಎಂದು ಸಚಿವರು ತಿಳಿಸಿದರು.
"ಸರಳ ಸಾಮೂಹಿಕ ವಿವಾಹ ಸಪ್ತಪದಿ ಕಾರ್ಯಕ್ರಮದಲ್ಲಿ ವರನಿಗೆ ಹೂವಿನ ಹಾರಕ್ಕೆ ರೂ 5,000, ವಧುವಿಗೆ ವಸ್ತ್ರ ಮತ್ತು ಹೂವಿನ ಹಾರಕ್ಕಾಗಿ ರೂ. 10,000 ಹಾಗೂ ನಲವತ್ತು ಸಾವಿರ ಮೌಲ್ಯದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಸೇರಿದಂತೆ ವಧು-ವರರಿಗೆ ರೂ 55,000 ಪ್ರೋತ್ಸಾಹಧನ ನೀಡಲಾಗುತ್ತಿದೆ" ಎಂದು ಸಚಿವರು ವಿವರಿಸಿದರು.
ಬಡವರಿಗೆ ಅನುಕೂಲವಾಗಲಿ ಎಂದು ಸರಳ ಸಾಮೂಹಿಕ ವಿವಾಹವನ್ನು ಆಯೋಜಿಸುವ ಯೋಜನೆಯನ್ನು ಮುಜರಾಯಿ ಇಲಾಖೆ ಆರಂಭಿಸಿದ್ದು, ಇದಕ್ಕೆ ಸಪ್ತಪದಿ ಯೋಜನೆ ಎಂದು ಹೆಸರು ಇಡಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಪ್ರಮುಖ ದೇವಾಲಯಗಳಲ್ಲಿ ಸರಳ ವಿವಾಹ ನಡೆಯಲಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ 'ಸಪ್ತಪದಿ' ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 2021ರ ಮಾರ್ಚ್ 15 ಮತ್ತು ಜೂನ್ 17ರಂದು ಆಯೋಜಿಸಲಾಗಿದ್ದು, ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಬಹುದು.












Click it and Unblock the Notifications