ಸಂಗೀತ ಕೃಪಾ ಕುಟೀರ ವಾರ್ಷಿಕೋತ್ಸವದಲ್ಲಿ ನಾದಸುಧೆ
ಬೆಂಗಳೂರು, ಏಪ್ರಿಲ್ 13: ಸಂಗೀತ ಕೃಪಾ ಕುಟೀರ ಸಂಸ್ಥೆ ತನ್ನ 32ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 16 ಹಾಗೂ 17ರಂದು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸುಧೆಯನ್ನು ಕಲಾರಸಿಕರು ಸವಿಯಬಹುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ವಹಿಸಿಕೊಂಡಿದ್ದು, ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್ ಎ ರವಿಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿದ್ದಾರೆ.

ಹಿಂದೂಸ್ತಾನಿ ಗಾಯಕಾರಾದ ಪಂಡಿತ್ ಕುಮಾರ ದಾಸ್ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾದ ವಿದುಷಿ ವಸಂತ ಮಾಧವಿ ಟಿ.ಎಸ್ ಅವರಿಗೆ ಇದೇ ಸಂದರ್ಭದಲ್ಲಿ 'ಸಂಗೀತ ಕಲಾರವಿಂದ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.ಜೊತೆ ಈ ಇಬ್ಬರು ಸಾಧಕರಿಂದ ಗಾಯನ ಕಾರ್ಯಕ್ರಮವೂ ಇರುತ್ತದೆ.
ಸ್ಥಳ: ಸ್ವಾಮಿ ವಿವೇಕಾನಂದ ವಿದ್ಯಾಶಾಲಾ
ಪಿ.ಇ.ಎಸ್ ಕಾಲೇಜು ಹಿಂಭಾಗ
ಹನುಮಂತನಗರ, ಬನಶಂಕರಿ 1ನೇ ಹಂತ
ಬೆಂಗಳೂರು- 560 050.
ಸಮಯ: ಸಂಜೆ 5ಗಂಟೆ ನಂತರ
ಸಂಪರ್ಕಿಸಿ: +91-99162 12695/080- 2677 0142

ಕುಟೀರದ ಹೆಜ್ಜೆಗಳು
ಇಂದಿಗೆ ಮೂವತ್ತೊಂದು ವರ್ಷಗಳ ಹಿಂದೆ 1984ರ ಫೆಬ್ರವರಿ 5 - ವಿಶ್ವಮಾನವ ಸ್ವಾಮಿ ವಿವೇಕಾನಂದರ ಜಯಂತಿ ಉತ್ಸವದ ಶುಭ ಸಂದರ್ಭದ ಜೊತೆಗೆ ಉದ್ಯಾನನಗರಿಯಲ್ಲಿ ಹಿಂದೂಸ್ತಾನ ಸಂಗೀತದ ಬೀಜವನ್ನು ಬಿತ್ತಿ, ನೀರೆರೆದು ಪೋಷಿಸಿ ಮಹಾವೃಕ್ಷವಾಗಿ ಬೆಳೆಸಿದವರಲ್ಲಿ ಮುಖ್ಯರಾದ ಸಂಗೀತ ಮಹಾಮಹೋಪಾಧ್ಯಾಯ ಪೂಜ್ಯ ಪಂಡಿತ್ ಆರ್. ವಿ. ಶೇಷಾದ್ರಿ ಗವಾಯಿಗಳು 60ನೇ ವಸಂತಕ್ಕೆ ಕಾಲಿಟ್ಟ ಶುಭ ಸಂದರ್ಭದಲ್ಲಿ ಪೂಜ್ಯ ಗವಾಯಿಗಳ ಶಿಷ್ಯರಾದ ಎನ್. ಎಸ್. ಗುಂಡಾಶಾಸ್ತ್ರಿ ಅವರು ತಮ್ಮ ಗುರುಗಳಿಗೆ ವಂದನೆ ಸಲ್ಲಿಸಿ, ಗುರುಗಳ ಆಶಯದಂತೆ ಆರಂಭಿಸಿದ ಸಂಗೀತ ಸಂಸ್ಥೆ ಸಂಗೀತ ಕೃಪಾ ಕುಟೀರ.
ಗುರುಗಳ ಆಶೀರ್ವಾದ ಬಲದಿಂದ ಕಳೆದ 31 ವರ್ಷಗಳಿಂದ ನಿರಂತರವಾಗಿ ಸಂಗೀತ ಶಾರದೆಯ ಉಪಾಸನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಭಾರತೀಯ ಸಂಗೀತ ಪದ್ಧತಿಯ ಎರಡು ಕವಲುಗಳಾದ ಹಿಂದೂಸ್ತಾನಿ ಹಾಗೂ ಕರ್ನಾಟಕೀ ಶೈಲಿಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಸಂಗೀತ ಪ್ರಿಯರಿಗೆ, ಕಲಾರಸಿಕರಿಗೆ ಪ್ರತಿ ತಿಂಗಳು ಸಂಗೀತ ರಸದೌತಣವನ್ನು ಉಣಬಡಿಸುತ್ತ ಉದ್ಯಾನ ನಗರಿಯ ಪ್ರತಿಷ್ಠಿತ ಸಂಗೀತ ಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡಿದೆ. ಸಂಗೀತ ಕೃಪಾ ಕುಟೀರವು ಇದುವರೆವಿಗೆ ಸುಮಾರು 370ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನಡೆಸಿದೆ. 50ಕ್ಕೂ ಹೆಚ್ಚು ಹಿರಿಯ ಸಂಗೀತ ಕಲಾವಿದರನ್ನು 'ಸಂಗೀತ ಕಲಾರವಿಂದ' ಉಪಾಧಿಯೊಂದಿಗೆ ಅಭಿನಂದಿಸುವುದರ ಜೊತೆಗೆ ವಿದ್ಯಾಕ್ಷೇತ್ರ, ಕೀರ್ತನ ಕಲೆ, ಸಾರ್ವಜನಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಸನ್ಮಾನಿಸಿದೆ.
ಕುಟೀರವು ಸ್ವಾಮಿ ವಿವೇಕಾನಂದರ, ಸಂಗೀತ ಪಿತಾಮಹ ಪುರಂದರದಾಸರ, ನಾದಬ್ರಹ್ಮ ತ್ಯಾಗರಾಜರ, ಯತಿವರೇಣ್ಯ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಗಳನ್ನು ನಡೆಸುತ್ತಿದೆ. ಜೊತೆಗೆ ಪ್ರಾಯೋಜಕರ ಸಹಕಾರದಿಂದ ಪೂಜ್ಯ ಪಂಡಿತ್ ಆರ್. ವಿ. ಶೇಷಾದ್ರಿ ಗವಾಯಿಗಳ ಪುಣ್ಯಸ್ಮರಣೆಯ ಸಂಗೀತ ಕಾರ್ಯಕ್ರಮವು ಸೇರಿದಂತೆ ಪುಣ್ಯಜೀವಿಗಳ, ಸಾಧಕರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿದೆ.












Click it and Unblock the Notifications