ಜಿ ಪರಮೇಶ್ವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು?
Recommended Video
ಬೆಂಗಳೂರು, ಅಕ್ಟೋಬರ್ 11: ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರ ಮನೆಯಲ್ಲಿ ಐಟಿ ದಾಳಿ ವೇಳೆ 70 ಲಕ್ಷ ರೂ ನಗದು ದೊರೆತಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಆದಾಯ ತೆರಿಗೆ ಇಲಾಖೆಯವರು ಗುರುವಾರ(ಅ.10)ರಂದು ಬೆಂಗಳೂರಿನಲ್ಲಿರುವ ಪರಮೇಶ್ವರ ನಿವಾಸ ಹಾಗೂ ತುಮಕೂರಿನ ಮರಳೂರಿನಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಹಾಗೂ ಡಿಗ್ರಿ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಜಾಲಪ್ಪ ಅವರ ಮಗ ರಾಜೇಂದ್ರ, ಅಳಿಯ ನಾಗರಾಜ್ ಒಡೆತನದ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸೇರಿದಂತೆ 16 ಕಡೆ ದಾಳಿ ಮಾಡಿದೆ. ಬೆಳಗ್ಗೆ 5 ಗಂಟೆಗೇ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ, ಪ್ರಮುಖ ಕಡತಗಳನ್ನು ಪರಿಶೀಲಿಸಿದ್ದಾರೆ.
ಆದರೆ ಉಪ ಚುನಾವಣೆ ಎದುರಾಗುತ್ತಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜಾಲಪ್ಪ ಅಳಿಯ ನಾಗರಾಜ್ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಐಟಿ ದಾಳಿ ಹಿಂದೆ ಅನರ್ಹ ಶಾಸಕ ಸುಧಾಕರ್ ಷಡ್ಯಂತ್ರ ಇದೆ ಅಂತ ನಾಗರಾಜ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಒಟ್ಟು 15 ಅಧಿಕಾರಿಗಳಿಂದ ಪರಿಶೀಲನೆ
ಪರಮೇಶ್ವರ ಅವರಿಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ಅಧಿಕಾರಿಗಳ ಕೈಗೆ ಸಿಕ್ಕಿದೆ. ಪರಮೇಶ್ವರ್ ಅವರ ನಿವಾಸದಲ್ಲಿ ಶೋಧ ನಡೆಸಿದ 15 ಜನ ಅಧಿಕಾರಿಗಳು ಹಣ ಹಾಗೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಮನೆಯಿಂದ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಸದಾಶಿವನಗರ ನಿವಾಸದಲ್ಲಿ 70 ಲಕ್ಷ ನಗದು ಪತ್ತೆ
ಕಾಂಗ್ರೆಸ್ ಮುಖಂಡ ಪರಮೇಶ್ವರ ಅವರ ಸದಾಶಿವನಗರ ನಿವಾಸದಲ್ಲಿಯೇ 70 ಲಕ್ಷ ರೂ. ನಗದು ಪತ್ತೆಯಾಗಿದೆ. ಜೊತೆಗೆ ಆಪ್ತ, ನೆಲಮಂಗಲ ಪುರಸಭೆ ಸದಸ್ಯ ಶಿವಕುಮಾರ್ ನಿವಾಸದಲ್ಲಿ 1.8 ಕೋಟಿ ರೂ. ನಗದು ಐಟಿ ಅಧಿಕಾರಿಗಳಿ ಸಿಕ್ಕಿದೆ. ಐಟಿ ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಇನ್ನೂ ಎರಡು ದಿನ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ಲಭಿಸಿದೆ.

ಕಾಂಗ್ರೆಸ್ ಮುಖಂಡ ಆರ್ಎಲ್ ಜಾಲಪ್ಪ ಅವರ ಕುಟುಂಬಕ್ಕೂ ಐಟಿ ಬಿಸಿ
ಮಾಜಿ ಡಿಸಿಎಂ ಪರಮೇಶ್ವರ ಮಾತ್ರವಲ್ಲದೆ, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ನ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪ ಅವರಿಗೂ ಐಟಿ ಬಿಸಿ ತಟ್ಟಿದೆ. ಕೋಲಾರ ಹೊರವಲಯದ ಟಮಕ ಬಳಿ ಇರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕಚೇರಿ, ಗೆಸ್ಟ್ ಹೌಸ್ ಹಾಗೂ ದೇವರಾಜ್ ಅರಸು ವೈದ್ಯಕೀಯ ಸಂಶೋಧನಾ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದೆ.

ಐಟಿ ದಾಳಿ ಬಗ್ಗೆ ಪರಮೇಶ್ವರ ಏನಂದ್ರು?
ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರಾ ನಡೆಸಲಿ, ಏನಾದರೂ ತಪ್ಪು ಮಾಡಿದ್ದರೆ ಬಹಿರಂಗಪಡಿಸುತ್ತಾರೆ. ನಾನು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ ಮತ್ತೇನು ಇಲ್ಲ, ದಾಳಿ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ , ಮಾಡಲಿ ಬಿಡಿ ಸಂತೋಷ ಎಂದಿದ್ದಾರೆ.












Click it and Unblock the Notifications