ಶಶಿಕಲಾ ಬರುವ ದಾರಿಯಲ್ಲಿ.. ಗಲಭೆ ಸೃಷ್ಟಿಸಲು ಸುಪಾರಿ ಕೊಟ್ಟಿದ್ರಂತೆ!
ಶಶಿಕಲಾ ಬೆಂಗಳೂರಿಗೆ ಬರುವಾಗ ಗಲಭೆ ಸೃಷ್ಟಿಸುವಂತೆ ಅತ್ತಿಬೆಲೆ ಮೂಲದ ರೌಡಿ ಶೀಟರ್ ಒಬ್ಬರಿಗೆ ಸುಪಾರಿ ನೀಡಲಾಗಿತ್ತು. ಅದರಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಶಿಕಲಾ ಶರಣಾಗಲು ಬರುವಾಗ ಗಲಭೆ ಸೃಷ್ಟಿಸಲಾಗಿತ್ತು.
ಬೆಂಗಳೂರು, ಫೆಬ್ರವರಿ 20: ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬರುವ ದಾರಿಯಲ್ಲಿ ಹಿಂಸಾಚಾರ ಆರಂಭವಾಗಿತ್ತು. ಶಶಿಕಲಾ ಬೆಂಬಲಿಗರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಲು ಆರಂಭಿಸಿದ್ದರು. ಮೇಲ್ನೋಟಕ್ಕೆ ಇದೆಲ್ಲಾ ಒ ಪನ್ನೀರ್ ಸೆಲ್ವಂ ಬೆಂಬಲಿಗರ ಕೈವಾಡದಂತೆ ಕಾಣಿಸಿತ್ತು. ಆದರೆ ಅದೆಲ್ಲಾ ಸುಳ್ಳು ಅಂತ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಸಲಿಗೆ ಶಶಿಕಲಾ ಬೆಂಗಳೂರಿಗೆ ಬರುವಾಗ ಗಲಭೆ ಸೃಷ್ಟಿಸುವಂತೆ ಅತ್ತಿಬೆಲೆ ಮೂಲದ ರೌಡಿ ಶೀಟರ್ ಒಬ್ಬರಿಗೆ ಸುಪಾರಿ ನೀಡಲಾಗಿತ್ತು. ಈತನಿಗೆ ಹಣ ನೀಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಶಿಕಲಾ ಶರಣಾಗಲು ಬರುವಾಗ ಗಲಭೆ ಸೃಷ್ಟಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಈ ರೌಡಿ ಶೀಟರ್ ಮತ್ತವರ ತಂಡ ಗಲಭೆ ಸೃಷ್ಟಿಸಿದ್ದರು.[ತಮಿಳುನಾಡು ಹೈಡ್ರಾಮ: ಸ್ಟಾಲಿನ್ ಸೇರಿ 2,000 ಜನರ ಮೇಲೆ ಎಫ್ಐಆರ್]

ಸದ್ಯ ಬೆಂಗಳೂರು ಪೊಲೀಸರ ತನಿಖೆಯಲ್ಲಿ ಈ ಎಲ್ಲಾ ವಿಚಾರಗಳು ಬಯಲಾಗಿದ್ದು ರೌಡಿ ಶೀಟರಿಗಾಗಿ ಬಲೆ ಬೀಸಿದ್ದಾರೆ.
ಶಶಿಕಲಾರನ್ನು ತಮಿಳುನಾಡು ಜೈಲಿಗೆ ವರ್ಗಾವಣೆ ಮಾಡಬೇಕು ಎಂಬ ಉದ್ದೇಶದಿಂದ ಹೀಗೆ ಗಲಾಟೆ ಮಾಡುವಂತೆ ಹೇಳಲಾಗಿತ್ತು. ಇದಕ್ಕೆ ಹಣ ನೀಡಿದವರು ಯಾರು? ಗಲಾಟೆ ನಡೆಸುವಂತೆ ಹೇಳಿದ್ದು ಯಾರು ಎಂದು ಇನ್ನೂ ತಿಳಿದು ಬಂದಿಲ್ಲ.[ಪಳನಿಸ್ವಾಮಿ ಬಹುಮತ ಸಾಬೀತಿಗೆ ಇಲ್ಲ ಚಿನ್ನಮ್ಮನ ಆಶಿರ್ವಾದ!]
ಬುಧವಾರದಂದು (ಫೆ.15) ಗಲಭೆ ನಡೆದ ದಿನ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಈ ನಾಲ್ವರು ವಿಚಾರಣೆ ವೇಳೆ ಗಲಾಟೆಯಲ್ಲಿ ಅತ್ತಿಬೆಲೆ ರೌಡಿ ಶೀಟರ್ ಕೈವಾಡ ಇರುವುದಾಗಿ ಹೇಳಿದ್ದಾರೆ. ಮಾತ್ರವಲ್ಲ ತಮಗೆ ಗಲಾಟೆ ಮಾಡುವಂತೆ ಕೆಲವು ವ್ಯಕ್ತಿಗಳು ಹಣ ನೀಡಿದ್ದಾಗಿಯೂ ಒಪ್ಪಿಕೊಂಡಿದ್ದಾರೆ. ಈಗ ರೌಡಿ ಶೀಟರನ್ನು ಬಂಧಿಸಿದರೆ ಇಡೀ ಘಟನೆಯ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆ ಇದೆ.












Click it and Unblock the Notifications