ಛಲಬಿಡದ ರೂಪಾರಿಂದ ಮತ್ತೊಂದು ವರದಿ ಸಲ್ಲಿಕೆ!
ಬೆಂಗಳೂರು, ಜುಲೈ 16 : ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ ರೂಪಾ ಡಿ ಮೌದ್ಗೀಲ್ ಅವರು ಸೋಲನ್ನೊಪ್ಪಿಕೊಳ್ಳಲು ಸಿದ್ಧರಿಲ್ಲ. ಅವ್ಯವಹಾರದ ಆರೋಪ ಹೊರಿಸಿದ್ದ ಡಿಜಿಪಿ (ಕಾರಾಗೃಹ) ಎಚ್ಎನ್ ಸತ್ಯನಾರಾಯಣ ರಾವ್ ಅವರಿಗೇ ಮತ್ತೊಂದು ಅವ್ಯವಸ್ಥೆಯ ವರದಿಯನ್ನು ಕಳಿಸಿದ್ದಾರೆ.
ಮೊದಲ ಸ್ಫೋಟಕ ವರದಿಯಲ್ಲಿ ಸಾಕಷ್ಟು ವಿವರಗಳನ್ನು ನೀಡಿದ್ದ ಡಿಐಜಿ (ಕಾರಾಗೃಹ) ರೂಪಾ ಮೌದ್ಗೀಲ್ ಅವರು, ಶನಿವಾರ ಸಲ್ಲಿಸಿರುವ ಎರಡನೇ ಆರೋಪ ಪತ್ರದಲ್ಲಿ ಏನೇನಿದೆ ಎಂಬುದನ್ನು ಮಾಧ್ಯಮಗಳಿಗೆ ನೀಡಲು ನಿರಾಕರಿಸಿದ್ದಾರೆ.
ಆದರೆ, ವರದಿಯಲ್ಲಿ ಕೇಂದ್ರ ಕಾರಾಗೃಹವನ್ನು ನಿರ್ವಹಿಸುವಲ್ಲಿ ಆಗುತ್ತಿರುವ ಲೋಪದೋಷಗಳು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಅಕ್ರಮ ಆಸ್ತಿ ಗಳಿಕೆಯ ಆರೋಪಿ ಶಶಿಕಲಾ ನಟರಾಜನ್ ಮತ್ತಿತರ ವಿವಿಐಪಿಗಳಿಗೆ ನೀಡುತ್ತಿರುವ ವಿಶೇಷ ಸವಲತ್ತುಗಳಿರುವ ಸಿಸಿಟಿವಿ ಫುಟೇಜ್ ಮಂಗಮಾಯವಾಗಿರುವ ಬಗ್ಗೆ ರೂಪಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸಂದರ್ಶಕರ ಗ್ಯಾಲರಿಯಲ್ಲಿ ಅಳವಡಿಸಲಾಗಿರುವ ಎರಡು ಸಿಸಿಟಿವಿಗಳು ಯಾವುದೇ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳುವುದಿಲ್ಲ. ಶಶಿಕಲಾಗೆ ಪ್ರತ್ಯೇಕವಾಗಿ ನೀಡಲಾಗಿರುವ ಕೋಣೆಯಲ್ಲಿ ಒಂದು ಮೇಜು ಮತ್ತು ಒಂದು ಕುರ್ಚಿಯನ್ನು ಕೂಡ ನೀಡಲಾಗಿದ್ದು, ಸಂದರ್ಶಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ರೂಪಾ ಆರೋಪಿಸಿದ್ದಾರೆ.

ಶಶಿಕಲಾರಿಂದ 2 ಕೋಟಿ ರುಪಾಯಿ ಲಂಚ!
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿಶೇಷ ಸಿಬಿಐ ಕೋರ್ಟಿನಿಂದ 4 ವರ್ಷ ಕಠಿಣ ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ನಟರಾಜನ್ ಅವರು, ಪ್ರತ್ಯೇಕ ಅಡುಗೆ ಕೋಣೆ ಸೇರಿದಂತೆ ಹಲವಾರು ಸವಲತ್ತುಗಳನ್ನು ಪಡೆದುಕೊಳ್ಳಲು ಡಿಜಿಪಿ (ಕಾರಾಗೃಹ) ಎಚ್ಎನ್ ಸತ್ಯನಾರಾಯಣ ರಾವ್ ಅವರು ಮತ್ತಿತರ ಜೈಲಧಿಕಾರಿಗಳಿಗೆ 2 ಕೋಟಿ ರುಪಾಯಿ ಲಂಚ ನೀಡಿದ್ದಾಳೆ ಎಂದು ರೂಪಾ ದೂರು ನೀಡಿದ್ದಾರೆ.

ಸರಕಾರಕ್ಕೇ ರೂಪಾ ಡಿ ಸವಾಲು
ಈ ಗುರುತರ ಆರೋಪಗಳು ಬಹಿರಂಗವಾಗುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಮತ್ತು ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಎದ್ದಿತ್ತು. ರಹಸ್ಯವಾಗಿ ಇಡಬೇಕಾಗಿದ್ದ ಇಂಥ ಪತ್ರಗಳನ್ನು ಮಾಧ್ಯಮಗಳಿಗೆ ತಿಳಿದುಬಂದಿದ್ದು ಹೇಗೆ ಎಂಬ ಆಕ್ರೋಶ ವ್ಯಕ್ತವಾಯಿತು. ಇದರಲ್ಲಿ ಮಾಡಿರುವ ಆರೋಪಗಳೆಲ್ಲ ಸತ್ಯ, ಬೇಕಿದ್ದರೆ ತನಿಖೆ ನಡೆಯಲಿ ಎಂದು ರೂಪಾ ಮೌದ್ಗೀಲ್ ಅವರು ಸರಕಾರಕ್ಕೇ ಸವಾಲ್ ಹಾಕಿದ್ದರು.

ಸತ್ಯನಾರಾಯಣ ರಾವ್ ಅವರಿಂದ ನಿರಾಕರಣೆ
ಶಶಿಕಲಾಗೆ ಪ್ರತ್ಯೇಕ ಅಡುಗೆ ಕೋಣೆ ನೀಡಲು ಲಂಚ ಪಡೆದಿದ್ದು, ವೈದ್ಯಾಧಿಕಾರಿಗಳ ಮೇಲೆ ಕೈದಿಗಳಿಂದಲೇ ಹಲ್ಲೆಗಳಾಗಿದ್ದು, ಬಹುಕೋಟಿ ನಕಲಿ ಸ್ಟಾಂಪ್ ಪೇಪರ್ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿಗೆ ವಿಶೇಷ ಸವಲತ್ತುಗಳನ್ನು ನೀಡಿದ್ದು, ಕೈದಿಗಳಿಗೆ ಗಾಂಜಾ ಮತ್ತಿತರ ಮಾದಕ ವಸ್ತುಗಳ ಪೂರೈಕೆ ಮತ್ತಿತರ ಆರೋಪಗಳನ್ನು ಎಚ್ಎನ್ ಸತ್ಯನಾರಾಯಣ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಮತ್ತೊಮ್ಮೆ ಭೇಟಿ, ಮತ್ತೊಂದು ವರದಿ
ಡಿಐಜಿ(ಕಾರಾಗೃಹ)ಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಬಾರಿಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ರೂಪಾ ಅವರು, ಇಡೀ ಜೈಲನ್ನು ಸುತ್ತಾಡಿ, ದಾಖಲೆಗಳನ್ನು ಪರಿಶೀಲಿಸಿ, ವಿಚಾರಣಾಧೀನ ಕೈದಿಗಳು ಮತ್ತು ಅಪರಾಧಿಗಳನ್ನು ಕರೆಸಿಕೊಂಡು ಮಾತನಾಡಿದ್ದರು. ಅವರ ಅಹವಾಲುಗಳನ್ನು ಸ್ವೀಕರಿಸಿದ್ದರು. ಯಾರ್ಯಾರಿಗೆ ವಕೀಲರ ಅವಶ್ಯಕತೆಯಿದೆ ಎಂಬ ಬಗ್ಗೆ ಪರಿಶೀಲಿಸಿದ್ದರು.

ನಾರಾಯಣ್ ವಿರುದ್ಧ ಮತ್ತಷ್ಟು ಆರೋಪ
ಪೊಲೀಸ್ ಇಲಾಖೆಯಲ್ಲಿ ಬಿರುಗಾಳಿಯೇಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿಯನ್ನು ಬಹಿರಂಗಪಡಿಸಿದ್ದಕ್ಕೆ ಕೆಂಡ ಕಾರಿದ್ದರು. ಇದರ ವಿರುದ್ಧ ತನಿಖೆಯಾಗಲೇಬೇಕು ಎಂದು ಆದೇಶಿಸಿದ್ದರು. ಸಿದ್ದರಾಮಯ್ಯನವರ ಆದೇಶ ಬಿದ್ದನಂತರವೂ, ಮತ್ತೊಂದು ಸುತ್ತಿನ ಮಾಹಿತಿಯನ್ನು ಕೈದಿಗಳಿಂದ ಕಲೆಹಾಕಿದ ರೂಪ್ ಮೌದ್ಗೀಲ್ ಅವರು ಎರಡನೇ ವರದಿಯನ್ನು ಸಲ್ಲಿಸಿದ್ದಾರೆ.












Click it and Unblock the Notifications