ಬೆಂಗಳೂರಲ್ಲಿ 1100 ಎಕರೆ ಭೂಮಿ ಕಬಳಿಸಿದ್ದಾರೆ ರಾಬರ್ಟ್ ವಾದ್ರಾ
ಬೆಂಗಳೂರು, ಅಕ್ಟೋಬರ್ 11 : 'ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ ವಾದ್ರಾ ಪಾಲುದಾರಿಕೆಯ ಕಂಪನಿ ಬೆಂಗಳೂರಿನಲ್ಲಿ 1100 ಎಕರೆ ಜಮೀನು ಕಬಳಿಸಿದೆ. ಸಚಿವ ಡಿ.ಕೆ.ಶಿವಕುಮಾರ್ ಇದಕ್ಕೆ ಸಹಾಯ ಮಾಡಿದ್ದಾರೆ' ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದರು.
ಬಿಜೆಪಿ ಬೆಂಗಳೂರು ನಗರ ಘಟಕದ ವಕ್ತಾರ, ಮಾಜಿ ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. '7000 ಕೋಟಿ ರೂ. ಮೌಲ್ಯದ ಭೂಮಿಯನ್ನು ಯಶವಂತಪುರ, ತಾವರೆಕೆರೆ ಹೋಬಳಿಯಲ್ಲಿ ಕಬಳಿಕೆ ಮಾಡಲಾಗಿದೆ' ಎಂದು ದೂರಿದರು.
ಭೂ ಕಬಳಿಕೆ ಕುರಿತು 437 ಪುಟದ ದಾಖಲೆ ಬಿಡುಗಡೆ ಮಾಡಿದ ಎನ್.ಆರ್.ರಮೇಶ್ ಅವರು, 'ಈ ಅಕ್ರಮದ ವಿರುದ್ಧ ಡಿಎಫ್ಎಲ್ ಸಂಸ್ಥೆಯ ಮುಖ್ಯಸ್ಥರು, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಎಸಿಬಿ, ಲೋಕಾಯುಕ್ತ, ಬಿಎಂಟಿಎಫ್ಗೆ ದೂರು ನೀಡಲಾಗಿದೆ' ಎಂದರು.
'ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ವಿರುದ್ಧ ಈಗಾಗಲೇ 13 ಎಫ್ಐಆರ್ ದಾಖಲು ಮಾಡಿಕೊಂಡಿದೆ. ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಈ ಸ್ವತ್ತುಗಳಿಗೆ ಸಂಬಂಧಿಸಿದ ಪಹಣಿ, ಖಾತೆವಾರು, ಆಕಾರ್ ಬಂದ್ ಮುಂತಾದ ದಾಖಲೆಗಳನ್ನು ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಹಾಕಬೇಕು ಎಂದು ಒತ್ತಾಯಿಸಿದರು'.. ವಿವರಗಳು ಚಿತ್ರಗಳಲ್ಲಿವೆ....

ಯಾರು-ಯಾರು ಸಹಾಯ ಮಾಡಿದ್ದಾರೆ?
'ಸರ್ಕಾರಿ ಭೂ ಕಬಳಿಕೆ, ನಕಲಿ ದಾಖಲೆ ತಯಾರಿಕೆ, ವಂಚನೆ, ಅಧಿಕಾರ ದುರುಪಯೋಗ, ಭೂ ಕಬಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಸ್.ಟಿ.ಸೋಮಶೇಖರ್, ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ್, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಜಗದೀಶ್, ತಹಶೀಲ್ದಾರ್ ಬಿ.ಆರ್.ದಯಾನಂದ, ವಿ.ಮುನಿಯಪ್ಪ, ಬಿ.ಕೆ.ಮಮತಾ, ಎಸ್.ಎಂ.ಶಿವಕುಮಾರ್ ಮತ್ತು ನಾಲ್ಕು ಗ್ರಾಮ ಲೆಕ್ಕಿಗರೂ ಸಹಾಯ ಮಾಡಿದ್ದು ಅವರ ವಿರುದ್ಧವೂ ದೂರು ನೀಡಲಾಗಿದೆ' ಎಂದು ಎನ್.ಆರ್.ರಮೇಶ್ ಹೇಳಿದರು.

ಎಲ್ಲೆಲ್ಲಿ ಭೂ ಕಬಳಿಕೆ?
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಗಂಗೇನಹಳ್ಳಿ, ವರ್ತೂರು, ವರ್ತೂರು ನರಸೀಪುರ, ಪೆದ್ದನಹಳ್ಳಿ ಗ್ರಾಮಗಳಲ್ಲಿರುವ ಭೂಮಿಯನ್ನು ಡಿಎಲ್ಎಫ್ ಕಂಪನಿ ಕಬಳಿಸಿದೆ. ಈ ಸ್ವತ್ತಿಗೆ ಸಚಿವ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿ ರಕ್ಷಣಾ ಬೇಲಿ ಹಾಕಲಾಗುತ್ತಿದೆ' ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ರೈತರಿಗೆ ಜಮೀನು ನೀಡಿಲ್ಲ
'ಕನಿಷ್ಠ 12 ವರ್ಷ ಸಾಗುವಳಿ ಮಾಡಿರುವ ಜಮೀನು ರಹಿತ ರೈತರಿಗೆ ಈ ಭೂಮಿಯನ್ನು ನೀಡಬೇಕಾಗಿತ್ತು. ಆದರೆ, ಸ್ಥಳೀಯರಲ್ಲದ ಉತ್ತರ ಭಾರತ ಮೂಲದ ಡಿಎಲ್ಎಫ್ ಕಂಪನಿಗೆ ನೀಡಲಾಗಿದೆ. ಸ್ಥಳೀಯರಲ್ಲದವರಿಗೆ ಜಮೀನು ಹಂಚಿಕೆ ಮಾಡುವುದು ಕಾನೂನು ರೀತಿ ಅಪರಾಧವಾಗಿದೆ' ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಿಂದ ಲಂಚ ಸ್ವೀಕಾರ
'ಡಿಎಲ್ಎಫ್ ಕಂಪನಿಯಿಂದ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಅಪಾರ ಪ್ರಮಾಣದ ಲಂಚ ಸ್ವೀಕರಿಸಿದ್ದಾರೆ. ಡಿ.ಕೆ.ಶಿವಕುಮಾರ್, ರಾಬರ್ಟ್ ವಾದ್ರಾ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. 1100 ಎಕರೆ ಸ್ವತ್ತುಗಳನ್ನು ಕಂಪನಿ ಮಾರಾಟ ಮಾಡುತ್ತಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ' ಎಂದು ಎನ್.ಆರ್.ರಮೇಶ್ ಹೇಳಿದರು.











Click it and Unblock the Notifications