ಗೀತಾವಿಷ್ಣುವಿಗೆ ಷರತ್ತುಬದ್ಧ ಜಾಮೀನು ಮಂಜೂರು
ಬೆಂಗಳೂರು, ಅಕ್ಟೋಬರ್ 04 : ರಸ್ತೆ ಅಪಘಾತ ಪ್ರಕರಣದಲ್ಲಿ ಗೀತಾವಿಷ್ಣುವಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಅಪಘಾತದ ಬಳಿಕ ಪರಾರಿಯಾಗಿದ್ದ ಗೀತಾವಿಷ್ಣು ಸಿಸಿಬಿ ಪೊಲೀಸರ ಮುಂದೆ ಮಂಗಳವಾರ ಶರಣಾಗಿದ್ದರು.
ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಗೀತಾವಿಷ್ಣುಗೆ ಷರತ್ತು ಬದ್ಧ ಜಾಮೀನು ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂಬ ಸಿಸಿಬಿ ಪೊಲೀಸರು ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.

ವಿಚಾರಣೆಗೆ ಸಹಕಾರ ನೀಡಬೇಕು, ಸಾಕ್ಷಿಗಳನ್ನು ನಾಶ ಮಾಡಬಾರದು, 25 ಸಾವಿರ ರೂ. ಶ್ಯೂರಿಟಿ ನೀಡಬೇಕು ಎಂದು ಸೂಚಿಸಿ ಜಾಮೀನು ಮಂಜೂರು ಮಾಡಲಾಗಿದೆ. ಗೀತಾವಿಷ್ಣು ಪರ ವಕೀಲ ಹಷ್ಮತ್ ಪಾಷಾ ವಾದ ಮಂಡನೆ ಮಾಡಿದರು.
2017ರ ಸೆ.28ರಂದು ಗೀತಾವಿಷ್ಣು ಕಾರು ಸೌತ್ ಎಂಡ್ ಸರ್ಕಲ್ ಬಳಿ ಮಾರುತಿ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕಾರು ನಾಮಫಲಕಕ್ಕೆ ಗುದ್ದಿತ್ತು. ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ್ದ ಆತನನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು.
ಅಪಘಾತದಲ್ಲಿ ಗಾಯಗೊಂಡಿದ್ದ ಗೀತಾ ವಿಷ್ಣುವನ್ನು ಪೊಲೀಸರು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಶುಕ್ರವಾರ ಮುಂಜಾನೆ 6.15ಕ್ಕೆ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಜಯನಗರ ಪೊಲೀಸರು ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಿದ್ದರು.
ಮಂಗಳವಾರ ಸಂಜೆ ಮಡಿಕೇರಿಯಲ್ಲಿ ಗೀತಾವಿಷ್ಣು ಸಿಸಿಬಿ ಪೊಲೀಸರ ಮುಂದೆ ಶರಣಾಗಿದ್ದ. ಇಂದು ಆತನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಸಿಸಿಬಿ ನೋಟಿಸ್ : ಗೀತಾವಿಷ್ಣುಗೆ ಜಾಮೀನು ಸಿಗುತ್ತಿದ್ದಂತೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಿದ್ದಾರೆ. ಗುರುವಾರ ಬೆಳಗ್ಗೆ 10.30ಕ್ಕೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಬರುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.











Click it and Unblock the Notifications