ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ, ರಾಜ್ಯದಲ್ಲೂ ಆತಂಕ'
ಬೆಂಗಳೂರು, ಜುಲೈ 10: ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದು ರಾಜ್ಯದಲ್ಲೂ ಆತಂಕ ಮೂಡಿಸಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ನಗರದಲ್ಲಿ ನಿತ್ಯ 500-600 ಪ್ರಕರಣಗಳು ಪತ್ತೆಯಾಗುತ್ತಿವೆ. ವಲಯವಾರು ಎಲ್ಲೆಲ್ಲಿ ಪ್ರಕರಣ ಹೆಚ್ಚಾಗುತ್ತಿವೆ ಎಂಬುದನ್ನು ಗುರುತಿಸಲಾಗುತ್ತಿದೆ. ಸೋಂಕಿತರ ಮನೆಗಳನ್ನು ಮೈಕ್ರೋ ಕಂಟೈನ್ಮೆಂಟ್ ವಲಯವಾಗಿ ಗುರುತಿಸಿ, ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗುತ್ತಿದೆ.
ವಿಶೇಷ ಆಯುಕ್ತ (ಆರೋಗ್ಯ), ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೋಂಕು ಹೆಚ್ಚಳ ತಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದಾರೆ. ಎಂಟು ವಲಯದಲ್ಲಿ ಹೆಚ್ಚು ಪ್ರಕರಣ ಕಂಡು ಬರುತ್ತಿದ್ದು, ಪರೀಕ್ಷೆ ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ನಿತ್ಯ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡ, ಹೆಚ್ಚಳವಾಗುವ ಸಾಧ್ಯತೆಯನ್ನೂ ತೆಗೆದುಹಾಕುವಂತಿಲ್ಲ.
ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆಯಿದೆ. ಆದರೆ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಶೇ.4 ಮತ್ತು ಶೇ.10ರಷ್ಟಿದೆ. ಆ ರಾಜ್ಯಗಳಿಂದ ಕರ್ನಾಟಕ ಹಾಗೂ ಬೆಂಗಳೂರಿಗೆ ಸಾಕಷ್ಟು ಜನರು ಪ್ರಯಾಣ ಮಾಡುತ್ತಿದ್ದು, ಇದು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಸರ್ಕಾರದ ಆದೇಶದಂತೆ ಪರಿಣಾಮಕಾರಿ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸಂಗ್ರಹ ಮಾಡಿದ ಸ್ಯಾಂಪಲ್ ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ (ಡಿಎನ್ಎ ಜೋಡಣೆಯ ಕ್ರಮ) ಪತ್ತೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಉದ್ದೇಶಕ್ಕಾಗಿಯೂ ಜಮೀನು ಮತ್ತು ಕಟ್ಟಡಗಳ ಅವಶ್ಯಕತೆ ಇದ್ದು, ಭೋಗ್ಯದ ಅವಧಿ ಮುಗಿದ ಆಸ್ತಿಯನ್ನು ಹಿಂಪಡೆಯುತ್ತೇವೆ. ಭೋಗ್ಯದ ಅವಧಿ ಮುಗಿದ ಪಾಲಿಕೆ ಆಸ್ತಿಯನ್ನು ವಾಪಸ್ ಪಡೆಯಲು ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಈ ಕುರಿತ ವರದಿಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ಕಾನೂನು ಪ್ರಕ್ರಿಯೆಯಂತೆ ವಶಕ್ಕೆ ಪಡೆಯಲಾಗುವುದು. ಭೋಗ್ಯಕ್ಕೆ ನೀಡಿರುವ ಪಾಲಿಕೆಯ ಎಲ್ಲಾ ಕಟ್ಟಡಗಳ ದಾಖಲಾತಿಗಳನ್ನು ಪುನರ್ ಪರಿಶೀಲಿಸಿ ವಶಕ್ಕೆ ಪಡೆದ ಬಳಿಕ ಇತರೆ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.
ಭೋಗ್ಯದ ಅವಧಿ ಮುಗಿದ ಆಸ್ತಿಯ ಪಟ್ಟಿ ಪರಿಶೀಲಿಸಿ ಕೂಡಲೇ ಹಿಂಪಡೆಯುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ. ಈ ಹಿಂದೆ ವಿವಿಧ ಉದ್ದೇಶಗಳಿಂದ ಸಂಘ ಸಂಸ್ಥೆಗಳಿಗೆ ಭೋಗ್ಯಕ್ಕೆ ಪಾಲಿಕೆ ಆಸ್ತಿಯನ್ನು ಕೊಟ್ಟಿರಬಹುದು. ಆದರೆ, ಈಗ ಪಾಲಿಕೆಗೆ ವಿವಿಧೋದ್ದೇಶಗಳಿಗಾಗಿ ಹಲವೆಡೆ ಭೂಮಿಯ ಅವಶ್ಯಕತೆ ಇದೆ.












Click it and Unblock the Notifications