ಅನ್ನಭಾಗ್ಯ: ಛತ್ತೀಸ್ಗಢದಲ್ಲಿ ಅಕ್ಕಿ ಲಭ್ಯವಿದೆ, ಆದರೆ ಸರ್ಕಾರಕ್ಕೆ ವೆಚ್ಚದ ಚಿಂತೆ
ಬೆಂಗಳೂರು, ಜೂನ್. 18: ಛತ್ತೀಸ್ಗಢದಲ್ಲಿ ಸುಮಾರು 1.5 ಲಕ್ಷ ಟನ್ ಅಕ್ಕಿ ಲಭ್ಯವಿದ್ದು, ಕರ್ನಾಟಕವು ತನ್ನ ಅನ್ನ ಭಾಗ್ಯ ಯೋಜನೆಗಾಗಿ ಖರೀದಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ, ಆದರೆ ಸಾರಿಗೆ ವೆಚ್ಚ ಹೆಚ್ಚು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸಲು ಒಪ್ಪದ ಕಾರಣ ಸಿದ್ದರಾಮಯ್ಯ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.
'ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರೊಂದಿಗೆ ಮಾತನಾಡಿದ್ದೇನೆ, ಆದರೆ ಆ ರಾಜ್ಯದಲ್ಲಿ ಅಕ್ಕಿ ಲಭ್ಯವಿಲ್ಲ. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಆ ರಾಜ್ಯದಲ್ಲಿ ಅಕ್ಕಿ ಲಭ್ಯತೆಯ ಬಗ್ಗೆ ತಿಳಿದುಕೊಳ್ಳಲಿದ್ದಾರೆ' ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಗಾಗಿ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮತ್ತು ಯೋಜನೆ ಅನುಷ್ಠಾನದ ಬಗ್ಗೆ ನಿರ್ಧರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಬಿಪಿಎಲ್ ಕುಟುಂಬಗಳು ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆಯನ್ನು ಪ್ರಾರಂಭಿಸಲು ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಮಾರಾಟ ಮಾಡಲು ಭಾರತೀಯ ಆಹಾರ ನಿಗಮ (ಎಫ್ಸಿಐ) ನಿರಾಕರಿಸಿದೆ. ಹೀಗಾಗಿ ಸರ್ಕಾರ ಅಕ್ಕಿ ಖರೀದಿಗೆ ಇತರ ಮೂಲಗಳನ್ನು ನೀಡುತ್ತುದೆ. ಈ ಹಿಂದೆ ಎಫ್ಸಿಐ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ನಂತರ ನಿರಾಕರಿಸಿದೆ ಎಂದು ಸರ್ಕಾರ ಆರೋಪಿಸಿದೆ.
ಉಚಿತ ಅಕ್ಕಿ ವಿತರಣೆ ಯೋಜನೆ ಜನಪ್ರಿಯತೆಗೆ ಹೆದರಿ ಕೇಂದ್ರ ಸರ್ಕಾರ 'ರಾಜಕೀಯ' ಮಾಡುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಯೋಜನೆಯನ್ನು 'ಹಾನಿ' ಮಾಡುವ ಪ್ರಯತ್ನ ಎಂದು ಆರೋಪಿಸಿದ್ದಾರೆ. ಇತ್ತ, ಎಫ್ಸಿಐ ರಾಜ್ಯಕ್ಕೆ ಅಕ್ಕಿಯನ್ನು ಮಾರಾಟ ಮಾಡದಿರುವ ತನ್ನ ನಿರ್ಧಾರವನ್ನು ಸಮರ್ಥಿಸಿದೆ .
ಈ ನಿರ್ಧಾರವು "ಉದ್ದೇಶಪೂರ್ವಕ" ಅಲ್ಲ ಮತ್ತು ಆಹಾರ ಧಾನ್ಯಗಳಲ್ಲಿನ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸುವ ತನ್ನ ಪ್ರಯತ್ನದ ಭಾಗವಾಗಿದೆ ಎಂದು ವಾದಿಸಿದೆ. ಪ್ರಸ್ತುತ ಕೇಂದ್ರದಿಂದ 5 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಹೊಸ ಯೋಜನೆಯಡಿ, ಅರ್ಹರಿಗೆ ತಲಾ 10 ಕೆಜಿ ಅಕ್ಕಿ ನೀಡಲು ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ಅಗತ್ಯವಿದೆ.
ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಕರ್ನಾಟಕದಲ್ಲಿ ಅಕ್ಕಿ ಲಭ್ಯವಿದ್ದರೂ ಕಾಂಗ್ರೆಸ್ ಸರ್ಕಾರ ಕಮಿಷನ್ಗಾಗಿ ಬೇರೆ ರಾಜ್ಯಗಳಿಂದ ಖರೀದಿಸುತ್ತಿದೆ ಎಂಬ ಆರೋಪ ಮಾಡಿದ್ದಾರೆ. ಈ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ "ರಾಜ್ಯದಲ್ಲಿ ಅಕ್ಕಿ ಲಭ್ಯವಿದ್ದರೆ ಅದನ್ನು ಖರೀದಿಸಲು ಸರ್ಕಾರಕ್ಕೆ ಸಹಾಯ ಮಾಡಲಿ" ಎಂದು ತಿರುಗೇಟು ನೀಡಿದ್ದಾರೆ. ಇನ್ನು, ಕಾಂಗ್ರೆಸ್ ಭರವಸೆಯಂತೆ ಜುಲೈ 1ರಿಂದ ಉಚಿತ ಅಕ್ಕಿ ಯೋಜನೆ ಜಾರಿಯಾಗದಿದ್ದರೆ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳಿದೆ.












Click it and Unblock the Notifications