'ಈ ಹೊತ್ತಿಗೆ' ಕಥಾ ಪ್ರಶಸ್ತಿ ಗೆದ್ದ 'ಕಾರೇಹಣ್ಣು' ಮತ್ತು 'ಜಲಜಗಂಧಿನಿ'

ಬೆಂಗಳೂರಿನ ಈ ಹೊತ್ತಿಗೆ ಸಂಸ್ಥೆಯು 2018 ರ ನವಂಬರ್ ತಿಂಗಳಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಮಧುಸೂದನ ವೈ. ಎನ್ ಅವರ ಕಾರೇಹಣ್ಣು ಕಥಾಸಂಕಲನ ಪ್ರಶಸ್ತಿಯನ್ನು ಪಡೆದುಕೊಂಡಿದೆ.

'ಈ ಹೊತ್ತಿಗೆ ಕಥಾ ಪ್ರಶಸ್ತಿ'ಗಾಗಿ ಎರಡು ವಿಭಾಗದಲ್ಲಿ ಅಪ್ರಕಟಿತ ಕಥಾ ಸಂಕಲನಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆಗಳನ್ನೇರ್ಪಡಿಸಲಾಗಿತ್ತು. ರಾಜ್ಯದ ಎಲ್ಲೆಡೆಯಿಂದ, ಹೊರ ರಾಜ್ಯಗಳಿಂದ ಹಾಗು ವಿದೇಶಗಳಿಂದ ಕತೆಗಾರರು ಈ ಹೊತ್ತಿಗೆ ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ನಾಡಿನ ಖ್ಯಾತ ಸಾಹಿತಿಗಳಾದ ಅಮರೇಶ ನುಗಡೋಣಿ, ಸುನಂದಾ ಕಡಮೆ ಹಾಗು ಕರ್ಕಿ ಕೃಷ್ಣಮೂರ್ತಿ ಅವರುಗಳು ಈ ಸ್ಪರ್ಧೆಗಳ ತೀರ್ಪುಗಾರರಾಗಿದ್ದರು. ಈ ಸ್ಪರ್ಧೆಗಳ ಫಲಿತಾಂಶ ಇದೀಗ ಪ್ರಕಟಗೊಂಡಿದ್ದು, ಇದೇ ಮಾರ್ಚ್ 10 ರಂದು ಜರುಗಲಿರುವ ಈ ಹೊತ್ತಿಗೆಯ 'ಹೊನಲು' ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಬೆಂಗಳೂರಿನ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6:30 ರವರೆಗೆ ನಡೆಯಲಿರುವ ಈ ಹೊತ್ತಿಗೆಯ 'ಹೊನಲು' ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಹಾಗು ಬಹುಮಾನ ಪ್ರದಾನ ಮಾಡಲಾಗುವುದು ಎಂದು ಈ ಹೊತ್ತಿಗೆ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಜಯಲಕ್ಷ್ಮಿ ಪಾಟೀಲ್ ತಿಳಿಸಿದ್ದಾರೆ.

ಎರಡೂ ವಿಭಾಗದ ಫಲಿತಾಂಶ ಈ ಕೆಳಗಿನಂತಿದೆ.

ಪ್ರಶಸ್ತಿ ಗೆದ್ದ 'ಕಾರೇಹಣ್ಣು'

ಪ್ರಶಸ್ತಿ ಗೆದ್ದ 'ಕಾರೇಹಣ್ಣು'

ಬೆಂಗಳೂರಿನ ಮಧುಸೂದನ ವೈ. ಎನ್ ಅವರ ಅಪ್ರಕಟಿತ ಕಥಾ ಸಂಕಲನ 'ಕಾರೇಹಣ್ಣು', 2019ರ 'ಈ ಹೊತ್ತಿಗೆ ಕಥಾ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ರೂ. 10,000 ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಜಲಜಗಂಧಿನಿ

ಜಲಜಗಂಧಿನಿ

ಕಾಲೇಜು ವಿದ್ಯಾರ್ಥಿಗಳ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿಯಲ್ಲಿ, ಸಂಖ್ಯಾಶಾಸ್ತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ಎಮ್.ಎಸ್.ಸಿ ಓದುತ್ತಿರುವ, ಯಶಸ್ವಿನಿ ಅವರು ಬರೆದ ಕಥೆ 'ಜಲಜಗಂಧಿನಿ' ಪ್ರಥಮ (ರೂ. 5000 ನಗದು ಹಾಗು ಪ್ರಮಾಣ ಪತ್ರ)

ಕಲ್ಕಿ ಕಥೆ

ಕಲ್ಕಿ ಕಥೆ

ಶಿವಮೊಗ್ಗದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಲ್ಲಿ ನಾಲ್ಕನೇ ವರ್ಷದ ಬಿ.ಇ ಓದುತ್ತಿರುವ, ಪ್ರಸನ್ನ ವೆಂಕಟರಮಣ ಭಟ್ ಅವರ ಕಥೆ 'ಕಲ್ಕಿ' ದ್ವಿತೀಯ (ರೂ. 3000 ನಗದು ಹಾಗು ಪ್ರಮಾಣ ಪತ್ರ),

ತವರಿನ ನ್ಯಾಯ

ತವರಿನ ನ್ಯಾಯ

ಹರಿಯಾಣ ರಾಜ್ಯದ ಅಶೋಕಾ ಯೂನಿವರ್ಸಿಟಿಯಲ್ಲಿ, ಇಂಗ್ಲಿಷ್ ಸಾಹಿತ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ಬಿ.ಎ ಓದುತ್ತಿರುವ ವಿಘ್ನೇಶ್ ಹಂಪಾಪುರ ಅವರ ಕಥೆ 'ತವರಿನ ನ್ಯಾಯ' ತೃತೀಯ (ರೂ. 2000 ನಗದು ಹಾಗು ಪ್ರಮಾಣ ಪತ್ರ) ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಸೈನ್ಸಸ್ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯಾದ ವಿನಾಯಕ ಹೆಗಡೆ ಅವರ 'ಹೊಸಾವತಾರ' ಮೆಚ್ಚುಗೆ ಪಡೆದ ಕಥೆಯಾಗಿದೆ.

ತೀರ್ಪುಗಾರರ ಟಿಪ್ಪಣಿ

ತೀರ್ಪುಗಾರರ ಟಿಪ್ಪಣಿ

'ಈ ಹೊತ್ತಿಗೆ ಕಥಾ ಪ್ರಶಸ್ತಿ' ವಿಜೇತ ಕಥಾ ಸಂಕಲನ 'ಕಾರೇಹಣ್ಣು' ಕುರಿತು ತೀರ್ಪುಗಾರರಾದ ಶ್ರೀ. ಅಮರೇಶ ನುಗಡೋಣಿಯವರ ಟಿಪ್ಪಣಿ.

'ಈ ಹೊತ್ತಿಗೆ ಕಥಾ ಪ್ರಶಸ್ತಿ' ಸ್ಪರ್ಧೆಗಾಗಿ ಬಂದ ಕಥಾ ಸಂಕಲನಗಳ ಪೈಕಿ ನನಗೆ ಓದಲು 9 ಕಥಾ ಸಂಕಲನಗಳನ್ನು ಕೊಡಲಾಗಿತ್ತು.ಅವುಗಳನ್ನು ಓದಿ 'ಕಾರೇಹಣ್ಣು' ಕಥಾ ಸಂಕಲನವು ಪ್ರಶಸ್ತಿಗೆ ಅರ್ಹವಾಗಿದೆ- ಎಂದು ಭಾವಿಸಿದ್ದೇನೆ.

ಯಾವುದೇ ಪ್ರಶಸ್ತಿಗೆ ತೀರ್ಪುಗಾರರಾಗುವುದು ಮುಜುಗರದ ಸಂಗತಿ. ಒಂದು ತೋಟದಲ್ಲಿ ಅರಳಿ ನಿಂತ ಹೂಗಳಲ್ಲಿ ಒಂದು ಚೆಂದದ ಹೂವು - ಎಂದು ಎತ್ತಿಕೊಳ್ಳುವುದು ಕಷ್ಟದ ಸಂಗತಿ. ಎಲ್ಲವುಗಳಿಗೆ ಅವುಗಳದ್ದೇ ಚೆಲುವು ಇದ್ದೇ ಇರುತ್ತದೆ. ಚೆಲುವನ್ನು ಅಳೆಯುವುದು ಸರಳವಾದುದ್ದಲ್ಲ.

9 ಸಂಕಲನಗಳು ಹಾಗೆ ನೋಡಿದರೆ ಪ್ರಕಟಣೆಗೆ ಅರ್ಹವಾಗಿವೆ. ಪ್ರಶಸ್ತಿಗಾಗಿ ಆಯ್ಕೆ ಮಾಡುವಾಗ ಕೂದಲೆಳೆಯ ಅಂತರವನ್ನು ಗುರುತಿಸಿ ಒಂದನ್ನುಎತ್ತಿಕೊಳ್ಳುವುದು ಕಷ್ಟ. ಮನಸ್ಸು ಅಳುಕುತ್ತದೆ. ಆದರೂ ಸ್ಪರ್ಧೆಯಲ್ಲಿ ಆಯ್ಕೆ ಎನ್ನುವುದು ಇರುತ್ತದೆ. ಅದನ್ನು ಮಾಡಿದ್ದೇನೆ.
'ಕಾರೇಹಣ್ಣು' ಕಥಾ ಸಂಕಲನದ ಕತೆಗಳು ಓದುಗನನ್ನು ಆಕರ್ಷಿಸುತ್ತವೆ. ಕಥಾವಸ್ತುಗಳಲ್ಲಿ ಭಿನ್ನತೆಯಿದೆ. ಕತೆಗಳ ನಿರೂಪಣೆಯಲ್ಲಿ ದೃಶ್ಯಗಳು ಕಣ್ಣಿಗೆ ಒತ್ತಿ ನಿಲ್ಲುತ್ತವೆ. ನುಡಿ ಬಳಕೆಯಲ್ಲಿ ನಾಜೂಕುತನವಿದೆ. ಕತೆಯ ಒಡಲಿನಿಂದಲೇ ನುಡಿ ಮೂಡಿ ಬಂದಿದೆ. ಕಥೆಯನ್ನು ತೋರಿಸುವುಕೆ ಇದೆ.- ಕಥೆ ಹೇಳುವಿಕೆ ಇಲ್ಲ. ಅನಗತ್ಯ ಎನ್ನುವುದು ಅತಿ ಕಡಿಮೆಯಿದೆ. ಕತೆಗಳ ರಚನೆಯಲ್ಲಿ ಇಂತಹ ಹೊಸತನವಿದೆ. ಅದರಿಂದಲೇ 'ಕಾರೇಹಣ್ಣು' ಕಥಾ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ 9 ಕಥಾ ಸಂಕಲನಗಳನ್ನು ಪ್ರಕಟಣೆಗೆ ಮುನ್ನ ಓದಿದ ಖುಷಿ ನನ್ನದು. ಇದಕ್ಕೆ ಅನುವು ಮಾಡಿಕೊಟ್ಟ ಎಲ್ಲರಿಗೆ ವಂದನೆಗಳು -ಅಮರೇಶ ನುಗಡೋಣಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+