ವಕೀಲರ ಮೂಲಕ ಸ್ಪೀಕರ್ಗೆ ಅತೃಪ್ತ ಶಾಸಕರ ವಿವರಣೆ
ಬೆಂಗಳೂರು, ಜುಲೈ 23: ಅತೃಪ್ತ ಶಾಸಕರ ಪರ ವಕೀಲ ಅಶೋಕ್ ಹಾರನಹಳ್ಳಿ ಸ್ಪೀಕರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿದ್ದಾರೆ.
ಸ್ಪೀಕರ್ ಬಳಿ ಚರ್ಚೆಗೆ ಸಮಯ ಕೇಳಿರುವ ಅವರು, ಸ್ಪೀಕರ್ 11 ಗಂಟೆಗೆ ಸಮಯ ನೀಡಿದ್ದಾರೆ. ಈಗಾಗಲೇ ಕಲಾಪಕ್ಕೆ ಬರುವಂತೆ ಶಾಸಕರಿಗೆ ನೋಟಿಸ್ ನೀಡಲಾಗಿದ್ದು, ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಅತೃಪ್ತ ಶಾಸಕರ ಪರ ವಕೀಲ ಅಶೋಕ್ ಮನವಿ ಮಾಡಿಕೊಳ್ಳಲಿದ್ದಾರೆ.
ಕಲಾಪ ಸರಿಯಾಗಿ10 ಗಂಟೆಗೆ ಆರಂಭವಾಗಿತ್ತು, ಸ್ಪೀಕರ್ ಹಾಗೂ ವಿರೋಧ ಪಕ್ಷ ನಾಯಕರು ಕಲಾಪಕ್ಕೆ ಬಂದಿದ್ದರೂ ದೋಸ್ತಿ ನಾಯಕರು ಗೈರಾಗಿದ್ದರು. ಈಗ ಝೀರೋ ಟ್ರಾಫಿಕ್ ಮೂಲಕ ಜೆಡಿಎಸ್ನ ಸಾರಾ ಮಹೇಶ್ ಸೇರಿ 6 ಮಂದಿ ಶಾಸಕರು ರೆಸಾರ್ಟ್ನಿಂದ ಬಸ್ಸಿನಲ್ಲಿ ಆಗಮಿಸುತ್ತಿದ್ದಾರೆ.

ಸ್ಪೀಕರ್ ನೀಡಿರುವ ನೋಟೀಸ್ ಕುರಿತಂತೆ ಅತೃಪ್ತ ಶಾಸಕರು ತಮ್ಮ ವಕೀಲರ ಮೂಲಕ ವಿವರಣೆ ನೀಡಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ರಾಜೀನಾಮೆ ನೀಡಿರುವ 13 ಮಂದಿ ಶಾಸಕರಿಗೆ ನಿಮ್ಮನ್ನು ಅನರ್ಹತೆ ಮಾಡಬಾರದೆಂಬುದು ಏಕೆ ಎಂಬ ಬಗ್ಗೆ ವಿವರಣೆ ನೀಡಬೇಕೆಂದು ನಿನ್ನೆ ಸ್ಪೀಕರ್ ರಮೇಶ್ಕುಮಾರ್ ಅವರು ನೋಟೀಸ್ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅತೃಪ್ತ ಶಾಸಕರು ನೋಟೀಸ್ಗೆ ಸಂಬಂಧಿಸಿದಂತೆ 4 ವಾರಗಳ ಕಾಲಾವಕಾಶ ನೀಡಬೇಕು. ನೋಟೀಸ್ನೀಡಿದ ನಂತರ ಕನಿಷ್ಠ 7 ದಿನಗಳಾದರೂ ಅವಕಾಶ ಕೊಡಬೇಕಾಗುತ್ತದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಅನರ್ಹತೆ ಮಾಡಬೇಕೆಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ನಮಗಿನ್ನೂ ಯಾವುದೇ ಸಾಕ್ಷ್ಯಾಧಾರಗಳು ಅಥವಾ ಮಾಹಿತಿಗಳು ಕೈ ಸೇರಿಲ್ಲ. ಏಕಾಏಕಿ ವಿಚಾರಣೆ ನಡೆಸುವುದು ಸೂಕ್ತವಲ್ಲ. ನಮಗೂ ಕೂಡ ನಮ್ಮ ಹೇಳಿಕೆಗಳನ್ನು ನೀಡಲು ಅವಕಾಶ ನೀಡಿ ಎಂದು ವಿನಂತಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗಬೇಕೆಂದು ಸ್ಪೀಕರ್ ಕಚೇರಿಯಿಂದ ರಮೇಶ್ ಜಾರಕಿಹೊಳಿ, ಮುನಿರತ್ನ , ಆರ್.ಶಂಕರ್, ಕೆ.ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಎಂ.ಟಿ.ಬಿ. ನಾಗರಾಜ್, ಪ್ರತಾಪ್ಗೌಡ ಪಾಟೀಲ್ , ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಅಡಗೂರು ಎಚ್.ವಿಶ್ವನಾಥ್, ನಾರಾಯಣ ಗೌಡ ಅವರಿಗೆ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಅವರ ಪರ ವಕೀಲರು ವಿಧಾನಸೌಧಕ್ಕೆ ಆಗಮಿಸಿದ್ದರು.
ಇವತ್ತೇ ಎಲ್ಲವೂ ಕೊನೆಯಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಶಾಸಕರಿಗೆ ನೋಟಿಸ್ ಕೊಟ್ಟಿರುವುದರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ವಿಚಾರಣೆಗೆ ಬಾರದೇ ಹೋದರೆ ಅವರಿಷ್ಟ. ನಾನು ಏನು ಹೇಳಲಿ? ನನ್ನ ಕರ್ತವ್ಯ ನಾನು ಮಾಡುತ್ತೇನೆ ಎಂದರು. ನೋಟಿಸ್ ಏಕೆ ಕೊಡುತ್ತಾರೆ ಎಂಬ ತಿಳಿವಳಿಕೆ ಇಲ್ಲ.
ಸ್ಪೀಕರ್ ಏನು ನಿಮ್ಮ ದಾಯಾದಿಯೇ? ತಿಳಿವಳಿಕೆ ಕೊರತೆ ಇದ್ದರೆ ನಾನು ಏನು ಮಾಡಲು ಗೊತ್ತಿಲ್ಲ. ರಾಜೀನಾಮೆ ಹೇಗೆ ಕೊಡಬೇಕು ಎನ್ನುವುದು ಗೊತ್ತಿಲ್ಲ. ಶಾಸಕರಾಗಿ ಬರ್ತೀರಿ. ನಿಮ್ಮ ಕರ್ಮಕ್ಕೆ, ದೇಶದ ಕರ್ಮಕ್ಕೆ. ನಾನು ಹೇಳಿಕ್ಕೆ ಆಗುತ್ತದೆಯೇ? ಎಂದು ಸಿಟ್ಟಿನಿಂದ ಹೇಳಿದರು. ಇವತ್ತೇ ಕಡೆ. ಎಲ್ಲ ಮುಗಿಯುತ್ತೆ. ನನ್ನ ಕರ್ತವ್ಯ ಮಾಡುತ್ತೇನೆ.
ನೋಟಿಸ್ ಯಾಕೆ ಕೊಡ್ತಾರೆ ಎಂದು ಕನಿಷ್ಠ ತಿಳಿವಳಿಕೆ ಇಲ್ಲದೆ ಶಾಸಕರಾಗಿ ಮೆರೆಯೋಕೆ ಬರ್ತಾರೆ. ಕೋರ್ಟ್ನಲ್ಲಿ ಅವರು ಏನು ಹೇಳಿಕೊಳ್ಳುತ್ತಾರೋ ಹೇಳಿಕೊಳ್ಳಲಿ ಎಂದು ಹೇಳಿದರು.











Click it and Unblock the Notifications