100 ಕೋಟಿ ಆಸ್ತಿ ಮಾಡಿಟ್ಟೆ, ಒಬ್ಬನೇ ಮಗ ಎಲ್ಲ ಬಿಟ್ಟೋದ: ಭೂಮಿಕ್ ತಂದೆ ಗೋಳಾಟ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿದ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಹಾಸನದ ಭೂಮಿಕ್ ಕೂಡ ಒಬ್ಬರು. ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದ ಭೂಮಿಕ್, ಮನೆಯಲ್ಲಿ ಯಾರಿಗೂ ಹೇಳದೆ ಆರ್ಸಿಬಿ ಸಂಭ್ರಮಾಚರಣೆಗೆ ಬಂದಿದ್ದರು. ಆದರೆ ಕಾಲ್ತುಳಿತದಲ್ಲಿ ಜೀವಬಿಟ್ಟ ಮಗನನ್ನ ನೆನೆದು ಭೂಮಿಕ್ ತಂದೆ ಗೋಳಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 100 ಕೋಟಿ ಆಸ್ತಿ ಮಾಡಿಟ್ಟೆ, ಆದ್ರೆ ಅವನು ಹೊತ್ಕೊಂಡು ಹೋದ್ನಾ? ಎಂದು ಮಗನ ಶವದ ಎದುರು ಕಣ್ಣೀರಿಟ್ಟಿದ್ದಾರೆ.
ನನ್ನ ಮಗ ಬೀದಿ ಹೆಣ ಆಗೋದ, ಅವನನ್ನ ಬಿಟ್ಟು ಒಂದು ಗಂಟೆಯೂ ಇರುತ್ತಿರಲಿಲ್ಲ, ಇಂಜಿನಿಯರ್ ಓದ್ತಿದ್ದ, ನನ್ನ ಮಗನನ್ನ ಆಂಬುಲೆನ್ಸ್ ಇಲ್ಲದೆ ಜೀಪ್ನಲ್ಲಿ ತುಂಬಿಕೊಂಡು ಬಂದಿದ್ದಾರೆ. ಅವನನ್ನ ಎಷ್ಟು ಮುದ್ದಾಗಿ ಸಾಕಿದ್ದೆ? ಪ್ರಪಂಚದಲ್ಲಿ ಯಾರಿಗೂ ಈ ರೀತಿ ಆಗೋದು ಬೇಡ ಎಂದು ಭೂಮಿಕ್ ತಂದೆ ಆಸ್ಪತ್ರೆಯಲ್ಲಿ ಗೋಳಾಡಿದ್ದಾರೆ. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ನನ್ನ ಮಗನ ಶವಪರೀಕ್ಷೆ ನಡೆಸಬೇಡಿ, ಅವನ ದೇಹವನ್ನು ಕತ್ತರಿಸಬೇಡಿ ಎಂದು ತಂದೆ ಅಧಿಕಾರಿಗಳಿಗೆ ಅಂಗಾಲಾಚಿದ್ದಾರೆ.

ಕನಿಷ್ಠ ಪಕ್ಷ ಅವನ ಶವವನ್ನಾದರೂ ನನಗೆ ಕೊಡಿ, ಮರಣೋತ್ತರ ಪರೀಕ್ಷೆ ಮಾಡಬೇಡಿ. ಅವನ ಶವವನ್ನು ತುಂಡು ತುಂಡು ಮಾಡಬೇಡಿ. ನನಗೆ ಅವನು ಒಬ್ಬನೇ ಒಬ್ಬ ಮಗ. ಈಗ ನಾನು ಅವನನ್ನು ಕಳೆದುಕೊಂಡಿದ್ದೇನೆ. ಅವನು ನನಗೆ ಹೇಳದೆ ಇಲ್ಲಿಗೆ ಬಂದಿದ್ದ. ಈಗ ಅವನು ಜೀವಂತವಾಗಿಲ್ಲ, ಈಗ ಇಲ್ಲಿಗೆ ಸಿಎಂ, ಡಿಸಿಎಂ ಎಲ್ಲರೂ ಭೇಟಿ ನೀಡಬಹುದು. ಆದ್ರೆ ನನ್ನ ಮಗನನ್ನ ಯಾರೂ ವಾಪಸ್ ತರಲು ಸಾಧ್ಯವಿಲ್ಲ ಎಂದು ಬಿಕ್ಕಳಿಸಿ ಅತ್ತಿದ್ದಾರೆ.
ರಾತ್ರಿ ಹಗಲು ಎನ್ನದೆ ಅವನಿಗಾಗಿ ಕೋಟಿ ಕೋಟಿ ಹಣ ಮಾಡಿಟ್ಟೆ, ಹತ್ತಾರು ಜನಕ್ಕೆ ಅನ್ನ ಹಾಕುತ್ತಿದ್ದೆ. ನೂರು ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ. ಆದ್ರೆ ಅವನು ಹೊತ್ಕೊಂಡು ಹೋದ್ನಾ? ಅವನಿಗೆ ಸ್ವರ್ಗವೇ ಇಲ್ಲಿತ್ತು, ಅವನು ಹೇಗಿದ್ದನೋ ಹಾಗೆಯೇ ಕಳಿಸಿಕೊಡ್ತೀನಿ, ನನ್ನ ಸಲಹೆಗಳನ್ನು ಅವನೂ ತೆಗೆದುಕೊಳ್ತಿರಲಿಲ್ಲ, ಈಗ ನಾನು ಕೂಡ ಯಾರ ಸಲಹೆಯನ್ನೂ ತೆಗೆದುಕೊಳ್ಳಲ್ಲ ಎಂದು ಅಂತ್ಯಕ್ರಿಯೆ ವೇಳೆ ಭೂಮಿಕ್ ತಂದೆ ಕಣ್ಣೀರಿಟ್ಟಿದ್ದಾರೆ.
ಭೂಮಿಕ್ ಹಿನ್ನೆಲೆ ಏನು?
ಭೂಮಿಕ್ ಲಕ್ಷ್ಮಣ ಹಾಗೂ ಅಶ್ವಿನಿ ದಂಪತಿಯ ಒಬ್ಬನೇ ಮಗ, ಕಳೆದ ಇಪ್ಪತ್ತು ವರ್ಷಗಳಿಂದಲೂ ಲಕ್ಷ್ಮಣ್ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದು, ಭೂಮಿಕ್ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ. ಬುಧವಾರ ಕೂಡ ಎಂದಿನಂತೆ ಕಾಲೇಜಿಗೆ ತೆರಳಿ ನಂತರ ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದ. ಅಲ್ಲಿ ಜನದಟ್ಟಣೆ ಹೆಚ್ಚಾಗಿ ಕಾಲ್ತುಳಿತದಲ್ಲಿ ಇಹಲೋಕ ತ್ಯಜಿಸಿದ್ದ. ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭೂಮಿಕ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಭೂಮಿಕ್ ಹುಟ್ಟೂರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪುಗೋಡು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications