ಸಿದ್ದು ಸರಕಾರದಲ್ಲಿ ಬೆಂಗ್ಳೂರಿಗರ ಪಡಿಪಾಟಲು: ರಾಜೀವ್ ಚಂದ್ರಶೇಖರ್
ಬೆಂಗಳೂರು, ಏಪ್ರಿಲ್ 21 : ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಮಾಡುವ ಕೆಲಸ ಏನೆಂದರೆ, ಕರ್ನಾಟಕ ಕಾಂಪೋಸ್ಟಿಂಗ್ ಡೆವಲಪ್ ಮೆಂಟ್ ಕಾರ್ಪೊರೇಷನ್ (ಕೆಸಿಡಿಸಿ) ಅನ್ನು ಮುಚ್ಚುವುದು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೂಡ್ಲು, ಹೊಸಪಾಳ್ಯ, ಎಚ್ ಎಸ್ ಆರ್ ಲೇಔಟ್, ಸೋಮಸುಂದರಪಾಳ್ಯ, ಪರಂಗಿಪಾಳ್ಯ ಮತ್ತು ಗಾರ್ಡನ್ ಲೇಔಟ್ ಸುತ್ತಮುತ್ತಲ ಪ್ರದೇಶದವರು ಕೆಸಿಡಿಸಿ ಘಟಕದ ದುರ್ನಾತ ಹಾಗೂ ಮಾಲಿನ್ಯದಿಂದ ಬಹಳ ಕಾಲದಿಂದ ತೊಂದರೆ ಅನುಭವಿಸಿದ್ದಾರೆ. ಇಪ್ಪತ್ತೈದು ಸಾವಿರ ನಾಗರಿಕರ ಸಮಸ್ಯೆಯನ್ನು ಅಧಿಕಾರಿಗಳು ಸಹ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಒಂದೋ ಸರಕಾರ ಹಾಗೂ ಅಧಿಕಾರಿಗಳು ಸೇರಿ ಈ ಘಟಕವನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ಅಲ್ಲಿನ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲಿನ ನಾಗರಿಕರು ಈ ಬಗ್ಗೆ ಮುಖ್ಯಮಂತ್ರಿ ಆದಿಯಾಗಿ ನಗರಾಭಿವೃದ್ಧಿ ಸಚಿವರಿಗೆ ಮತ್ತು ಸದಾ ಸಮಿತಿಗೆ ಕೂಡ ದೂರನ್ನು ನೀಡಿದ್ದಾರೆ. ಹಾನಿಕಾರಕ ರಾಸಾಯನಿಕಗಳನ್ನು ಇಲ್ಲಿನ ಕೆರೆಗೆ ಬಿಡಲಾಗುತ್ತಿದೆ ಎಂದು ದೂರು ನೀಡಿ, ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಕಳೆದ ವರ್ಷ ಇದೇ ಕೆಸಿಡಿಸಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೇ ರೀತಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ಕೆಸಿಡಿಸಿ ಘಟಕವನ್ನೇ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅದೂ ಸೋಮಸುಂದರಪಾಳ್ಯ ಕೆರೆಯ ಭಾಗವಾಗಿ ನಿರ್ಮಿಸಲಾಗಿದೆ ಎಂಬುದು ಆರೋಪ.
ರಾಜೀವ್ ಚಂದ್ರಶೇಖರ್, ಶಾಸಕ ಸತೀಶ್ ರೆಡ್ಡಿ ಸಂಬಂಧಪಟ್ಟವರನ್ನು ಭೇಟಿ ಆಗಿ, ಪರಿಸ್ಥಿತಿ ಪರಾಮರ್ಶಿಸುವಂತೆ ಹಾಗೂ ಕೆಸಿಡಿಸಿ ಘಟಕ ಕೆರೆ ಒತ್ತುವರಿ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
"ಕಳೆದ ನಲವತ್ತು ವರ್ಷಗಳಿಂದ ಬೆಂಗಳೂರಿನಲ್ಲಿರುವ ನಾನು, ಕಳೆದ ಐದು ವರ್ಷದಲ್ಲಿ- ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಬೆಂಗಳೂರಿಗರು ಇಷ್ಟು ಪಾಡು ಪಟ್ಟಿರುವುದು ನೋಡಿಲ್ಲ. ಇದು ಸಾರ್ವಜನಿಕ ಆರೋಗ್ಯದ ಸಮಸ್ಯೆ. ಇದು ಸಿದ್ದರಾಮಯ್ಯ ಸರಕಾರದ ವೈಫಲ್ಯ" ಎಂದಿದ್ದಾರೆ ರಾಜೀವ್ ಚಂದ್ರಶೇಖರ್.












Click it and Unblock the Notifications