RR ನಗರ ಮತದಾನ ಮುಕ್ತಾಯ, ಮೇ 31ಕ್ಕೆ ಫಲಿತಾಂಶ
ಬೆಂಗಳೂರು, ಮೇ 28: ಚುನಾವಣಾ ಅಕ್ರಮದಿಂದಾಗಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ಮುಗಿದಿದೆ.
ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ 9000 ಕ್ಕೂ ಹೆಚ್ಚು ಮತದಾರ ಗುರುತಿನ ಚೀಟಿ ಸಿಕ್ಕಿತ್ತು ಜೊತೆಗೆ ಕಂಟೇನರ್ ಒಂದರಲ್ಲಿ ಮುನಿರತ್ನ ಅವರ ಚಿತ್ರವುಳ್ಳ ಟೀಶರ್ಟ್ ದೊರಕಿತ್ತು.
ಮತದಾರರ ಗುರುತಿನ ಚಿತ್ರ ದೊರಕಿದ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆದ ಕಾರಣ ಚುನಾವಣಾ ಆಯೋಗವು ರಾರಾನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಿತ್ತು. ಹಾಗಾಗಿ ಇಂದು ಈ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಇವಿಎಂ ಮಷೀನ್ಗಳಲ್ಲಿ ಭದ್ರವಾಗಿದೆ. ಫಲಿತಾಂಶ ಇದೇ ತಿಂಗಳ 31ಕ್ಕೆ ಹೊರಬೀಳಲಿದೆ.

ಇಂದು ಸಂಜೆ 5 ಗಂಟೆ ವೇಳೆಗೆ ಶೇ 50 ರಷ್ಟು ಮತದಾನವಾದ ಬಗ್ಗೆ ಮಾಹಿತಿ ದೊರೆತಿದ್ದು, ಒಟ್ಟಾರೆ ಮತದಾನದ ಶೇ. ಲೆಕ್ಕ ಚುನಾವಣಾ ಆಯೋಗ ಇನ್ನೂ ನೀಡಿಲ್ಲ.
ಬಿಜೆಪಿ ಶಾಸಕ ಆರ್.ಅಶೋಕ್, ಮಾಳವಿಕಾ, ಅವಿನಾಶ್, ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಸುಚಿತೇಂದ್ರ ಪ್ರಸಾದ್, ಪವಿತ್ರ ಲೋಕೇಶ್ ಇನ್ನೂ ಹಲವು ಪ್ರಮುಖರು ಇಂದು ತಮ್ಮ ಮತ ಚಲಾಯಿಸಿದರು.
ಆರ್ ಆರ್ ನಗರ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಬಿಕ್ಷುಕರು ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಪುನರ್ವಸತಿ ಕೇಂದ್ರದಲ್ಲಿ 850 ಭಿಕ್ಷುಕರಿದ್ದು, ಅವರಲ್ಲಿ ಬುದ್ಧಿಮಾಂದ್ಯರನ್ನು ಹೊರತುಪಡಿಸಿ ಉಳಿದವರಿಗೆ ಮತದಾನ ಸೌಲಭ್ಯ ಕಲ್ಪಿಸಲಾಗಿತ್ತು.

ಮತದಾನವು ಶಾಂತಿಯುತವಾಗಿ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಲಗ್ಗೆರೆಯ 154ನೇ ಮತಗಟ್ಟೆಯಲ್ಲಿ ಇವಿಎಂನಲ್ಲಿ ಕಾಣಿಸಿಕೊಂಡಿದ್ದ ದೋಷವನ್ನು ಅಧಿಕಾರಿಗಳು ಸರಿಪಡಿಸಿದ್ದಾರೆ. ಈ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು.
ಮತೆಣಿಕೆಯು ಮೇ 31ರಂದು ನಡೆಯಲಿದ್ದು, ಫಲಿತಾಂಶದ ದಿನ ಗಲಾಟೆ ಆಗುವ ಬಗ್ಗೆ ಪೊಲೀಸ್ ಗುಪ್ತಚರ ಇಲಾಖೆಗೆ ಮಾಹಿತಿ ಇರುವ ಕಾರಣ ಅಂದು ಕ್ಷೇತ್ರದಲ್ಲಿ ನಿಷೇಧಾಜ್ಞೆಯನ್ನು ಆಯುಕ್ತ ಸುನಿಲ್ ಕುಮಾರ್ ಜಾರಿಗೊಳಿಸಿದ್ದಾರೆ.
ರಾರಾನಗರ ಕ್ಷೇತ್ರದಲ್ಲಿ ಒಟ್ಟು 14 ಮಂದಿ ಚುನಾವಣೆ ಕಣದಲ್ಲಿದ್ದಾರೆ ಆದರೆ ಪ್ರಮುಖವಾಗಿ ಸ್ಪರ್ಧೆ ನಡೆಯುತ್ತಿರುವುದು ಕಾಂಗ್ರೆಸ್ನ ಮುನಿರತ್ನ, ಜೆಡಿಎಸ್ನ ಜಿ.ಎಚ್. ರಾಮಚಂದ್ರಪ್ಪ ಮತ್ತು ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರ ನಡುವೆ. ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚಾ ವೆಂಕಟ್ ಕೂಡ ಸ್ಪರ್ಧಿಸಿದ್ದಾರೆ.












Click it and Unblock the Notifications