ಅ.12ಕ್ಕೆ ಆರ್. ಆರ್.ನಗರದಿಂದ ಜೆಡಿಎಸ್ ಅಭ್ಯರ್ಥಿ ನಾಮಪತ್ರ
ಬೆಂಗಳೂರು, ಅಕ್ಟೋಬರ್ 11: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ, ಅಭ್ಯರ್ಥಿ ಯಾರು? ಎಂಬುದನ್ನು ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಅಭ್ಯರ್ಥಿ ಯಾರೆಂದು ಭಾನುವಾರ ಅಂತಿಮಗೊಳಿಸಿ, ಸೋಮವಾರ ನಾಮಪತ್ರ ಸಲ್ಲಿಸಲಾಗುತ್ತದೆ" ಎಂದು ಹೇಳಿದ್ದಾರೆ. ಅಕ್ಟೋಬರ್ 17 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಆರ್. ಆರ್. ನಗರ ಟಿಕೆಟ್ ಘೋಷಣೆ; ಕುಸುಮಾ ಫೇಸ್ ಬುಕ್ ಪೋಸ್ಟ್
ಆರ್. ಆರ್. ನಗರ ಕ್ಷೇತ್ರಕ್ಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್, ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ಮತ್ತು ಜ್ಞಾನ ಭಾರತಿ ಕೃಷ್ಣಮೂರ್ತಿ ಅವರ ಹೆಸರು ಚಾಲ್ತಿಯಲ್ಲಿದೆ.
ಆರ್. ಆರ್. ನಗರ ಉಪ ಚುನಾವಣೆ; ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
"ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರಗಳನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ರಾಜರಾಜೇಶ್ವರಿ ನಗರ ಮೊದಲಿನಿಂದಲೂ ಜೆಡಿಎಸ್ ಪ್ರಭಾವ ಇರುವ ಕ್ಷೇತ್ರ. ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿ" ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಶಿರಾ ಉಪ ಚುನಾವಣಾ ಅಖಾಡಕ್ಕೆ ಬಿಗ್ ಬಾಸ್ ಸ್ಪರ್ಧಿ!
ನವೆಂಬರ್ 3ರಂದು ಚುನಾವಣೆ
ನವೆಂಬರ್ 3ರಂದು ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಶಿರಾ ಕ್ಷೇತ್ರಕ್ಕೆ ದಿ. ಬಿ. ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಆದರೆ, ಆರ್. ಆರ್. ನಗರ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ
"ಮೂವರು ಶಾಸಕರು ಪಕ್ಷ ಬಿಟ್ಟು ಹೋದರು. ಯಾರಾದರೂ ಹೋಗುವವರಿದ್ದರೆ ನಾನೇ ಮೈಸೂರು ಪೇಟ ತೊಡಿಸಿ, ಸನ್ಮಾನಿಸಿ ಕಳಿಸುತ್ತೇನೆ. ಬರುತ್ತಾರೆ, ಹೋಗುತ್ತಾರೆ. ಆದರೆ, ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಇಂತಹ ಪ್ರಶ್ನೆ ನಮ್ಮ ಮುಂದಿಲ್ಲ
ಮುನಿರತ್ನಗೆ ಬಿಜೆಪಿ ಟಿಕೆಟ್ ಕೈ ತಪ್ಪಿದರೆ ಜೆಡಿಎಸ್ ಅವಕಾಶ ನೀಡಬಹುದು ಎಂಬ ಸುದ್ದಿಗಳು ಹಬ್ಬಿವೆ. ಈ ಸುದ್ದಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಚ್. ಡಿ. ಕುಮಾರಸ್ವಾಮಿ "ಅಂತಹ ಪ್ರಶ್ನೆಯೇ ನಮ್ಮ ಮುಂದಿಲ್ಲ. ಯಾವುದೇ ಚರ್ಚೆಯೂ ನಡೆದಿಲ್ಲ. ಹೀಗಿರುವಾಗ ಈ ಪ್ರಶ್ನೆಗೆ ಉತ್ತರಿಸಲು ನಾನು ಬಯಸುವುದಿಲ್ಲ" ಎಂದು ಹೇಳಿದರು.
Recommended Video
ಒಕ್ಕಲಿಗರು ನಿರ್ಣಾಯಕ
ಆರ್. ಆರ್. ನಗರ ಕ್ಷೇತ್ರದಲ್ಲಿ ಸುಮಾರು 1,20,000 ಒಕ್ಕಲಿಗರು ಇದ್ದಾರೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ 60 ಸಾವಿರ ಮತಗಳನ್ನು ಪಡೆದಿದ್ದರು.