ಜಯನಗರದಲ್ಲಿ 29ನೇ ವರ್ಷದ ಪುರಂದರ ದಾಸರ ಸಂಸ್ಮರಣೋತ್ಸವ
ಬೆಂಗಳೂರು, ಮಾರ್ಚ್ 07: ದೇವಗಿರಿ ಲಕ್ಷ್ಮೀಕಾಂತ ಸಂಘದ ವತಿಯಿಂದ ಮಾ 6, ಬುಧವಾರ ಜಯನಗರ 8ನೇ ಬ್ಲಾಕ್ನ ಬೆಳಗೋಡು ಕಲಾ ಮಂಟಪದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ವಿಶಿಷ್ಟವಾದ 29ನೇ ವರ್ಷದ ಪುರಂದರದಾಸರ ಸಂಸ್ಮರಣೋತ್ಸವಕ್ಕೆ ರಾಮೋಹಳ್ಳಿ ಶ್ರೀ ಮಧ್ವನಾರಾಯಣ ಆಶ್ರಮದ ಸಂಸ್ಥಾಪಕರಾದ ಶ್ರೀ ವಿಶ್ವಭೂಷಣ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
'ಸಂಸ್ಕೃತಿಯ ಉದ್ದೀಪನ, ಸಂಸ್ಕಾರ ನೀಡುವ ಸಂದೇಶಗಳು ಇರುವ ದಾಸರ ಹಾಡುಗಳನ್ನೆಲ್ಲಾ ಸಂಶೋಧಿಸಿ ಹೊರತೆಗೆದು ದಾಸಸಾಹಿತ್ಯದ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳ ಪುನರ್ ಪ್ರತಿಷ್ಠಾಪನೆಯಾಗಬೇಕಿದೆ. ಮತವನ್ನು ಮೀರಿ ಮತಿ ನೀಡುವ, ಸದ್ಗತಿ ನೀಡಬಲ್ಲ ಮಾನವ ನೀತಿಗಳ ಅಡಕವೇ ದಾಸಸಾಹಿತ್ಯವೆಂದು ಮತ್ತಷ್ಟು ದಿಟ್ಟವಾಗಿ, ದಟ್ಟವಾಗಿ ಸಾರುವ ಕೆಲಸ ಆಗಬೇಕಿದೆ. ಮನುಷ್ಯರ ಮನಸ್ಸು, ಬುದ್ಧಿ, ರೀತಿ ನೀತಿಗಳನ್ನು ದಾಸರು ಪರಿಣಾಮಕಾರಿಯಾಗಿ ತಿದ್ದಿರುವ, ವ್ಯಕ್ತಿತ್ವಗಳನ್ನು ರೂಪಿಸಿರುವ, ಶತಮಾನಗಳ ಕಾಲ ಲಕ್ಷ ಲಕ್ಷ ಜನರ ಮುಕ್ತ ವಿಶ್ವವಿದ್ಯಾಲಯವಾಗಿ ಕೆಲಸ ಮಾಡಿ ಮಹತ್ವದ ಕೊಡುಗೆಯನ್ನ ನೀಡಿರುವುದನ್ನು ಪ್ರಭಾವಪೂರ್ಣವಾಗಿ ಗಟ್ಟಿ ದನಿಯಲ್ಲಿ ಎಲ್ಲರಿಗೂ ಮನಗಾಣಿಸಿಕೊಡಬೇಕಾಗಿದೆ ಎಂದು ತಿಳಿಸಿದರು.
ದೇವಗಿರಿ ಲಕ್ಷ್ಮೀಕಾಂತ ಸಂಘದ ಅಧ್ಯಕ್ಷರಾದ ಜಿ.ವಿ ಶಾಂತಾಬಾಯಿ ರವರ ಶ್ರೀ ಜಗನ್ನಾಥದಾಸರಿಂದ ವಿರಚಿತವಾದ ಶ್ರೀಹರಿಕಥಾಮೃತಸಾರ ತಾತ್ಪರ್ಯಾರ್ಥ : ಸ್ವಗತ ಸ್ವಾತಂತ್ರ್ಯ ಸಂಧಿ, ಸರ್ವಸ್ವಾತಂತ್ರ್ಯ ಸಂಧಿ, ಕರ್ಮ ವಿಮೋಚನ ಸಂಧಿ, ಗುಣತಾರತಮ್ಯ ಸಂಧಿ, ಬೃಹತ್ತಾರತಮ್ಯ ಸಂಧಿ ಸಕಲ ದುರಿತ ನಿವಾರಣ ಸಂಧಿ , ಸಿ.ಪಿ.ವೇದವತಿ ರವರ ಕಥಾಮೃತಧಾರೆ , ಡಾ.ಸುಮನಾ ಬದ್ರಿನಾಥ್ ರವರ 'ದಾಸಸಾಹಿತ್ಯದಲ್ಲಿ ಲಕ್ಷ್ಮಿ ತತ್ವ' ಮತ್ತು ಗೀತಾ ಕಶ್ಯಪ್ 'ಕವನ ಸಂಕಲನ' ರವರ ಪುಸ್ತಕ ಬಿಡುಗಡೆ ಮಾಡಿದ ಹಿರಿಯ ದಾಸಸಾಹಿತ್ಯ ವಿದ್ವಾಂಸ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಬದಲಾಗುತ್ತಿರುವ ಆಧುನಿಕ ಯುಗದ ಮನೋಧರ್ಮಕ್ಕೆ ಅನುಗುಣವಾಗಿ ಕನ್ನಡ ದಾಸಸಾಹಿತ್ಯದ ಅಧ್ಯಯನವು, ಚಿಂತನಶೀಲವಾಗಿ, ವೈಜ್ಞಾನಿಕ ವಿಶ್ಲೇಷಣೆಗಳೊಡನೆ ಹೊಸಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿದೆ. ಅನ್ವೇಷಣೆ, ಅವಿಷ್ಕಾರ, ಸಂಶೋಧನೆ, ಹೊಸದೃಷ್ಟಿ, ಅರ್ಥಪೂರ್ಣಬರಹದ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಅನಂತಪದ್ಮನಾಭ ರಾವ್ , ಡಾ ಸುಭಾಷ್ ಕಾಖಂಡಕಿ, ಕಲ್ಲಾಪುರ ಗುರುರಾಜಾಚಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭದಲ್ಲಿ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಕೆ.ಅಪ್ಪಣ್ಣಾಚಾರ್ಯರು ಅನುಗ್ರಹ ವಚನದಲ್ಲಿ ಸಾಹಿತ್ಯ, ಸಂಗೀತ, ಆಧ್ಯಾತ್ಮ ಮುಂತಾದ ನಾನಾ ಕ್ಷೇತ್ರಗಳಲ್ಲಿ ಅಪಾರ ಪ್ರಭಾವ ಬೀರಿರುವ ದಾಸಸಾಹಿತ್ಯ ಈಗಾಗಲೇ ಅತ್ಯಂತ ಜನಪ್ರಿಯ ಹಾಗು ಮಹತ್ವದ ಸಾಹಿತ್ಯವೆನಿಸಿಕೊಂಡಿದೆ. ಅದು ತನ್ನ ಸರಳತೆ, ಸಮಾಜಮುಖಿ, ಜನಸ್ನೇಹಿ ಸದ್ಬಾವನೆ, ಶುದ್ಧ ಸಾತ್ವಿಕ ದೈವಭಕ್ತಿ ಪ್ರಚೋದನೆ, ದೇಶೀಯತೆ ಹಾಗೂ ಗೇಯಗುಣಗಳಿಂದಾಗಿ ಪ್ರಸಿದ್ಧವಾಯಿತು. ಉತ್ತಮ ವಿಚಾರ, ಉನ್ನತ ಚಿಂತನೆಗಳನ್ನು ಜನಸಾಮಾನ್ಯರ ಆಡುಮಾತಿನಲ್ಲಿ ನೀಡಿ ಪ್ರಜಾಸಾಹಿತ್ಯವೆಂಬ ಹಿರಿಮೆಗೆ ಅದು ಪಾತ್ರವಾಯಿತು. ಕನ್ನಡ ಭಾಷೆಯನ್ನು ಸಮೃದ್ಧಗೊಳಿಸುತ್ತಾ ಶತಮಾನದಿಂದ ಶತಮಾನಕ್ಕೆ ತನ್ನ ಧಾರೆಯನ್ನು, ವೇಗವನ್ನು ಹೆಚ್ಚಿಸಿಕೊಳ್ಳುವಲ್ಲಿ ದಾಸಸಾಹಿತ್ಯವಾಹಿನಿ ಯಶಸ್ವಿಯಾಯಿತು ಎಂದು ತಿಳಿಸಿದರು
ಡಾ. ರಾಜಲಕ್ಷ್ಮಿ ಪಾರ್ಥಸಾರಥಿ , ಡಾ.ಕುಮುದಾ ಗೋವಿಂದರಾವ್ , ಡಾ. ರತ್ನ ಕೆ. ರಂಗನಾಥರಾವ್ , ಡಾ.ಶಾಂತಾ ರಘೋತ್ತಮಾಚಾರ್ , ಮಾಲತಿ ಮಾಧವಾಚಾರ್ ಮುಂತಾದ ಮಹಿಳಾ ಹರಿದಾಸಿಣಿಯರಿಗೆ ಸನ್ಮಾನ , ವಿಶೇಷ ಆಹ್ವಾನಿತರಾಗಿ ಕಲ್ಲಾಪುರ ಪವಮಾನಾಚಾರ್ , ಡಾ. ವಾಸುದೇವ ಅಗ್ನಿಹೋತ್ರಿ, ಡಾ.ಹ.ರಾ ನಾಗರಾಜ್, ಪ್ರೋ ರಾಮಚಂದ್ರ ಹೆಬ್ಬಣಿ, ಖ್ಯಾತ ಗಾಯಕ ಡಾ.ರಾಯಚೂರು ಶೇಷಗಿರಿದಾಸ , ಡಾ.ಪರಶುರಾಂ ಬೆಟಗೇರಿ, ಪ್ರಸನ್ನ ಭೂವರಹಾ ವಿಠಲದಾಸರು ಭಾಗವಹಿಸಿದ್ದರು.
ಸಂಜೆ ಡಾ. ವಿದ್ಯಾ ಕಸಬೆ ನೇತೃತ್ವ ಮತ್ತು ನಿರೂಪಣೆ ಸಹಿತ ನಡೆಸಿಕೊಡುವ 'ಗಿರಿಯಮ್ಮನವರ ಜೀವನ ಪರಿಚಯ'ನಂತರ ಡಾ.ವಾರುಣಿ ಜಯತೀರ್ಥರವರಿಂದ ದೇವಗಿರಿ ಲಕ್ಷ್ಮೀ ಕಾಂತ ಸಂಘದವರು ನಡೆಸಿದ ಸಾಹಿತ್ಯಕ- ಸಾಂಸ್ಕೃತಿಕ ಆಟಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿನಿಯೋಗ, ಶಾಂತಲಾ ನೃತ್ಯ ತಂಡದಿಂದ ಪುರಂದರ ನಮನ ನೃತ್ಯ ರೂಪಕ ಆಯೋಜಿಸಲಾಗಿತ್ತು.