ಗೌರಿ ಹತ್ಯೆ ಖಂಡಿಸಿ ಸೆ.12ರಂದು ಬೆಂಗಳೂರಲ್ಲಿ ಸಮಾವೇಶ
Recommended Video

ಬೆಂಗಳೂರು, ಸೆಪ್ಟೆಂಬರ್ 09 : ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಸೆಪ್ಟೆಂಬರ್ 12, ಮಂಗಳವಾರದಂದು ಬೆಂಗಳೂರಿನಲ್ಲಿ, ಗೌರಿ ಲಂಕೇಶ್ ಹತ್ಯಾವಿರೋಧಿ ವೇದಿಕೆಯಿಂದ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಗೌರಿ ಲಂಕೇಶ್ ಅವರು ಹತ್ಯೆಯಾಗಿ ನಾಲ್ಕು ದಿನಗಳಾಗುತ್ತ ಬಂದರೂ ಇನ್ನೂ ಕೊಲೆಗಡುಕರ ಸುಳಿವು ಸಿಕ್ಕಿಲ್ಲ. ಕೆಲವರು ಬಲಪಂಥೀಯರೇ ಈ ಕೃತ್ಯ ಎಸಗಿದ್ದು ಎನ್ನುತ್ತಿದ್ದರೆ, ಇಲ್ಲ ಇದು ನಕ್ಸಲೀಯರು ಗೌರಿ ವಿರುದ್ಧ ತೆಗೆದುಕೊಂಡಿರುವ ಪ್ರತೀಕಾರ ಎಂದು ನುಡಿಯುತ್ತಿದ್ದಾರೆ.

ಮೆರವಣಿಗೆ ಎಲ್ಲಿಂದ ಎಲ್ಲಿಯವರೆಗೆ : ಬೆಂಗಳೂರು ರೈಲ್ವೇ ನಿಲ್ದಾಣದಿಂದ ಬೆಳಿಗ್ಗೆ 10ಕ್ಕೆ ಸರಿಯಾಗಿ ಮೆರವಣಿಗೆ ಹೊರಡಲಿದೆ. ಸಮಾವೇಶ : ಸೆಂಟ್ರಲ್ ಕಾಲೇಜು ಆಟದ ಮೈದಾನ, ಫ್ರೀಡಂ ಪಾರ್ಕ್ ಹಿಂಭಾಗ 11 ಗಂಟೆಗೆ.
ಯಾರ್ಯಾರು ಪಾಲ್ಗೊಳ್ಳಲಿದ್ದಾರೆ : ದೇಶದ ಬೇರೆ ಬೇರೆ ಭಾಗಗಳಿಂದ ನೂರಾರು ಬರಹಗಾರರು, ಹಾಡುಗಾರರು, ರಂಗಕರ್ಮಿಗಳು, ಚಿತ್ರ ನಿರ್ದೇಶಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಪ್ರಜಾತಂತ್ರವಾದಿಗಳು ಬರಲಿದ್ದಾರೆ.
ಪ್ರತಿಭಟನಾಕಾರರಿಗೆ ವ್ಯಕ್ತಿಯೊಬ್ಬರು ಕೇಳಿರುವ ಪ್ರಶ್ನೆ : ನ್ಯಾಯಕ್ಕಾಗಿ ಹೋರಾಟ ನಿಜ, ಆದರೆ ಯಾರ ವಿರುದ್ದ ಖಚಿತಪಡಿಸಿ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾಮಾಜಿಕ ವ್ಯವಸ್ಥೆ, ಯಾರ ವಿರುದ್ದ, ಯಾವುದರ ವಿರುದ್ಧ, ಇದು ಸಹ ಎಲ್ಲದರಂತೆ ಗುರಿ ಇಲ್ಲದ ಹೋರಾಟವಾಗಬೇಕೆ. ದಯವಿಟ್ಟು ಖಚಿತಪಡಿಸಿ.
ಎತ್ತ ಸಾಗಿದೆ ತನಿಖೆ? : ಕರ್ನಾಟಕ ಸರಕಾರ ವಿಶೇಷ ತನಿಖಾ ದಳ ರಚಿಸಿದ್ದು, ಗೌರಿ ಮನೆ ಮತ್ತು ಕಚೇರಿಯಿಂದ ಅವರ ಮನೆಯವರೆಗಿದ್ದ ಸಿಸಿಟಿವಿಗಳ ಫುಟೇಜನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳದವರು ಬಂದು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಶಂಕಿತರ ವಿಚಾರಣೆ ನಡೆಸಿದ್ದರೂ ಇನ್ನೂ ಅಂತಹ ಯಶಸ್ಸು ಕಾಣಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಮತ್ತೆಲ್ಲೆಲ್ಲಿ ಪ್ರತಿಭಟನೆ? : ಈ ಪ್ರತಿಭಟನೆ ಬೆಂಗಳೂರಿನಲ್ಲಿ ಮಾತ್ರವಲ್ಲ, ಮಂಗಳೂರಿನಲ್ಲಿಯೂ ಅದೇ ದಿನ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ದಲಿತ-ದಮನಿತ ಸ್ವಾಭಿಮಾನ ಹೋರಾಟ ಸಮಿತಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ತಿಳಿಸಿದೆ. ಈ ಹೋರಾಟ ಸಮಿತಿ ಗೌರಿ ಹತ್ಯೆಯಲ್ಲಿ ಸಂಘ ಪರಿವಾರದವರ ಕೈವಾಡವಿರುವುದು ಖಚಿತ ಎಂದು ಹೇಳುತ್ತಿದೆ.












Click it and Unblock the Notifications