ಜನರ ಸಮಸ್ಯೆ ನಿವಾರಿಸಲು ಬಿಬಿಎಂಪಿ ಸಿಬ್ಬಂದಿಗೆ ವೃತ್ತಿಪರ ಕೌಶಲ್ಯ ತರಬೇತಿ!
ಬೆಂಗಳೂರು ಜೂ.13, ಖಾಸಗಿ ಕಂಪನಿಗಳು ನೌಕರರಿಗೆ ನೀಡುವ ವೃತ್ತಿಪರ ಕೌಶಲ್ಯ ತರಬೇತಿಯಂತೆ ಬಿಬಿಎಂಪಿ ಸಿಬ್ಬಂದಿಗೆ ವೃತ್ತಿಪರ ವರ್ತನೆ, ಪ್ರೇರಣೆ ಮತ್ತು ಕೌಶಲ್ಯ ಕುರಿತು ತರಬೇತಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದಾರೆ, "ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ಹಾಗೂ ವೃತ್ತಿಪರ ವರ್ತನೆ ಬಲಪಡಿಸಲು ನಮ್ಮ ಸಿಬ್ಬಂದಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಿದ್ದೇವೆ" ಎಂದು ಹೇಳಿದ್ದಾರೆ.
"ಕಾರ್ಪೋರೇಟ್ ಕ್ಷೇತ್ರದ ಸಿಬ್ಬಂದಿಗೆ ಆರು ತಿಂಗಳು ಇಲ್ಲವೇ ವರ್ಷಕ್ಕೊಮ್ಮೆಯಂತೆ ಇಂತಹ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಲ್ಲಿ ಸಹ ಗುಣಮಟ್ಟದ ಕೆಲಸ ಖಾತ್ರಿಪಡಿಸಿಕೊಳ್ಳಬೇಕಿದೆ. ಹೀಗಾಗಿ ಅವರಿಗೆ ಇಂತಹ ಕೌಶಲ್ಯಗಳ ಕಲಿಸುವುದು, ಆ ಬಗ್ಗೆ ತರಬೇತಿ ನೀಡುವುದು ಅವಶ್ಯಕವಾಗಿದೆ" ಎಂದು ತಿಳಿಸಿದ್ದಾರೆ.

"ಇದರಿಂದ ಸಾರ್ವಜನಿಕವಾಗಿ ಉತ್ತಮ ಸೇವೆ ನೀಡಲು, ಜನರೊಂದಿಗೆ ಸನ್ನಡತೆಯಿಂದ ವರ್ತಿಸಲು ಸಾಧ್ಯವಾಗುತ್ತದೆ. ಅನೇಕ ಐಎಎಸ್ ಅಧಿಕಾರಿಗಳು ಡೆಹರಾಡೋನ್ನಲ್ಲಿ ವೃತ್ತಿಪರ ಕೌಶಲ್ಯಗಳನ್ನು ಕಲಿತಿರುತ್ತಾರೆ. ಆದ್ದರಿಂದ ಅವರು ವೃತ್ತಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಎಂತದ್ದೇ ಸಂದರ್ಭ ಬಂದರು ಸಹ ನಿಭಾಯಿಸುತ್ತಾರೆ. ಜನರೊಂದಿಗೆ ಮಾತನಾಡಲು ಹಿಂಜರಿಯುವುದಿಲ್ಲ" ಎಂದರು.
ಇದೇ ರೀತಿಯ ಕೌಶಲ್ಯವನ್ನು ಲಕ್ಷಾಂತರ ಜನರಿಗೆ ವಿವಿಧ ವಿಭಾಗದ ಮೂಲಕ ಸೇವೆ ನೀಡುತ್ತಿರುವ ಬಿಬಿಎಂಪಿ ಸಿಬ್ಬಂದಿಗೆ ಕಲಿಸುವಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಯೋಜನೆ ರೂಪಿಸಿದ್ದಾರೆ. ಆದಷ್ಟು ಶೀಘ್ರವೇ ಕಾರ್ಯಕ್ರಮ ಆಯೋಜನೆ ಕುರಿತು ಆಯುಕ್ತರು ಘೋಷಣೆ ಮಾಡಲಿದ್ದಾರೆ.

ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು; ಸರ್ಕಾರಿ ಶಾಲೆ, ಆಸ್ತಿ ತೆರಿಗೆ, ಆಸ್ತಿ ನೋಂದಣಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಹಂತಗಳಲ್ಲಿ ಸಮಸ್ಯೆ ಉಂಟಾದಾಗ ಸಾರ್ವಜನಿಕರು ಬಿಬಿಎಂಪಿ ಕಚೇರಿಗೆ ಬರುತ್ತಾರೆ. ಇಲ್ಲವೇ ಸಹಾಯವಾಣಿಗೆ ಕರೆ ಮಾಡುತ್ತಾರೆ. ಆದಾಗಿಯೋ ಆಯಾ ವಿಭಾಗದ ಹಿರಿಯ ಅಧಿಕಾರಿಗಳು ಸರಿಯಾರಿ ಸ್ಪಂದಿಸಿರುವುದಿಲ್ಲ.
ಕೆಲವೊಮ್ಮ ಅತಿರೇಕದಿಂದಲೂ ವರ್ತಿಸಿರುವ ಉದಾಹರಣೆಗಳಿವೆ. ಇದರಿಂದ ಕಚೇರಿಗೆ ಅಗೌರವ ಉಂಟಾಗುತ್ತದೆ. ಹಾಗಾಗದಂತೆ ತಡೆಯಲು ಪಾಲಿಕೆ ಆಯುಕ್ತರು ಇಂತಹ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.












Click it and Unblock the Notifications