ಅಮ್ಮ ಬೈದಿದ್ದಕ್ಕೆ ನೊಂದು ನೇಣಿಗೆ ಶರಣಾದ ವಿದ್ಯಾರ್ಥಿನಿ
ಬೆಂಗಳೂರು, ಜುಲೈ 10: ಹೆತ್ತಮ್ಮನ ಬೈಗುಳ ಕೂಡಾ ಸಹಿಸದಷ್ಟು ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ನಡೆದಿದೆ.
ಕೆಂಪಾಪುರ ಬಳಿ ಇರುವ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ 23 ವರ್ಷ ವಯಸ್ಸಿನ ಸೋಫಿಯಾ ಅವರೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇತ್ತೀಚೆಗೆ ಸೋಫಿಯಾ ಅವರ ಅಮ್ಮ ಅವರು ಕಾಲೇಜಿನಲ್ಲಿ ಎಲ್ಲರ ಮುಂದೆ ಸೋಫಿಯಾಗೆ ಚೆನ್ನಾಗಿ ಬೈದಿದ್ದರು.

ಸೋಫಿಯಾ ಅವರ ಕಾಲೇಜಿನ ಶುಲ್ಕ ಕಟ್ಟಲು ಅವರ ತಾಯಿ ಬಂದಿದ್ದಾಗ ಸೋಫಿಯಾ ಸಿಕ್ಕಿರಲಿಲ್ಲ. ಇದರಿಂದ ಕೊಂಚ ಕೋಪಗೊಂಡಿದ್ದ ಸೋಫಿಯಾ ಅವರ ತಾಯಿ ಶನಿವಾರದಂದು ಮತ್ತೊಮ್ಮೆ ಕಾಲೇಜಿಗೆ ಬಂದು, ಮಗಳಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಸಹಪಾಠಿಗಳ ಮುಂದೆ ಬುದ್ಧಿಮಾತು ಹೇಳಿದ್ದಕ್ಕೆ ಸೋಫಿಯಾ ಮನನೊಂದುಕೊಂಡಿದ್ದರು.
ನಂತರ ತನ್ನ ಹಾಸ್ಟೆಲ್ ರೂಮಿಗೆ ತೆರಳಿದ ಸೋಫಿಯಾ ಕುಟುಂಬದ ಸಮಸ್ಯೆಗಳ ಬಗ್ಗೆ ಸುಮಾರು 8 ಪುಟಗಳ ಡೆತ್ ನೋಟ್ ಬರೆದಿಟ್ಟು, ಭಾನುವಾರದಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಮೃತಹಳ್ಳಿ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.












Click it and Unblock the Notifications