ಆರ್ಆರ್ ನಗರದಲ್ಲಿ ಶಾಂತಿಯುತ ಚುನಾವಣೆಗೆ ಸಿದ್ಧತೆ
ಬೆಂಗಳೂರು, ಮೇ 24: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಮೇ 28 ಸೋಮವಾರದಂದು ನಡೆಯಲಿರುವುದರಿಂದ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಟ್ಟು 421 ಮತಗಟ್ಟೆಗಳ ಪೈಕಿ 4 ಕಷ್ಟಕರ, 47 ಅತಿಸೂಕ್ಷ್ಮ ಮತ್ತು 186 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ನೀತಿ ಸಂಹಿತೆ ಉಲ್ಲಂಘನೆ ತಡೆಗೆ 9 ಎಂಸಿಸಿ ಮತ್ತು ಸಂಚಾರಿ ದಳ 14 ಎಸ್ಎಸ್ಟಿ ತಂಡ, 45 ಸಬ್ ಸೆಕ್ಟರ್ ಮ್ಯಾಜಿಸ್ಟ್ರೇಟ್ ಅಧಿಕಾರಿಗಳ ತಂಡ, 2 ವಿಎಸ್ಟಿ ಒಂದು ವಿವಿಐಟಿ ತಂಡವನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎಂ. ಮಹೇಶ್ವರ್ ರಾವ್ ತಿಳಿಸಿದ್ದಾರೆ.
100 ಮಂದಿ ಮತಗಟ್ಟೆ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಮತ ದಾರರಿಗೆ ಆಮಿಷವೊಡ್ಡುತ್ತಿರುವ ದೂರುಗಳ ಪರಿಶೀಲನೆಗೆ ವಿಶೇಷ ತಂಡಗಳನ್ನು ನೇಮಿಸಲಾಗಿದೆ. 20 ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ಕ್ಯಾಸ್ಟಿಂಗ್ ಅಳವಡಿಸಲಾಗುವುದು.

ಪ್ರತಿ ಮತಗಟ್ಟೆಗೆ ವಿಡಿಯೋಗ್ರಾಫರ್ಗಳನ್ನು ನಿಯೋಜಿಸಲಾಗುತ್ತದೆ. ಇಲ್ಲಿ ಮಾರ್ಕ್ 3 ಇವಿಎಂ, ವಿವಿಪ್ಯಾಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಮೇ 31ರಂದು ಹಲವಡೇರಹಳ್ಳಿಯಲ್ಲಿನ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 2524 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ 83 ಬಸ್ಗಳನ್ನು ಬಾಡಿಗೆ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಶಕ್ಕೆ ಪಡೆಯಲಾಗಿದ್ದ ಚುನಾವಣಾ ಗುರುತಿನ ಚೀಟಿಗಳನ್ನು ಸಂಬಂಧಪಟ್ಟ ಮತದಾರರಿಗೆ ಹಿಂದಿರುಗಿಸಲಾಗುತ್ತದೆ. ಗುರುತಿನ ಚೀಟಿ ನಾಪತ್ತೆ ಬಗ್ಗೆ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತುವಿದಲ್ಲ. ಮತದಾರರು ಅಥವಾ ಅವರ ಸಂಬಂಧಿಗಳೇ ನಾಪತ್ತೆ ಕುರಿತು ಸ್ವತಃ ಹೇಳಿಕೆ ಬರೆದುಕೊಟ್ಟು ಸಹಿ ಮಾಡಬೇಕು, ಅಗತ್ಯ ಬಿದ್ದರೆ ಈ ದಾಖಲೆಯನ್ನು ಚಿತ್ರೀಕರಣ ಮಾಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಆರ್ಆರ್ ನಗರ ವಿಧಾನಸಭಾ ಕೇತ್ರದ ವ್ಯಾಪ್ತಿಯಲ್ಲಿ ಬರುವ ಜಾಲಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮತದಾರರ ಚೀಟಿ ಮತ್ತೆಯಾಗಿತ್ತು. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ನಂತರ ಅವರಿಗೆ ಬೇಲ್ ಕೂಡ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು.











Click it and Unblock the Notifications