ಸಿಂಗಪುರಕ್ಕೆ ಹೊರಟ ಮೊದಲ ಪೌರ ಕಾರ್ಮಿಕ ತಂಡ
ಬೆಂಗಳೂರು, ಜುಲೈ 04 : ರಸ್ತೆ ಧೂಳು ಗುಡಿಸಿ ಸಾಗಿಸುತ್ತಿದ್ದ ಬದುಕು ಪೌರಕಾರ್ಮಿಕರಿಗೆ 'ವಿದೇಶ ಪ್ರವಾಸ ಭಾಗ್ಯ' ಒಲಿದು ಬಂದಿದೆ. ಇಂದು (ಸೋಮವಾರ) 40 ಮಂದಿ ಪೌರ ಕಾಂರ್ಮಿಕರು ಸಿಂಗಪುರ ಪ್ರವಾಸಕ್ಕೆ ವಿಮಾನ ಏರಿದರು.
ಘನತ್ಯಾಜ್ಯ ನಿರ್ವಹಣೆ, ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡುವ ಸಂಬಂಧ ಸರ್ಕಾರ ರೂಪಿಸಿರುವ ಪೌರಕಾರ್ಮಿಕರ ಅಧ್ಯಯನ ಪ್ರವಾಸದಡಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದರು.
ಈ ವರ್ಷದಲ್ಲಿ ಒಟ್ಟು 1 ಸಾವಿರ ಪೌರ ಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ 40 ಜನ ಕಾರ್ಮಿಕರನ್ನು ಸೋಮವಾರ ವಿಕಾಸಸೌಧದಲ್ಲಿ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಬೀಳ್ಕೊಟ್ಟರು.
ತಲಾ 75 ಸಾವಿರ ರು.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದ್ದು, ಪ್ರವಾಸ ಸಂದರ್ಭದ ಸ್ವಂತ ಖರ್ಚಿಗಾಗಿ ತಲಾ 5 ಸಾವಿರ ರು.ಗಳನ್ನೂ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಮಾರ್ಗದರ್ಶನಕ್ಕಾಗಿ ತಂಡದೊಂದಿಗೆ ಇಬ್ಬರು ಅಧಿಕಾರಿಗಳನ್ನೂ ಕಳಿಸಲಾಗಿದೆ.
ಸಿಂಗಪುರಕ್ಕೆ ಹೊರಟ ಮೊದಲ ತಂಡದಲ್ಲಿ 37 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಿದ್ದಾರೆ. ಸಿಂಗಪುರದಲ್ಲಿರುವ ವಿಯೋಲಾ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಲಿರುವ ಪೌರಕಾರ್ಮಿಕರ ತಂಡ ಘನತ್ಯಾಜ ಸಂಗ್ರಹ ಮತ್ತು ಸಂಸ್ಕರಣೆ ಬಗ್ಗೆ ಅಧ್ಯಯನ ನಡೆಸಲಿದೆ.