ಬೆಂಗಳೂರಿನ ರಸ್ತೆ ಗುಂಡಿ ವಿಚಾರ: ಪ್ರಧಾನ ಇಂಜಿನಿಯರ್ ಬೇಷರತ್ ಕ್ಷಮೆಯಾಚನೆ
ಬೆಂಗಳೂರು, ಫೆಬ್ರವರಿ 17: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಪಾಲಿಕೆಯ ಪ್ರಧಾನ ಇಂಜಿನಿಯರ್ ಕೆ. ಪ್ರಭಾಕರ್ ಗುರುವಾರ ಖುದ್ದು ಹಾಜರಾಗಿ ಬೇಷರತ್ ಕ್ಷಮೆ ಯಾಚಿಸಿದರು. ಅವರ ಕ್ಷಮೆಯನ್ನು ಒಪ್ಪುವ ಮೊದಲು ನ್ಯಾಯಪೀಠ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
ಕೊನೆಯ ನ್ಯಾಯಪೀಠ ಸುದೀರ್ಘ ಬಾಳಿಕೆಯ ರಸ್ತೆಗಳನ್ನು ನಿರ್ಮಿಸದಿದ್ದರೆ ರಸ್ತೆ ನಿರ್ವಹಣೆ ಹೊಣೆಯನ್ನು ಮಿಲಿಟರಿಗೆ ವಹಿಸುವುದಾಗಿ ಎಚ್ಚರಿಕೆ ನೀಡಿತು.
ಬೆಂಗಳೂರಿನ ರಸ್ತೆ ದುಃಸ್ಥಿತಿ ಕುರಿತು ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಪಿಐಎಲ್ಗಳು ಸಿಜೆ ರಿತುರಾತ್ ಅವಸ್ಥಿ ಅವರಿದ್ದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.
ರಸ್ತೆ ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚಬೇಕು ಎಂದು ಸೂಚಿಸಿದ ನ್ಯಾಯಪೀಠ ಆ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಿ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು.

ಇಂಜಿನಿಯರ್ಗೆ ಕ್ಲಾಸ್: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿರುವುದು ಗೊತ್ತಿದೆಯೇ? ನಿಮ್ಮ ಇಂಜಿನಿಯರ್ಗಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಸ್ತೆ ಗುಂಡಿ ಸಮಸ್ಯೆ ಸರಿಪಡಿಸಲು ಏನು ಕ್ರಮ ಕೈಗೊಂಡಿದ್ದೀರಿ? ಜೈಲಿಗೆ ಕಳುಹಿಸದೇ ನಿಮಗೆ ಕರುಣೆ ತೋರಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿತು.
ನ್ಯಾಯಾಲಯದ ಆದೇಶವಿದ್ದರೂ ಏಕೆ ಕಳೆದ ಬಾರಿ ವಿಚಾರಣೆಗೆ ಹಾಜರಾಗಲಿಲ್ಲ, ಸ್ವಲ್ಪ ಕರುಣೆ ತೋರಿ ಜಾಮೀನು ಸಹಿತ ವಾರೆಂಟ್ ಹೊರಡಿಸಿದ್ದೆವು, ಇಲ್ಲವಾದರೆ ನೇರ ಜೈಲಿಗೆ ಹೋಗಬೇಕಾಗಿತ್ತು. ಏಕೆ ನೀವು ಕೋರ್ಟ್ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು.
ಇಂಜಿನಿಯರ್ ಅನಾರೋಗ್ಯದ ಕಾರಣ ನೀಡಿದ್ದಕ್ಕೆ, ಕೋರ್ಟ್ಗೆ ಮಾಹಿತಿ ನೀಡಿ ಮೊದಲೇ ವಿನಾಯ್ತಿಗೆ ಅರ್ಜಿ ಸಲ್ಲಿಸಬೇಕಿತ್ತು ಅಲ್ಲವೇ ಎಂದು ಕೇಳಿತು.
ಬಿಬಿಎಂಪಿ ಪರ ವಕೀಲರು, ರಸ್ತೆಗಳ ದುರಸ್ತಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪೈಥಾನ್ ಯಂತ್ರ ಬಳಸಲು ಟೆಂಡರ್ ಕರೆಯಲಾಗಿದೆ. 20 ವರ್ಷ ಬಾಳಿಕೆಯ ರಸ್ತೆಗಳನ್ನು ನಿರ್ಮಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಕಾಮಗಾರಿ ನಡೆಯುತ್ತಿದೆ ಎಂದರು.
''ನಿಮ್ಮ ಅಧೀನ ಇಂಜಿನಿಯರ್ಗಳೇ ಸಮಸ್ಯೆ ಸೃಷ್ಟಿಸಿದ್ದಾರೆ. ಬಾಳಿಕೆ ಬರುವಂತೆ ರಸ್ತೆ ದುರಸ್ತಿ ಮಾಡಬೇಕು. ದುರಸ್ತಿಯಾದ ರಸ್ತೆಗಳ ಪರಿಶೀಲನೆ ನಡೆಸುತ್ತೇವೆ. ರಸ್ತೆ ಗುಂಡಿಗಳಿಂದ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಸ್ತೆ ನಿರ್ವಹಣೆ ಹೊಣೆಯನ್ನು ಮಿಲಿಟರಿ ಇಂಜಿನಿಯರ್ಗಳಿಗೆ ನೀಡುತ್ತೇವೆ,'' ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
ಕೋಟ್ಯಂತರ ರೂ. ವ್ಯಯ: ಅರ್ಜಿದಾರರ ಪರ ವಕೀಲರು, ಪ್ರತಿ ವರ್ಷ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಾವಿರಾರು ಕೋಟಿ ರೂ. ಗಳನ್ನು ಪಾಲಿಕೆ ವ್ಯಯ ಮಾಡುತ್ತಿದೆ, ಆದರೂ ಸಹ ಗುಂಡಿಗಳು ಹಾಗೆಯೇ ಇವೆ. ಸರ್ಕಾರ ಕಳೆದ ವರ್ಷ 1500 ಕೋಟಿ ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಬಿಡುಗಡೆ ಮಾಡಿದೆ ಎಂದರು.
ಅದಕ್ಕೆ ಉತ್ತರಿಸಿದ ಪಾಲಿಕೆ ವಕೀಲರು, ಬೆಂಗಳೂರು ನಗರದ ಕೇಂದ್ರ ಭಾಗ (ಸಿಬಿಡಿ) ಯಲ್ಲಿ ಬಹುತೇಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಹೊಸದಾಗಿ ಪಾಲಿಕೆಗೆ ಸೇರ್ಪಡೆಯಾಗಿರುವ 110 ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆಗಳನ್ನೂ ಇನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ, ಎಷ್ಟೊ ಕಡೆ ರಸ್ತೆಗಳೇ ಇಲ್ಲ. ಸರ್ಕಾರ ಹಣ ನೀಡಿರುವುದು ಹೊರವಲಯದ ರಸ್ತೆಗಳ ಅಭಿವೃದ್ಧಿಗೆ. ಆದರೂ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಪಾಲಿಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿ, ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿದರು.
ಬೆಂಗಳೂರಿನ ರಸ್ತೆ ದುಸ್ಥಿತಿ ಸಂಬಂಧ 2015ರಲ್ಲಿ ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ವಿಭಾಗೀಯಪೀಠ ನಡೆಸಿದ ವಿಚಾರಣೆ ಇದಾಗಿದೆ.












Click it and Unblock the Notifications