ತಾನೇ ಬಾಂಬ್ ಇಟ್ಟಿದ್ದ ಮಂಗಳೂರು ವಿಮಾನ ನಿಲ್ದಾಣದತ್ತ ಆದಿತ್ಯ ರಾವ್
ಬೆಂಗಳೂರು, ಜನವರಿ 22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಆದಿತ್ಯ ರಾವ್ ಅನ್ನು ಬೆಂಗಳೂರು ಪೊಲೀಸರು ಮಂಗಳೂರಿನತ್ತ ವಿಮಾನದಲ್ಲಿ ಕರೆದೊಯ್ಯುತ್ತಿದ್ದಾರೆ.
Recommended Video
ಬಾಂಬ್ ಇಟ್ಟಿದ್ದು ನಾನೇ ಎಂದು ಸ್ವತಃ ಆದಿತ್ಯ ರಾವ್ ಇಂದು ಬೆಳಿಗ್ಗೆ ಪೊಲೀಸ್ ಮಹಾನಿರ್ದೇಶಕರ ಮನೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಆತನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವೈದ್ಯಕೀಯ ತಪಾಸಣೆ ಎಲ್ಲ ಮುಗಿಸಿ ಆದಿತ್ಯ ರಾವ್ ಅನ್ನು ಆರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ನ್ಯಾಯಾಲಯವು ಆದಿತ್ಯ ರಾವ್ ಅನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿದೆ.

ಟ್ರಾನ್ಸಿಟ್ ವಾರೆಂಟ್ ನೀಡಲಾಗಿದ್ದು, ಆದಿತ್ಯ ರಾವ್ ಅನ್ನು ವಿಮಾನದ ಮೂಲಕ ಮಂಗಳೂರಿಗೆ ಕರೆದೊಯ್ಯಲಾಗುತ್ತದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆದಿತ್ಯ ರಾವ್ ಮಂಗಳೂರು ತಲುಪಲಿದ್ದಾನೆ. ಆತನೊಂದಿಗೆ ಇಬ್ಬರು ಪೊಲೀಸರು ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ.
ಆದಿತ್ಯ ರಾವ್ ಅನ್ನು ನಾಳೆ ಮಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆರನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಸೂಚಿಸಿದ್ದಾರೆ.
ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20 ರಂದು ಅಪರಿಚಿತ ವ್ಯಕ್ತಿ ಬಾಂಬ್ ಇಟ್ಟಿದ್ದ, ನಂತರ ಅದನ್ನು ಪೊಲೀಸರು ಸುರಕ್ಷಿತವಾಗಿ ಸ್ಫೋಟಿಸಿದರು. ಈ ಬಗ್ಗೆ ತನಿಖೆ ನಡೆಸಿ ಶಂಕಿತನ ಚಿತ್ರ ಬಿಡುಗಡೆ ಮಾಡಲಾಗುತ್ತು. ಕೊನೆಗೆ ಇಂದು ಆದಿತ್ಯ ರಾವ್ ತಾನೇ ಬಾಂಬ್ ಇಟ್ಟಿರುವುದಾಗಿ ಶರಣಾಗಿದ್ದಾನೆ.
ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಬಿಇ, ಎಂಬಿಎ ಪದವಿ ಮಾಡಿರುವ ಆದಿತ್ಯ ರಾವ್ ಈ ಹಿಂದೆಯೂ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಕರೆ ಮಾಡಿ ಪೊಲೀಸರ ಅತಿಥಿ ಆಗಿದ್ದ.












Click it and Unblock the Notifications