Loka Spandana: ವಾಟ್ಸಾಪ್ ಡಿಪಿಗೆ ಫೋಟೋ ಬದಲು ಲೋಕ ಸ್ಪಂದನ ಕ್ಯೂಆರ್ ಕೋಡ್ ಬಳಸಿ, ಪೊಲೀಸರಿಗೆ ಸೂಚನೆ!
"ನಿಮ್ಮ ಮಾತು, ನಮ್ಮ ನಡೆ" ಎಂಬ ಅಡಿಬರಹದೊಂದಿಗೆ 'ಲೋಕ ಸ್ಪಂದನ' ಹೆಸರಿನಡಿಯಲ್ಲಿ ಕ್ಯೂರ್ ಕೋಡ್ ಮಾಡಲಾಗಿದೆ.
ಬೆಂಗಳೂರು, ಫೆಬ್ರವರಿ. 23: ಸಿಲಿಕಾನ್ ಸಿಟಿ ಪೊಲೀಸರು ಜನಸ್ನೇಹಿಯಾಗಲು ಒಂದಲ್ಲ ಒಂದು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇಂತಹದೆ ಒಂದು ಹೆಜ್ಜೆ ಮುಂದಿಟ್ಟಿರುವ ಆಗ್ನೇಯ ವಿಭಾಗವು ದೂರುದಾರರು ಸುಲಭವಾಗಿ ದೂರು ನೀಡುವಂತೆ ಮಾಡಲು ಕ್ಯೂಆರ್ ಕೋಡ್ ನೀಡಿದ್ದಾರೆ. ಈ ಮೂಲಕ ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸಿ ವಿಷಯ ತಲುಪಿಸಬಹುದಾಗಿದೆ.
ಈ ಬಗ್ಗೆ ಡಿಸಿಪಿ ಸಿಕೆ ಬಾಬಾ ಅವರು, ಆಗ್ನೇಯ ವಿಭಾಗ ಪೊಲೀಸರು ತಮ್ಮ ಅಧಿಕೃತ ಸರ್ಕಾರಿ ಸಂಖ್ಯೆಯ ವಾಟ್ಸಾಪ್ ಡಿಪಿಗೆ ತಮ್ಮ ಫೋಟೋವನ್ನು ಹಾಕುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಇದರ ಬದಲು ವಾಟ್ಸಾಪ್ ಡಿಪಿಗೆ ಲೋಕ ಸ್ಪಂದನ ಕ್ಯೂಆರ್ ಕೋಡ್ ಬಳಸಬೇಕು. ಮೊಬೈಲ್ಗೆ ಕರೆ ಬಂದರು ಅದನ್ನು ರಿಸೀವ್ ಮಾಡಿಲ್ಲ ಅಂದ್ರೆ ಸಮಸ್ಯೆಗೆ ಒಳಗಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ " ಕೆಲಸದಲ್ಲಿ ಪಾರದರ್ಶಕತೆ ತರಲು ಮತ್ತು ಅಧಿಕಾರಿಗಳ ದಕ್ಷತೆಯನ್ನು ಸುಧಾರಿಸಲು ಈ ವ್ಯವಸ್ಥೆ ಮಾಡಲಾಗಿದೆ. ನಾವು ಜನರ ಟೀಕೆಗಳು ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಕಳುಹಿಸುವ ಆಲೋಚನೆಯೂ ಈ ಕ್ರಮದ ಹಿಂದೆ ಇದೆ" ಎಂದು ತಿಳಿಸಿದ್ದಾರೆ.
"ನಿಮ್ಮ ಮಾತು, ನಮ್ಮ ನಡೆ" ಎಂಬ ಅಡಿಬರಹದೊಂದಿಗೆ 'ಲೋಕ ಸ್ಪಂದನ' ಹೆಸರಿನಡಿಯಲ್ಲಿ ಕ್ಯೂರ್ ಕೋಡ್ ಮಾಡಲಾಗಿದೆ. ಇದರಲ್ಲಿ ಸಂದೇಶ ಕಳುಹಿಸಿದರೆ ನೇರವಾಗಿ ಡಿಸಿಪಿಗೆ ತಲುಪಲಿದೆ. ಬಳಕೆದಾರರು ಕೋಡ್ ಅನ್ನು ಸ್ಕ್ಯಾನ್ ಮಾಡಿ, ಪೊಲೀಸರು ತಮ್ಮ ಕರೆಯನ್ನು ಸ್ವೀಕರಿಸದಿದ್ದರೇ, ಫೋನ್ ಸ್ವೀಕರಿಸದ ಆಯ್ಕೆಯನ್ನು ಕ್ಲಿಕ್ ಮಾಡಿ ಅದು ಮುಂದಿನ ಕ್ರಮಕ್ಕಾಗಿ ಡಿಸಿಪಿಗೆ ತಲುಪಲಿದೆ.
ಜನರು ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಮತ್ತು ದೂರು ನೀಡಬಹುದು, ಅದು ಡಿಸಿಪಿಗೆ ತಲುಪುತ್ತದೆ. ಮೊದಲು, ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಪೊಲೀಸ್ ಠಾಣೆಗಳಿಗೆ ಹೋಗಬೇಕಾಗಿತ್ತು, ಆದರೆ ಈಗ ಡಿಪಿಯಲ್ಲಿರುವ ಕೋಡ್ ಅನ್ನು ಸ್ಕಾನ್ ಮಾಡಿದರೂ ತಮ್ಮ ಕುಂದುಕೊರತೆಗಳು ಮತ್ತು ದೂರುಗಳನ್ನು ಬರೆಯಬಹುದು. ಜೊತೆಗೆ ತಮ್ಮ ವಿಭಾಗದ ಡಿಸಿಪಿಗೆ ನೇರವಾಗಿ ದೂರು ನೀಡಬಹುದು.
ಈ ವೇದಿಕೆಗಳಿಂದ ಬಂದಿರುವ ದೂರನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.












Click it and Unblock the Notifications