ವಾಹನ ತಡೆದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ
ಬೆಂಗಳೂರು, ಜುಲೈ 17: ನಿಯಮ ಉಲ್ಲಂಘನೆ ಮಾಡದ ಹೊರತು ವಾಹನಗಳ್ನು ಸಂಚಾರಿ ಪೊಲೀಸರು ನಿಲ್ಲಿಸಬಾರದು ಎನ್ನುವ ಕಾನೂನು ಜಾರಿಯಾಗಿದೆ. ಆದರೂ ನಗರದ ಕೆಲವೆಡೆ ಸಂಚಾರಿ ಪೊಲೀಸರು ವಾಹನಗಳನ್ನು ಅಡ್ಡಗಟ್ಟುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂಚಾರಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದು, ನಿಯಮ ಉಲ್ಲಂಘಿಸದ ಹೊರತು ವಾಹನ ನಿಲ್ಲಿಸದಂತೆ ತಾಕೀತು ಮಾಡಿದ್ದಾರೆ.
ನಿಯಮ ಜಾರಿಯಾದ ಬಳಿಕವೂ ಪೊಲೀಸರು ವಾಹನ ನಿಲ್ಲಿಸುತ್ತಿರುವ ಬಗ್ಗೆ ಟ್ವಿಟರ್ ಬಳಕೆದಾರರು ದೂರಿದ್ದರು. ಇದನ್ನು ಗಮನಿಸಿದ ಪ್ರತಾಪ್ ರೆಡ್ಡಿ ಸೂಚನೆ ನೀಡಿದ್ದಾರೆ. ಒಂದು ವೇಳೆ ಅನಗತ್ಯವಾಗಿ ವಾಹನ ತಡೆದರೆ ಅಂತಹ ಪೊಲೀಸರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ರಾಹುಲ್ ಪೂಜಾರಿ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಟ್ರಾಫಿಕ್ ಪೊಲೀಸ್ ಚಿತ್ರವನ್ನು ಹಂಚಿಕೊಂಡು, "ಯಾವುದೇ ಸಂಚಾರ ಉಲ್ಲಂಘನೆಗಳಿಲ್ಲದಿದ್ದರೂ ಸಹ ಬೆಳ್ಳಂದೂರಿನ ಇಕೋ ಸ್ಪೇಸ್ನಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ದಯಮಾಡಿ ಇದರ ಬಗ್ಗೆ ಗಮನ ಹರಿಸಿ" ಎಂದು ಡಿಜಿಪಿ, ಹೆಚ್ಎಸ್ಆರ್ ಲೇ ಔಟ್ ಟ್ರಾಫಿಕ್ ಪೊಲೀಸ್, ಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು.
@DCPTrEastBCP, the traffic cop is identifiable with a body worn camera. Get this verified right away. @blrcitytraffic reiterate, no vehicle stops for document checking. Violators among our staff will be penalised. @rahulamin08 share date & time of the picture, if possible
— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr) July 16, 2022
ದೂರಿಗೆ ಸ್ಪಂದಿಸಿದ ಪ್ರತಾಪ್ ರೆಡ್ಡಿ; ಟ್ವಿಟರ್ ಬಳಕೆದಾರರ ದೂರಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಬೆಂಗಳೂರಿನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ,"ಟ್ರಾಫಿಕ್ ಪೋಲೀಸ್ ಯಾರೆಂದು ಧರಿಸಿರುವ ಕ್ಯಾಮರಾದಿಂದ ಗುರುತಿಸಬಹುದಾಗಿದೆ. ಇದನ್ನು ತಕ್ಷಣವೇ ಪರಿಶೀಲಿಸಿಕೊಳ್ಳಿ" ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ಅವರಿಗೆ ಸೂಚನೆ ನೀಡಿದ್ದಾರೆ.
"ದಾಖಲೆ ತಪಾಸಣೆಗಾಗಿ ಯಾವುದೇ ವಾಹನ ನಿಲ್ಲಿಸುವಂತಿಲ್ಲ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರ ಪರವಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ನಿಯಮ ಮೀರಿ ವಾಹನ ನಿಲುಗಡೆ ಮಾಡುವ ಪೊಲೀಸರಿಗೆ ದಂಡ ವಿಧಿಸಲಾಗುತ್ತದೆ. ಸಾಧ್ಯವಾದರೆ ಚಿತ್ರ ತೆಗೆದಿರುವ ದಿನಾಂಕ ಮತ್ತು ಸಮಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ" ಎಂದು ದೂರು ನೀಡಿದ ಟ್ವಿಟರ್ ಬಳಕೆದಾರರನ್ನು ಬೆಂಗಳೂರಿನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಕೇಳಿದ್ದಾರೆ.
Vehicles were stopped at Eco space Belandur even though there were no traffic violation. Kindly have a look into this. @DgpKarnataka @hsrltrafficps @blrcitytraffic @BlrCityPolice pic.twitter.com/nZXT3F0Wrx
— Rahul poojary Amin (@rahulamin08) July 15, 2022
ವಾಹನ ತಡೆದ ಪೊಲೀಸ್ ವಿರುದ್ಧ ಕ್ರಮ; ಜಂಟಿ ಪೊಲೀಸ್ ಆಯುಕ್ತ ಬಿ. ಆರ್. ರವಿಕಾಂತೇ ಗೌಡ, ಪರಿಶೀಲನೆಯ ನಂತರ ವಾಹನ ತಡೆದ ಪೊಲೀಸರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
"ದೂರನ್ನು ಪರಿಶೀಲಿಸಲಾಗಿದೆ. ದೇಹ ಧರಿಸಿರುವ ಕ್ಯಾಮೆರಾ ರೆಕಾರ್ಡಿಂಗ್ ಮೋಡ್ನಲ್ಲಿ ಇರಲಿಲ್ಲ. ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಪರಿಶೀಲನೆಗೆ ಯಾವ ವಾಹನವನ್ನೂ ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಲಾಗಿದೆ," ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜೂನ್ 27 ರಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್, ಸಂಚಾರ ಉಲ್ಲಂಘನೆಯನ್ನು ಗುರುತಿಸದ ಹೊರತು ನಿಯಮಿತ ತಪಾಸಣೆಗಾಗಿ ಯಾವುದೇ ವಾಹನವನ್ನು ನಿಲ್ಲಿಸಲಾಗುವುದಿಲ್ಲ ಎಂದು ಹೇಳಿದರು.
ದಾಖಲೆ ಪರಿಶೀಲನೆಯ ಹೆಸರಿನಲ್ಲಿ ಟ್ರಾಫಿಕ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಹಲವು ದೂರುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.