ಬೆಂಗಳೂರು ನಗರಕ್ಕೆ ಸಿಹಿಸುದ್ದಿ ಕೊಟ್ಟ ರೈಲ್ವೆ ಸಚಿವರು
ಬೆಂಗಳೂರು, ಫೆಬ್ರವರಿ 18; ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಬೆಂಗಳೂರು ನಗರಕ್ಕೆ ಸಿಹಿಸುದ್ದಿ ನೀಡಿದ್ದಾರೆ. ಉದ್ಘಾಟನೆಗೆ ಸಿದ್ಧವಾಗಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನ ಸುಂದರ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯನ್ನು ಹೋಲುವಂತೆ ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು, ನಗರದ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ.
ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಈ ಟರ್ಮಿನಲ್ ನಿರ್ಮಿಸಲಾಗಿದ್ದು, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ಹೆಸರಿಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಂತೆ ಕಾಣುವ ಟರ್ಮಿನಲ್ ರಾತ್ರಿ ವಿದ್ಯುತ್ ಬೆಳಕಲ್ಲಿ ಜನರನ್ನು ಆಕರ್ಷಿಸುತ್ತಿದೆ.

ಮುಂದೆ ಉದ್ಘಾಟನೆಯಾಗಲಿರುವ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನ ನೋಟ ಹೀಗಿದೆ ನೋಡಿ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಗುರುವಾರ ಟ್ವೀಟ್ ಮಾಡಿದ್ದಾರೆ.
ಈ ಟರ್ಮಿನಲ್ ಏಳು ಪ್ಲಾಟ್ ಫಾರಂಗಳನ್ನು ಹೊಂದಿದೆ. ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಹೀಗೆ ಪ್ರತ್ಯೇಕ ಪಥಗಳನ್ನು ಮಾಡಲಾಗಿದೆ. ಮಳೆ ಬಂದರೂ ಸೋರದಂತೆ ಆಕರ್ಷಕ ವಿನ್ಯಾಸದಲ್ಲಿ ಟರ್ಮಿನಲ್ ರೂಪಗೊಂಡಿದೆ.
Have a glimpse of the upcoming Sir M. Visvesvaraya Terminal in Bengaluru, Karnataka, equipped with state-of-the-art facilities.
— Piyush Goyal (@PiyushGoyal) February 18, 2021
View on Koo: https://t.co/NrovriSqi0 pic.twitter.com/pRwu2zG38O
ಚಿಟ್ಟೆಯ ಆಕಾರದಲ್ಲಿ ನಿರ್ಮಾಣಗೊಂಡಿರುವ ಟರ್ಮಿನಲ್ನಲ್ಲಿ ಎಲ್ಲಾ ಪ್ಲಾಟ್ ಫಾರಂಗಳು 15 ಮೀಟರ್ ಅಗಲ, 600 ಮೀಟರ್ ಉದ್ದವಿದೆ. ಪ್ಲಾಟ್ ಫಾರಂಗಳಿಗೆ ಎಲ್ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಬಿಟ್ಟರೆ ಅತಿ ಹೆಚ್ಚು ಜನಸಂದಣಿ ಇರುವ ನಿಲ್ದಾಣ ಬೈಯಪ್ಪನಹಳ್ಳಿಯಾಗಿದೆ.
ಈ ಟರ್ಮಿನಲ್ ಉದ್ಘಾಟನೆಗೊಂಡ ಬಳಿಕ ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ, ಹುಬ್ಬಳ್ಳಿ ಕಡೆಗೆ ಸಾಗುವ ರೈಲುಗಳು ಇಲ್ಲಿಂದಲೇ ಕಾರ್ಯಾಚರಣೆ ನಡೆಸಲಿವೆ. ಸುಮಾರು 240 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.












Click it and Unblock the Notifications